ಯೋಗ ಜನಜೀವನದ ಅವಿಭಾಜ್ಯ ಅಂಗವಾಗಲಿ: ಡಿ.ವಿ.ಸದಾನಂದಗೌಡ

Update: 2020-06-21 18:08 GMT

ಬೆಂಗಳೂರು, ಜೂ.21: ಕೇಂದ್ರ ರಾಸಾಯನಿಕ  ಹಾಗೂ ರಸಗೊಬ್ಬರ ಸಚಿವ  ಡಿ.ವಿ. ಸದಾನಂದ ಗೌಡ ಜನತೆಗೆ ಅಂತರ್ ರಾಷ್ಟ್ರೀಯ ಯೋಗ ದಿನದ ಶುಭಾಶಯ ಕೋರಿದ್ದಾರೆ.

ಈ ಸಂದರ್ಭದಲ್ಲಿ ಹೇಳಿಕೆಯೊಂದನ್ನು ನೀಡಿರುವ ಅವರು, ಯೋಗವು ಮಾನವ ಜನಾಂಗದ ಏಳ್ಗೆಗಾಗಿ ಭಾರತವು ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.

2014ರ ಸೆ. 27ರಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಯಲ್ಲಿ ಯೋಗದ ಮಹತ್ವವನ್ನು ತಿಳಿಸಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾವನೆಯನ್ನು ಮಂಡಿಸಿದ್ದರು. ಪರಿಣಾಮವಾಗಿ 2015ರ ಜೂ. 21ರಂದು ಮೊಟ್ಟಮೊದಲ ಬಾರಿಗೆ ಅಂತರ್ ರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು ಎಂದು ಅವರು ಹೇಳಿದ್ದಾರೆ.

ಇಂದು ವಿಶ್ವದ ಬಹುತೇಕ ದೇಶಗಳಲ್ಲಿ ಈ ದಿನವನ್ನು ಯೋಗ ದಿನವಾಗಿ ಆಚರಿಸಲಾಗುತ್ತಿದೆ. ಭಾರತವು ಇದರ ನೇತೃತ್ವ ವಹಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತಕ್ಕೆ ಸಂದ ಗೌರವ ಇದಾಗಿದೆ ಎಂದು ಸದಾನಂದಗೌಡ ತಿಳಿಸಿದ್ದಾರೆ.

ಯೋಗವು ಬರೀ ಆಸನ, ಪ್ರಾಣಾಯಾಮ, ಸೂರ್ಯನಮಸ್ಕಾರ, ವ್ಯಾಯಾಮವಲ್ಲ. ಬದಲಿಗೆ ಜನರು ದೈಹಿಕವಾಗಿ, ಮಾನಸಿಕವಾಗಿ ಸ್ವಾಸ್ಥ್ಯ ಜೀವನ ನಡೆಸಲು ಇರುವ ಸಮಗ್ರ ಸಾಧನವಾಗಿದೆ. ವಿಶ್ವದ ಇಂದಿನ ಕಾಲಘಟ್ಟದಲ್ಲಿ ಯೋಗವು ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯೋಗಾಭ್ಯಾಸದಿಂದ ನಮ್ಮ ಒಟ್ಟಾರೆ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಪ್ರಾಣಾಯಾಮದಿಂದ ಶ್ವಾಸಕೋಶ ಬಲಗೊಳ್ಳುತ್ತದೆ. ಕೊರೋನ ಮುಂತಾದ ವೈರಾಣುಗಳಿಂದ ರಕ್ಷಿಸಿಕೊಳ್ಳಲು ಇದು ತುಂಬಾನೆ ಸಹಕಾರಿ. ನಮ್ಮ ಯೋಗಾಭ್ಯಾಸ ಇವತ್ತೊಂದೆ ದಿನಕ್ಕೆ ಕೊನೆಯಾಗದೆ ಜೀವನದ ಅವಿಭಾಜ್ಯ ಅಂಗವಾಗಲಿ ಎಂದು ಸದಾನಂದಗೌಡ ಆಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News