ಸರಕಾರದ ಕೃಪಾಕಟಾಕ್ಷದಲ್ಲಿ ಕ್ರಿಮಿನಲ್ ಆರೋಪಿಗಳು!

Update: 2020-06-11 19:30 GMT

 ಭಾಗ-1

ಮೋದಿ ಸರಕಾರದ ನಿರ್ದಿಷ್ಟ ಕ್ರಮ ಅಥವಾ ನೀತಿಗಳ ವಿರುದ್ಧ ದೇಶದ ವಿವಿಧೆಡೆ ಧ್ವನಿ ಎತ್ತುವ ವಿದ್ಯಾರ್ಥಿಗಳು ಹಾಗೂ ಹೋರಾಟಗಾರರನ್ನು ಜೈಲಿಗಟ್ಟುವುದು ದೇಶದ ಸದ್ಯದ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಇಂತಹ ವ್ಯಕ್ತಿಗಳ ಮೇಲೆ ತೀರಾ ಸಣ್ಣ ಆರೋಪಗಳಿಗೂ ಪ್ರಕರಣ ದಾಖಲಿಸಲಾಗುತ್ತದೆ.

ಅಸ್ಸಾಮಿನಲ್ಲಿ ರೈತ ಹಕ್ಕು ಗುಂಪು ಕೃಷಕ್ ಮುಕ್ತಿ ಸಂಗ್ರಾಮ ಸಮಿತಿಯ ಅಗ್ರ ನಾಯಕರ ಮೇಲೆ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಹೋರಾಟ ಸಂಘಟಿಸಿದ ಕಾರಣಕ್ಕೆ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ. ಹಲವು ತಿಂಗಳ ಸೆರೆವಾಸದ ಬಳಿಕ ಈ ಮುಖಂಡರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಳೆದ ವಾರ ಆರೋಪಪಟ್ಟಿ ಸಲ್ಲಿಸಿದೆ. ಭಾರತದಲ್ಲಿ ಕಮ್ಯುನಿಸ್ಟರು ಬಳಸುವ ‘ಲಾಲ್ ಸಲಾಮ್’ (ರೆಡ್ ಸೆಲ್ಯೂಟ್) ಪದ ಬಳಸಿದ್ದಕ್ಕಾಗಿ, ಫೇಸ್‌ಬುಕ್‌ನಲ್ಲಿ ಲೆನಿನ್ ಫೋಟೊ ಅಪ್‌ಲೋಡ್ ಮಾಡಿದ್ದಕ್ಕಾಗಿ ಹಾಗೂ ಸ್ನೇಹಿತರನ್ನು ‘ಕಾಮ್ರೇಡ್’ ಎಂದು ಕರೆದದ್ದಕ್ಕಾಗಿ ಇವರನ್ನು ಮಾವೋವಾದಿಗಳೆಂದು ಆರೋಪಪಟ್ಟಿಯಲ್ಲಿ ದೂರಲಾಗಿದೆ. ಆದರೆ ವಿಪರ್ಯಾಸವೆಂದರೆ ದೇಶದ ವಿರುದ್ಧ ಸಮರ ಸಾರಿದ ಆರೋಪವನ್ನು ಇವರ ಮೇಲೆ ಹೇರಲು ಇಷ್ಟು ಸಾಕಾಗಿದೆ.

ದಿಲ್ಲಿಯಲ್ಲಿ ಕೂಡಾ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಸಫೂರಾ ಝರ್ಗರ್, ದೇವಾಂಗನಾ ಕಲಿಟಾ ಮತ್ತು ನತಾಶಾ ನರ್ವಾಲ್ ಪಾಲ್ಗೊಂಡಿದ್ದರು. ಇವರ ವಿರುದ್ಧವೂ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದ್ದು, ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಗೆ ಸಂಚು ರೂಪಿಸಿದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ.

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಇಂದಿರಾಗಾಂಧಿ ಸರಕಾರದ ಕ್ರಮಗಳ ಹಾಗೂ ನೀತಿಗಳ ವಿರುದ್ಧ ಧ್ವನಿ ಎತ್ತಿದವರನ್ನು ‘ಮಿಸಾ’ (ಆಂತರಿಕ ಭದ್ರತೆ ನಿರ್ವಹಣೆ ಕಾಯ್ದೆ) ಅಡಿಯಲ್ಲಿ ಜೈಲಿಗೆ ತಳ್ಳಲಾಗುತ್ತಿತ್ತು. ‘ಮಿಸಾ’ ಕಾಯ್ದೆ ಯಾವುದೇ ಆರೋಪ ಇಲ್ಲದೇ ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ಜೈಲಿಗೆ ಕಳುಹಿಸಲು ಮತ್ತು ಅವರಿಗೆ ಜಾಮೀನು ನೀಡದೇ ಜೈಲಿನಲ್ಲಿ ಇಡಲು ಅಧಿಕಾರವನ್ನು ಸರಕಾರಕ್ಕೆ ಕೊಟ್ಟಿತ್ತು. 12 ತಿಂಗಳವರೆಗೆ ಅವರನ್ನು ಈ ರೀತಿ ಬಂಧನದಲ್ಲಿ ಇರಿಸಲು ಅವಕಾಶವಿತ್ತು. 1978ರಲ್ಲಿ ‘ಮಿಸಾ’ ಕಿತ್ತು ಹಾಕಲಾಗಿದ್ದು, ಇಂದು ಅದರ ಬದಲಿಗೆ ಯುಎಪಿಎ ಜಾರಿಯಲ್ಲಿದೆ. ರಾಜಕೀಯವಾಗಿ ಅನನುಕೂಲ ಎನಿಸುವ ವ್ಯಕ್ತಿಗನ್ನು ಯಾವುದೇ ಆರೋಪ ಇಲ್ಲದೇ, ಜಾಮೀನು ಪಡೆಯಲೂ ಅವಕಾಶವಾಗದಂತೆ ಜೈಲಿನಲ್ಲಿಡಲು ಯುಎಪಿಎ ಬಳಕೆಯಾಗುತ್ತಿದೆ. ಇದರ ಜತೆಗೆ ಆಡಳಿತ ಪಕ್ಷಕ್ಕೆ ತನ್ನ ಟೀಾಕಾರರನ್ನು ಉಗ್ರಗಾಮಿಗಳು ಎಂದು ತೇಜೋವಧೆ ಮಾಡಲು ಕೂಡಾ ಇದು ಅನುಕೂಲ ಮಾಡಿಕೊಟ್ಟಿದೆ.

2019ರಲ್ಲಿ ಮೋದಿ ಸರಕಾರ ಈ ಕಾಯ್ದೆಯ ಸೆಕ್ಷನ್ 35 ಹಾಗೂ 36ಕ್ಕೆ ತಿದ್ದುಪಡಿ ತಂದಿದ್ದು, ವ್ಯಕ್ತಿಗಳನ್ನು ಕಾರ್ಯಾಂಗ ಯಾವುದೇ ಆರೋಪ ಅಥವಾ ವಿಚಾರಣೆ ಇಲ್ಲದೇ ‘ಉಗ್ರಗಾಮಿ’ ಎಂದು ಘೋಷಿಸಲು ಇದು ದಾರಿ ಮಾಡಿಕೊಡುತ್ತದೆ. ಯುಎಪಿಎಗೆ ತಂದಿರುವ ತಿದ್ದುಪಡಿ, ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಆಪಾದಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್ ಈ ಸಂಬಂಧ ಕೇಂದ್ರಕ್ಕೆ ನೋಟಿಸ್ ಕಳುಹಿಸಿದ್ದು, ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.

ತನ್ನ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಮೋದಿ ಸರಕಾರ ಯುಎಪಿಎ ಹೇರಿದರೂ, ರಾಜಕೀಯ ಸಿದ್ಧಾಂತದಲ್ಲಿ ತನ್ನ ಕಡೆಗೆ ಒಲವು ಹೊಂದಿರುವ ಕೆಲ ವ್ಯಕ್ತಿಗಳು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರೂ ಅವರ ಬಗ್ಗೆ ಉದಾರತೆ ತೋರಿದ ನಿದರ್ಶನಗಳು ಸಾಕಷ್ಟಿವೆ. 2014ರ ಡಿಸೆಂಬರ್‌ನಲ್ಲಿ ಸೊಹ್ರಾಬುದ್ದೀನ್-ಕೌಸರ್ ಬಿ ಎನ್ ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ದೋಷಮುಕ್ತಗೊಳಿಸಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿಬಿಐ ನಿರಾಕರಿಸಿದಲ್ಲಿಂದ ಈ ಪ್ರಕ್ರಿಯೆ ಆರಂಭವಾಗಿದೆ.

ಭಯೋತ್ಪಾದನೆ, ಕಸ್ಟಡಿ ಹತ್ಯೆ, ಮಾನವ ಹಕ್ಕು ಉಲ್ಲಂಘನೆ ಮತ್ತು ಗಂಭೀರ ಶಸ್ತ್ರಾಸ್ತ್ರ ಸಂಬಂಧಿ ಅಪರಾಧ ಕೃತ್ಯಗಳ ಆರೋಪ ಎದುರಿಸುತ್ತಿರುವ ಎಂಟು ಮಂದಿಯ ಪಟ್ಟಿ ಇಲ್ಲಿ ಕೊಡಲಾಗಿದ್ದು, ಇವರಿಂದ ಹಲವು ಜೀವಗಳಿಗೆ ಅಪಾಯಗಳಾಗಿದ್ದರೂ ತನ್ನ ರಾಜಕೀಯ ವಿರೋಧಿಗಳಿಗೆ ಉಗ್ರಗಾಮಿಗಳೆಂಬ ಹಣೆಪಟ್ಟಿ ಕಟ್ಟಿದಂತೆ ಇವರನ್ನು ಆ ರೀತಿ ಪರಿಗಣಿಸಲು ಸರಕಾರ ಸಿದ್ಧವಿಲ್ಲ.

1.ಕಪಿಲ್ ಬೈಸಲಾ
ದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆ ವೇಳೆ, ದಿಲ್ಲಿ ಪೊಲೀಸರ ಸಮ್ಮುಖದಲ್ಲೇ ಉತ್ತರ ಪ್ರದೇಶದ ನಿವಾಸಿ ಕಪಿಲ್ ಬೈಸಲಾ ಎಂಬಾತ ಎರಡು ಸುತ್ತು ಗುಂಡು ಹಾರಿಸಿದ. ಮೋದಿ ಸರಕಾರದ ಕಟ್ಟಾ ಬೆಂಬಲಿಗನಾಗಿದ್ದ ಈತ ಸಿಎಎ ವಿರುದ್ಧದ ಪ್ರತಿಭಟನೆಯನ್ನು ಬಹಿರಂಗವಾಗಿಯೇ ಖಂಡಿಸಿದ್ದ. ಕಂಟ್ರಿ ಪಿಸ್ತೂಲನ್ನು ಪ್ರತಿಭಟನಾಕಾರರತ್ತ ಗುರಿ ಮಾಡಿದ ಈತನ ಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾದಾಗ ಜನ ಬೆಚ್ಚಿ ಬಿದ್ದಿದ್ದರು.

‘ಜೈ ಶ್ರೀರಾಂ’ ಎಂಬ ಘೋಷಣೆ ಕೂಗಿದ ಬೈಸಲಾ, ‘‘ಹಮಾರೇ ದೇಶ್ ಮೇ ಔರ್ ಕಿಸಿ ಕಿ ನಹಿ ಚಲೇಗಿ, ಸಿರ್ಫ್ ಹಿಂದುವೋಂ ಕಿ ಚಲೇಗಿ (ನಮ್ಮ ದೇಶವನ್ನು ಹಿಂದೂಗಳಷ್ಟೇ ಆಳುತ್ತಾರೆ; ಬೇರೆ ಯಾರೂ ಅಲ್ಲ) ಎಂದು ದಿಲ್ಲಿ ಪೊಲೀಸರು ಈತನನ್ನು ಕಸ್ಟಡಿಗೆ ತೆಗೆದುಕೊಳ್ಳುವ ವೇಳೆ ಬೊಬ್ಬಿಟ್ಟಿದ್ದ.
ಶಸ್ತ್ರಾಸ್ತ್ರ ಸಹಿತ ಈತನನ್ನು ಸ್ಥಳದಲ್ಲೇ ಬಂಧಿಸಲಾಯಿತು. ಆದಾಗ್ಯೂ ಮಾರ್ಚ್ 6ರಂದು, ಈತನ ವಕೀಲರ ಈ ಕೆಳಗಿನ ಅಂಶಗಳನ್ನು ಪರಿಗಣಿಸಿದ ದಿಲ್ಲಿ ಕೋರ್ಟ್ ಈತನಿಗೆ ಜಾಮೀನು ನೀಡಿತು:

1. ಕಪಿಲ್ ಸಮಾಜದಲ್ಲಿ ಆಳವಾದ ಬೇರು ಹೊಂದಿದ್ದು, ಕಾನೂನಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇಲ್ಲ. 2. ಕಪಿಲ್ ಸ್ವಚ್ಛ ಇತಿಹಾಸ ಹೊಂದಿದ್ದು, ಈ ಹಿಂದೆ ಎಂದೂ ಇಂಥ ಪ್ರಕರಣಗಳಲ್ಲಿ ಶಾಮೀಲಾಗಿಲ್ಲ. 3. ಕಪಿಲ್‌ಗೆ ಪತ್ನಿ ಹಾಗೂ ಪುಟ್ಟ ಮಗುವಿನ ಜವಾಬ್ದಾರಿ ಇದೆ. 4. ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವುದರಿಂದ ಏನೂ ಸಾಧನೆಯಾಗುವುದಿಲ್ಲ. ವಿಚಾರಣೆಗೆ ಸಮಯ ಹಿಡಿಯುತ್ತದೆ. 5. ಈ ಪ್ರಕರಣದಲ್ಲಿ ದೂರುದಾರರು ಹಾಗೂ ಸಾಕ್ಷಿಗಳು ಪೊಲೀಸ್ ಅಧಿಕಾರಿಗಳಾಗಿದ್ದು, ಅವರ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವ ಸಾಧ್ಯತೆ ಇಲ್ಲ. 6. ಆರೋಪಿಯ ತನಿಖೆ ಈಗಾಗಲೇ ಮುಗಿದಿದ್ದು, ತನಿಖೆಗಾಗಿ ಆತನನ್ನು ಇರಿಸಿಕೊಳ್ಳುವ ಅಗತ್ಯ ಇಲ್ಲ. 7. ಆರೋಪಿಯನ್ನು ತನಿಖಾಧಿಕಾರಿಯ ಕಸ್ಟಡಿಗೆ ನೀಡಿದ ಬಳಿಕವೂ ಆರೋಪಿಯಿಂದ ಏನೂ ವಶಪಡಿಸಿಕೊಂಡಿಲ್ಲ. ಆಗ್ನೇಯ ಜಿಲ್ಲೆ ಮ್ಯಾಜಿಸ್ಟ್ರೇಟ್ ಗುಲ್ಷನ್ ಕುಮಾರ್ ಅವರು ‘ಸತ್ಯಾಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ಮತ್ತು ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು’ ಬೈಸಲಾಗೆ ಜಾಮೀನು ನೀಡಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ, ಈ ಜಾಮೀನು ಅರ್ಜಿಗೆ ಪೊಲೀಸರು ವ್ಯಕ್ತಪಡಿಸಿದ ವಿರೋಧವೆಂದರೆ ‘‘ಬೈಸಲಾ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದು ಹಾೂ ಇನ್ನೂ ಆರಂಭಿಕ ಹಂತದಲ್ಲಿವೆ’’.ಆದಾಗ್ಯೂ ಜಾಮೀು ಮಂಜೂರು ಮಾಡಿರುವ ಕೋರ್ಟ್ ಕ್ರಮದ ವಿರುದ್ಧ ದಿಲ್ಲಿ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ.

ಸ್ವಾರಸ್ಯಕರ ಅಂಶವೆಂದರೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 336 (ಇತರರ ವೈಯಕ್ತಿಕ ಸುರಕ್ಷೆ ಅಥವಾ ಮತ್ತೊಬ್ಬರ ಜೀವಕ್ಕೆ ಅಪಾಯ) ಮತ್ತು 506 (ಅಪರಾಧ ಪಿತೂರಿ) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಮಾತ್ರ ಬೈಸಲಾ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ವಾಸ್ತವವಾಗಿ ಬಿಜೆಪಿ ಬೆಂಬಲಿಗರಿಗೆ ‘ದೇಶದ್ರೋಹಿಗಳಿಗೆ ಗುಂಡಿಕ್ಕಿ’ ಎಂದು ಘೋಷಣೆ ಕೂಗಲು ಪ್ರೇರಣೆ ನೀಡಿದ್ದರೂ, ಈ ಪ್ರಕರಣದ ಅಪರಾಧ ಸಂಚಿನ ಬಗ್ಗೆ ಪೊಲೀಸರು ತನಿಖೆ ನಡೆಸಿದಂತಿಲ್ಲ.

2.ಮನೀಷ್ ಸಿರೋಹಿ
ಹಲವು ಮಂದಿ ಗುಂಡೇಟಿನಿಂದ ಮೃತಪಟ್ಟು, ದಿಲ್ಲಿ ಕೋಮುದಳ್ಳುರಿಯಲ್ಲಿ ಸಿಲುಕಿಕೊಂಡಿರುವ ನಡುವೆಯೇ ಶಸ್ತ್ರಾಸ್ತ್ರಗಳ ಡೀಲರ್ ಮನೀಶ್ ಸಿರೋಹಿ ಎಂಬಾತನನ್ನು ದಿಲ್ಲಿ ಪೊಲೀಸರು ಬಂಧಿಸಿ, ಬಂದೂಕು ಮತ್ತು ಮದ್ದುಗುಂಡುಗಳನ್ನು ಆತನಿಂದ ವಶಪಡಿಸಿಕೊಂಡರು. ಈತನ ವಿರುದ್ಧ ಐಪಿಸಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಮಾತ್ರ ದೂರು ದಾಖಲಿಸಲಾಗಿದೆ.

ಆದಾಗ್ಯೂ ಸಫೂರಾ ಝರ್ಗರ್, ದೇವಾಂಗನಾ ಕಲಿಟಾ, ನತಾಶಾ ನರ್ವಾಲ್ ಮತ್ತು ಇತರ ಸಿಎಎ ಹೋರಾಟಗಾರರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ. ಅವರ ವಿರುದ್ಧ ದೊರಕಿರುವ ಸ್ಪಷ್ಟ ಪುರಾವೆಗಳೆಂದರೆ ಪ್ರತಿಭಟನೆ ವೇಳೆ ರಸ್ತೆ ತಡೆ ನಡೆಸಿದ್ದು; ಅವರಿಂದ ಯಾವ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿಲ್ಲ.

ಸಫೂರಾ ಈ ಬಂಧನಕ್ಕೆ ಮುನ್ನ ಯಾವ ಪ್ರಕರಣದಲ್ಲೂ ಶಾಮೀಲಾದ ನಿದರ್ಶನ ಇಲ್ಲ. ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿ, ಸಫೂರಾ ಗರ್ಭಧಾರಣೆಯ ಸಂಕೀರ್ಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾಗೂ ಜೈಲಿನಲ್ಲಿ ಕೋವಿಡ್-19 ಸೋಂಕು ತಗಲುವ ಭೀತಿ ಇದೆ ಎಂದು ವಾದಿಸಿದರೂ ಆಕೆ ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಆದರೆ ಸಿರೋಹಿಗೆ ದಿಲ್ಲಿ ನ್ಯಾಯಾಲಯ ಮೇ 6ರಂದು ಜಾಮೀನು ನೀಡಿದೆ. ಕಾಕತಾಳೀಯವೆಂದರೆ, ಅವರಿಗೆ ಜಾಮೀನು ನೀಡಲು ಉಲ್ಲೇಖಿಸಿದ ಒಂದು ಕಾರಣವೆಂದರೆ, ಬಂಧನದ ಅವಧಿಯಲ್ಲಿ ಕೊರೋನ ವೈರಸ್ ಸೋಂಕು ತಗಲುವ ಅಪಾಯವಿದೆ ಎನ್ನುವುದು!

 

3.ಮಿಲಿಂದ್ ಏಕಬೋಟೆ

ಸಂಘಪರಿವಾರ ಮುಖಂಡ ಮಿಲಿಂದ್ ಏಕಬೋಟೆಯನ್ನು ಭೀಮಾ ಕೋರೆಗಾಂವ್ ಚಳವಳಿ ವೇಳೆ ದಲಿತ ವಿರೋಧಿ ಹಿಂಸೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ 2018ರ ಜನವರಿ 1ರಂದು ಬಂಧಿಸಲಾಯಿತು. ಬಂಧನದ ಕೆಲ ವಾರ ಬಳಿಕ ಅಂದರೆ ಎಪ್ರಿಲ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಸುಪ್ರೀಂಕೋರ್ಟ್ ಈತನ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಮಹಾರಾಷ್ಟ್ರ ಪೊಲೀಸರು ಈತನನ್ನು ಬಂಧಿಸಿದ್ದರು. ಈ ಹಿಂಸಾಚಾರದಲ್ಲಿ ಒಬ್ಬರು ಬಲಿಯಾಗಿದ್ದರು.
2019ರ ಜನವರಿಯಲ್ಲಿ ಪುಣೆ ಕೋರ್ಟ್ ಅವರ ಜಾಮೀನು ಷರತ್ತುಗಳನ್ನು ಮತ್ತಷ್ಟು ಸಡಿಲಿಸಿ, ರ್ಯಾಲಿಗಳಲ್ಲಿ ಭಾಗವಹಿಸಲು ಮತ್ತು ಮಾಧ್ಯಮದ ಜತೆ ಮಾತನಾಡಲು ಅವಕಾಶ ಮಾಡಿಕೊಟ್ಟಿತು.

ಮತ್ತೊಬ್ಬ ಸಂಘಪರಿವಾರ ನಾಯಕ ಹಾಗೂ ಈ ಪ್ರಕರಣದ ಸಹ ಆರೋಪಿ ಸಂಭಾಜಿ ಭಿಡೆಯನ್ನು ಪೊಲೀಸರು ಬಂಧಿಸಲೇ ಇಲ್ಲ. ಆರ್‌ಟಿಐ ಅರ್ಜಿಯೊಂದಕ್ಕೆ ಬಂದ ಉತ್ತರದ ಪ್ರಕಾರ, ಭೀಮಾ ಕೊರೇಗಾಂವ್ ಹಿಂಸಾಚಾರಕ್ಕೆ ಆರು ತಿಂಗಳು ಮುನ್ನ ಅಂದಿನ ದೇವೇಂದ್ರ ಫಡ್ನವೀಸ್ ಸರಕಾರ, ಪುರಾವೆಗಳಿಲ್ಲ ಎಂಬ ಕಾರಣ ನೀಡಿ ಭಿಡೆ ವಿರುದ್ಧದ ಹಿಂದಿನ ಆರು ಪ್ರಕರಣಗಳನ್ನು ವಾಪಸ್ ಪಡೆದಿತ್ತು.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪೊಲೀಸರ ಗುರಿ ಹಿಂಸೆ ನಡೆಯುವ ಹಿಂದಿನ ದಿನ ನಡೆದ ಸಮಾರಂಭದಲ್ಲಿ ಭಾಗವಹಿಸಿದ ಕೆಲ ಹೋರಾಟಗಾರರ ವಿರುದ್ಧವಷ್ಟೇ ತಿರುಗಿತು. 2018ರ ನವೆಂಬರ್‌ನಲ್ಲಿ ಪುಣೆ ಪೊಲೀಸರು 5,000 ಪುಟಗಳ ಆರೋಪಪಟ್ಟಿ ಸಲ್ಲಿಸಿದರು. ವರದಿಗಳ ಪ್ರಕಾರ ಭಿಡೆ ಹಾಗೂ ಏಕಬೋಟೆ ವಿರುದ್ಧದ ಎಲ್ಲ ಆರೋಪಗಳನ್ನು ಅಕ್ಷರಶಃ ಕೈಬಿಡಲಾಗಿದೆ. ಬದಲಾಗಿ ಐದು ಮಂದಿ ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ವಕೀಲರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊರಿಸಲಾಗಿದೆ. ಈ ಪೈಕಿ ಬಂಧಿಸಲ್ಪಟ್ಟವರ ಪೈಕಿ ಇಬ್ಬರಷ್ಟೇ ಹಿಂದಿನ ದಿನ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು.

ಉದ್ಧವ್ ಠಾಕ್ರೆ ನೇತೃತ್ವದ ಹೊಸ ರಾಜ್ಯ ಸರಕಾರ ಈ ಪ್ರಕರಣ ನಿಭಾಯಿಸಲು ವಿಶೇಷ ತನಿಖಾ ತಂಡ ರಚಿಸುವ ಯೋಚನೆಯಲ್ಲಿರುವ ನಡುವೆಯೇ ಕೇಂದ್ರ ಸರಕಾರ, ರಾಜ್ಯ ಸರಕಾರದ ಸಲಹೆಯನ್ನೂ ಪಡೆಯದೇ ಪ್ರಕರಣವನ್ನು ಪುಣೆ ಪೊಲೀಸರ ಬಳಿಯಿಂದ ತನ್ನ ನೇರ ನಿಯಂತ್ರಣದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಪ್ರಕರಣವನ್ನು ಹಸ್ತಾಂತರಿಸಿದೆ. ಬಂಧಿತ ವ್ಯಕ್ತಿಗಳ ವಿರುದ್ಧ ಯುಎಪಿಎ ಅಡಿ ಆರೋಪ ಹೊರಿಸಿ, ಮಾವೋವಾದಿಗಳೆಂದು ಹೆಸರಿಸಲಾಗಿದೆ. ಇವರ ಪೈಕಿ ಯಾರಿಗೂ ಇದುವರೆಗೆ ಜಾಮೀನು ಸಿಕ್ಕಿಲ್ಲ.

4.ಮೇಜರ್ ಲೀತುಲ್ ಗೊಗೊಯ್
ಕಾಶ್ಮೀರದಲ್ಲಿ ಮತದಾರರೊಬ್ಬರನ್ನು ಒತ್ತೆಯಾಳಾಗಿ ಹಿಡಿದು ಆತನನ್ನು ‘ಮಾನವ ಗುರಾಣಿ’ಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಭಾರತೀಯ ಸೇನೆಗೆ ಅಂತರ್‌ರಾಷ್ಟ್ರೀಯ ಕುಖ್ಯಾತಿಯನ್ನು ಗಳಿಸಿಕೊಟ್ಟವರು ಮೇಜರ್ ಲೀತುಲ್ ಗೊಗೊಯ್. ರಕ್ತಪಿಪಾಸುಗಳಾದ 700-900 ಮಂದಿಯಿಂದ ಚುನಾವಣಾ ಆಯೋಗದ ಅಧಿಕಾರಿಗಳನ್ನು ರಕ್ಷಿಸುವ ಸಲುವಾಗಿ ಹೀಗೆ ಮಾಡಬೇಕಾಯಿತು ಎಂದು ಮೇಜರ್ ತಮ್ಮ ಅಪರಾಧ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಒತ್ತೆಯಾಳಾಗಿದ್ದ ಫಾರೂಕ್ ದಾರ್ ರನ್ನು ಚುನಾವಣಾ ವಿರೋಧಿ ಕಲ್ಲುತೂರಾಟಗಾರ ಎಂದು ಬಿಂಬಿಸಲಾಗಿದ್ದರೂ, ವಾಸ್ತವವಾಗಿ ಅವರು ಮತದಾರರಾಗಿದ್ದರು ಎನ್ನುವುದು ಆ ಬಳಿಕ ತಿಳಿದುಬಂದಿತ್ತು.

ಈ ಅಧಿಕಾರಿ ಹಲವು ಸೇನಾ ಹಾಗೂ ನಾಗರಿಕ ಕಾನೂನುಗಳನ್ನು ಉಲ್ಲಂಘಿಸಿದರೂ, ಆಡಳಿತ ಪಕ್ಷದ ಬೆಂಬಲಿಗರು ಅವರನ್ನು ‘ರಾಷ್ಟ್ರೀಯ ಹೀರೊ’ ಆಗಿ ಬಿಂಬಿಸಿದರು. ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ವಿಚಾರಣಾ ನ್ಯಾಯಾಲಯ ಸ್ಥಾಪಿಸಿದರೂ ಈ ವಿವಾದಾತ್ಮಕ ಮೇಜರ್‌ಗೆ ಪದಕ ನಿಡಿ ಗೌರವಿಸಿದರು.

ಇದಾದ ಒಂದು ವರ್ಷದ ಒಳಗಾಗಿ ಮೇಜರ್ ಗೊಗೊಯ್ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡರು. ಎರಡನೇ ಕೋರ್ಟ್ ಆಫ್ ಎನ್‌ಕ್ವಯರಿ, ಅವರನ್ನು ಮಿಲಿಟರಿ ಶಿಸ್ತು ಉಲ್ಲಂಘಿಸಿ, ಸ್ಥಳೀಯ ಮಹಿಳೆಯೊಬ್ಬರ ಜತೆ ಸಿಕ್ಕಿಹಾಕಿಕೊಂಡ ಆರೋಪದಲ್ಲಿ ಶಿಕ್ಷೆಗೆ ಗುರಿಪಡಿಸಿತು. ಕಾರ್ಯಾಚರಣೆ ಪ್ರದೇಶದಲ್ಲಿ ಕರ್ತವ್ಯದ ಸ್ಥಳದಿಂದ ಹೊರಗಿದ್ದ ಆರೋಪದಲ್ಲಿ ಅವರ ಜ್ಯೇಷ್ಠತೆಯನ್ನು ವೃತ್ತಿ ದಾಖಲೆಯಲ್ಲಿ ಆರು ತಿಂಗಳು ಕಡಿತಗೊಳಿಸಿತು.

ಮೇಜರ್ ಗೊಗೊಯ್ ಅವರು ಭಾರತದ ಸೇನೆಯ ಸತ್ಸಂಪದ್ರಾಯವನ್ನು, ನಿಗದಿತ ಕಾರ್ಯಾಚರಣೆ ವಿಧಿವಿಧಾನವನ್ನು, ತೊಡಗಿಸಿಕೊಳ್ಳುವಿಕೆ ನಿಯಮಾವಳಿಯನ್ನು, ಸೇನೆಯ ಮುಖ್ಯಸ್ಥರ ಆದೇಶಗಳನ್ನು, ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯ ಸಂಬಂಧ ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು, ಸಂವಿಧಾನದ 21ನೇ ವಿಧಿ ಮತ್ತು ಸೇನಾ ಕಾಯ್ದೆಯ ಸೆಕ್ಷನ್ 63 ಹಾಗೂ 69ನ್ನು ಉಲ್ಲಂಘಿಸಿದ್ದಾರೆ ಎಂದು ಮಾಜಿ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎಚ್.ಎಸ್.ಪರಾಗ್ ಅವರು ಲೇಖನದಲ್ಲಿ ವಿವರಿಸಿದ್ದರು. ಜತೆಗೆ ಭಾರತೀಯ ಸೇನೆಗೆ ಈ ಮಾನವ ಗುರಾಣಿ ಪ್ರಕರಣವನು್ನ ಮತ್ತೆ ತೆರೆದು ಹೊಸ ಕೋರ್ಟ್ ಆಫ್ ಎನ್‌ಕ್ವಯರಿ ಮೂಲಕ ತನಿಖೆ ನಡೆಸಿ, ಇದರ ಆಧಾರದಲ್ಲಿ ಕ್ರಮ ಕೈಗೊಳ್ಳಲು ಇನ್ನೂ ಕಾಲ ಮಿಂಚಿಲ್ಲ ಎಂದು ಸ್ಪಷ್ಟಪಡಿಸಿದ್ದರು.

5.ಅಸೀಮಾನಂದ

70 ಮಂದಿಯ ಜೀವ ಬಲಿ ಪಡೆದ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದ ಎಲ್ಲ ಆರೋಪಗಳಿಂದ ಮಾಜಿ ಆರೆಸ್ಸೆಸ್ ಪ್ರಚಾರಕ, ಸ್ವಾಮಿ ಅಸೀಮಾನಂದ ಅಲಿಯಾಸ್ ನಬ ಕುಮಾರ್ ಸರ್ಕಾರ್ ಹಾಗೂ ಇತರ ಮೂವರನ್ನು ಎನ್‌ಐಎ ವಿಶೇಷ ನ್ಯಾಯಾಲಯ 2019ರ ಮಾರ್ಚ್ 20ರಂದು ಆರೋಪಮುಕ್ತಗೊಳಿಸಿತು. 2007ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯದ ಅಧೀನದ ತನಿಖಾ ಏಜೆನ್ಸಿ ಆರೋಪಿಗಳ ವಿರುದ್ಧದ ಸಂಚು ಆರೋಪ ಸಾಬೀತು ಮಾಡುವಲ್ಲಿ ವಿಫಲವಾಗಿದೆ ಎಂದು ಹೇಳಿ ಅನುಮಾನ ಲಾಭದ ಆಧಾರದಲ್ಲಿ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು.

ಪ್ರಕರಣದಲ್ಲಿ ಅಸೀಮಾನಂದಗೆ 2015ರಲ್ಲಿ ಜಾಮೀನು ಸಿಕ್ಕಿತ್ತು. ಆದರೆ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣ ಮತ್ತು ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನನ್ನು 2010ರಲ್ಲಿ ಹರಿದ್ವಾರ ಆಶ್ರಮದಿಂದ ಸಿಬಿಐ ಬಂಧಿಸಿದ ಹಿನ್ನೆಲೆಯಲ್ಲಿ ಜೈಲಿನಲ್ಲೇ ಉಳಿಯಬೇಕಾಯಿತು. 2007ರಲ್ಲಿ ಸಂಭವಿಸಿದ ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಇಬ್ಬರು ಹಾಗೂ ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ 16 ಮಂದಿ ಬಲಿಯಾಗಿದ್ದರು.

ಎನ್‌ಐಎ ನ್ಯಾಯಾಲಯ ಅಸೀಮಾನಂದನನ್ನು ಸಂಜೋತಾ ಸ್ಫೋಟ ಪ್ರಕರಣದಲ್ಲಿ ದೋಷಮುಕ್ತಗೊಳಿಸುವ ಅವಧಿಯಲ್ಲೇ, ಅಂದರೆ 2017 ಹಾಗೂ 2018ರಲ್ಲಿ ಜೈಪುರ ಹಾಗೂ ಹೈದರಾಬಾದ್ ಎನ್‌ಐಎ ವಿಶೇಷ ನ್ಯಾಯಾಲಯಗಳು ಆತನನ್ನು ಅಜ್ಮೀರ್ ದರ್ಗಾ ಮತ್ತು ಮಕ್ಕಾ ಮಸೀದಿ ಸ್ಫೋಟ ಪ್ರಕರಣಗಳಲ್ಲಿ ಕೂಡಾ, ಆರೋಪ ಸಾಬೀತುಪಡಿಸಲು ತನಿಖಾ ಸಂಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ಆರೋಪಮುಕ್ತಗೊಳಿಸಿತು. 2011ರಲ್ಲಿ, ಎನ್‌ಐಎ ಅಸೀಮಾನಂದ ವಿರುದ್ಧ, ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಚು ರೂಪಿಸಿದ ಮತ್ತು ಇತರ ಭಯೋತ್ಪಾದಕ ಕೃತ್ಯಗಳ ಆಧಾರದಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು. ಇದೀಗ ಸ್ಫೋಟ ಪ್ರಕರಣಗಳಲ್ಲಿ ಯಾರ ವಿರುದ್ಧವೂ ಆರೋಪ ಇಲ್ಲ. 2007ರಲ್ಲಿ ಈ ಕೃತ್ಯದಿಂದ ಜೀವ ಕಳೆದುಕೊಂಡ 88 ಮಂದಿಯ ಕುಟುಂಬಗಳು ನ್ಯಾಯದ ನಿರೀಕ್ಷೆಯಲ್ಲಿವೆ.

ಕೃಪೆ: thewire.in

Writer - ಸಂಗೀತಾ ಬರೂಹ್

contributor

Editor - ಸಂಗೀತಾ ಬರೂಹ್

contributor

Similar News