ರೌಡಿಯ ಕೊಲೆ ಯತ್ನ ಪ್ರಕರಣ: 7 ಆರೋಪಿಗಳ ಬಂಧನ
ಬೆಂಗಳೂರು, ಜೂ.13: ರೌಡಿ ಲೋಕೇಶ್ ಮೇಲೆ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿ, ಕೊಲೆಯತ್ನಕ್ಕೆ ಮುಂದಾಗಿದ್ದ ಆರೋಪ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಲಹಂಕದ ಕೋಗಿಲು ಲೇಔಟ್ನ ಸೈಯದ್(22), ಝಫಾರ್(27), ಆರೀಫ್(21), ಅಗ್ರಹಾರ ಲೇಔಟ್ನ ಗಣೇಶ್(19), ಕಾಮಾಕ್ಷಮ್ಮ ಲೇಔಟ್ನ ರಮೇಶ್(40), ಕ್ಯಾಟ್ ಮಂಜ(31) ಹಾಗೂ ತಬ್ರೇಝ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಐವರು ಜೂ.6 ರಂದು ಕೋಗಿಲು ಲೇಔಟ್ನ ಬೆಳ್ಳಳ್ಳಿ ಕ್ರಾಸ್ ಬಳಿ ಯಲಹಂಕದ ರೌಡಿ ಲೋಕೇಶ್(28) ಅನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿ, ಕೊಲೆಗೆ ಯತ್ನ ನಡೆಸಿದ್ದರು. ಸ್ಥಳೀಯರು ಸೇರಿದ್ದರಿಂದ ಆರೋಪಿಗಳು ಪರಾರಿಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಯಲಹಂಕ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಲ್ಲಿ ರಮೇಶ್ ಹಾಗೂ ಕ್ಯಾಟ್ ಮಂಜ ಆರೋಪಿಗಳಿಗೆ ಕೊಲೆ ಮಾಡಲು ಕುಮ್ಮಕ್ಕು ನೀಡಿದವರಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಜಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.