ಬೆಂಗಳೂರಿನಲ್ಲಿ ಇಬ್ಬರು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್: ಸಾವಿನ ಸಂಖ್ಯೆ 27ಕ್ಕೆ ಏರಿಕೆ
ಬೆಂಗಳೂರು, ಜೂ.12: ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ಇಬ್ಬರು ವಿದ್ಯಾರ್ಥಿಗಳು, ಸಿಸಿಬಿ ಠಾಣೆಯಲ್ಲಿದ್ದ ಖೈದಿ, ಮನೆಗೆಲಸ ಮಾಡುತ್ತಿದ್ದವ ಹಾಗೂ ಟೀ ಮಾರುವ ವ್ಯಾಪಾರಿಗೆ ಸೇರಿದಂತೆ ನಗರದಲ್ಲಿ ಶುಕ್ರವಾರ 36 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈವರೆಗೆ ಒಟ್ಟು 617 ಸೋಂಕಿತರು ಪತ್ತೆಯಾಗಿದ್ದು, 27 ಜನ ಮೃತಪಟ್ಟಿದ್ದಾರೆ. ಅಲ್ಲದೇ ತೀವ್ರ ನಿಗಾಘಟಕದಲ್ಲಿ 11 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 159 ವ್ಯಕ್ತಿಗಳನ್ನು ಹಾಗೂ ಈವರೆಗೆ 13,510 ವ್ಯಕ್ತಿಗಳಿಗೆ ಕೊರೋನ ತಪಾಸಣೆ ನಡೆಸಲಾಗಿದೆ.
ಜೂ.25 ರಂದು ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ಕಲಾಸಿಪಾಳ್ಯದ ಇಬ್ಬರು ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ತಗಲಿರುವುದು ದೃಡಪಟ್ಟಿದೆ.
ಈಗಾಗಲೇ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪ್ರಾಥಮಿಕ ಸಂಪರ್ಕಿತರನ್ನು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ. ಹೀಗಾಗಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ನಗರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಮರಾಜಪೇಟೆಯ 4ನೇ ವೃತ್ತದಲ್ಲಿ ಟೀ ಅಂಗಡಿ ಇಟ್ಟಿದ್ದ ವ್ಯಕ್ತಿಗೆ ಕೊರೋನ ಪಾಸಿಟಿವ್ ಬಂದಿದೆ. ಉಡುಪಿಗೆ ಹೋಗಿದ್ದ ಈ ವ್ಯಕ್ತಿಗೆ ಕೊರೋನ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಅಕ್ಕಪಕ್ಕದ ಒಟ್ಟು 25 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ, ಈ ವ್ಯಕ್ತಿಯ ಅಂಗಡಿಯಿಂದ ಟೀ ಸೇವಿಸಿದ ವ್ಯಕ್ತಿಗಳನ್ನ ಸಂಪರ್ಕಿಸುವುದೇ ಈಗ ದೊಡ್ಡ ಸವಾಲಿನ ಕೆಲಸವಾಗಿದ್ದು, ಯಾರ್ಯಾರು ಇಲ್ಲಿಗೆ ಬರುತ್ತಿದ್ದರು ಎಂಬ ಮಾಹಿತಿಯನ್ನು ಕಲೆಹಾಕಲು ಬಿಬಿಎಂಪಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಸಿಸಿಬಿ ಕಚೇರಿ, ಆಸ್ಪತ್ರೆ, ಲಾಲ್ಬಾಗ್ ಸೀಲ್ ಡೌನ್
ಕೊರೋನ ಸೋಂಕು ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿ, ಜಯನಗರ ಆಸ್ಪತ್ರೆ ಹಾಗೂ ಸಸ್ಯಕಾಶಿ ಲಾಲ್ಬಾಗ್ ಅನ್ನು ಸೀಲ್ಡೌನ್ ಮಾಡಲಾಗಿದೆ.
ಕೇಂದ್ರ ಅಪರಾಧ ತನಿಖಾ ವಿಭಾಗದ (ಸಿಸಿಬಿ) ವಶದಲ್ಲಿದ್ದ ಆರೋಪಿಯೋರ್ವನಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಸಿಸಿಬಿ ಕಚೇರಿಯನ್ನು 3 ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನು ಬಿಬಿಎಂಪಿ ಸಿಬ್ಬಂದಿ ಎರಡು ಬಾರಿ ಸ್ಯಾನಿಟೈಸ್ ಮಾಡಿದ್ದಾರೆ. ಇದೇ ವೇಳೆ ಇಬ್ಬರು ಇನ್ಸ್ ಪೆಕ್ಟರ್ ಸೇರಿ 20 ಮಂದಿ ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಹಾಗೆಯೇ ಹೌಸ್ಕೀಪಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಯನಗರದ ಜನರಲ್ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ. ಈ ವ್ಯಕ್ತಿಯ ಜತೆ ಪ್ರಥಮ ಸಂಪರ್ಕದಲ್ಲಿದ್ದ 16 ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಬಳಿಕ ರೋಗಿಗಳಿಗೆ ಮತ್ತೆ ಚಿಕಿತ್ಸೆ ಮುಂದುವರಿಸಲಾಗಿದೆ.
ಲಾಲ್ಬಾಗ್ ವಾಕಿಂಗ್ ಹೋಗುತ್ತಿದ್ದವರಿಗೆ ಕೊರೋನ ಭೀತಿ ಆವರಿಸಿದೆ. ದಿನನಿತ್ಯ ಲಾಲ್ಬಾಗ್ ಹೋಗುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನ ಸೋಂಕು ತಗುಲಿದ ಪರಿಣಾಮ ವಾಕಿಂಗ್ ಹೋಗುತ್ತಿದ್ದವರಲ್ಲಿ ಆತಂಕ ಹೆಚ್ಚಾಗಿದ್ದು, ಇದರಿಂದ ಸಸ್ಯಕಾಶಿಯನ್ನು ಬಂದ್ ಮಾಡಲಾಗಿದೆ.