×
Ad

ಕೋವಿಡ್ ಚಿಕಿತ್ಸೆ; ಖಾಸಗಿ ಆಸ್ಪತ್ರೆಗಳೊಂದಿಗೆ ಸಂಘರ್ಷಕ್ಕಿದು ಸಮಯವಲ್ಲ: ಸಿಎಂಗೆ ಎಚ್.ಕೆ.ಪಾಟೀಲ್ ಪತ್ರ

Update: 2020-06-26 12:10 IST

ಬೆಂಗಳೂರು, ಜೂ.26: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗೆ ಅವಕಾಶ ಕಲ್ಪಿಸಿ ಸರಕಾರ ಚಿಕಿತ್ಸಾ ದರಗಳನ್ನು ಅಂತಿಮಗೊಳಿಸಿ ಪ್ರಕಟಿಸಿದೆ. ಆದರೆ ಖಾಸಗಿ ಆಸ್ಪತ್ರೆಗಳು ಈ ದರಗಳನ್ನು ಒಪ್ಪಿಕೊಂಡಿರುವುದಿಲ್ಲ. ಇಂಥ ತುರ್ತು, ಅನಿವಾರ್ಯ, ಗಂಭೀರ ಪರಿಸ್ಥಿತಿಯ ಸಂದರ್ಭದಲ್ಲಿ ಸಂಘರ್ಷಕ್ಕೆ ಕಾಲವಲ್ಲ. ತಕ್ಷಣವೇ ಭಾರತೀಯ ವೈದ್ಯ ಸಂಘ IMA (Indian Medical Association) ಜೊತೆಗೆ ಸಭೆ ಏರ್ಪಡಿಸಿ ಖಾಸಗಿ ಆಸ್ಪತ್ರೆಯ ಪ್ರತಿನಿಧಿಗಳನ್ನು ಕರೆದು ತಕ್ಷಣವೇ ಬಗೆಹರಿಸಿ ಬಿಡಬೇಕು. ಇಲ್ಲದಿದ್ದರೆ ಗಂಡಾಂತರಕಾರಿ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಗದಗ ಶಾಸಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಪತ್ರ ಬರೆದಿದ್ದಾರೆ.

ಯಡಿಯೂರಪ್ಪನವರೇ,

ವಿಶ್ವದಾದ್ಯಂತ ಮಹಾಮಾರಿಜನನ ಕೊರೋನ ವೈರಸ್ (ಕೋವಿಡ್-19)ರಿಂದ ಅತ್ಯಂತ ಗಂಭೀರ, ಕಳವಳಕಾರಿ ಹಾಗೂ ಆತಂಕದ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೊಣೆಗಾರಿಕೆಯನ್ನು ಮತ್ತು ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಈ ಜವಾಬ್ದಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸರ್ಕಾರ ಪಾರದರ್ಶಕ, ಭ್ರಷ್ಠಾಚಾರ ಮುಕ್ತ ಮತ್ತು ಸಮಯೋಚಿತ ಜನಪರ ನಿರ್ಧಾರಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾಗಿರುವುದು ಇಂದಿನ ಅವಶ್ಯಕತೆ. ಗಂಭೀರ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭದಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಿ ಹಲವಾರು ಪತ್ರಗಳನ್ನು ನಾನು ಸರ್ಕಾರಕ್ಕೆ ಈ ಹಿಂದೆಯೇ ಬರೆದಿದ್ದೆ. ಅನೇಕ ಸಲಹೆಗಳನ್ನು ಸಹ ಮಾಡಿದ್ದೆ.

ವಿಶ್ವದಾದ್ಯಂತ ಮಹಾಮಾರಿ ಕೊರೋನ ವೈರಸ್ (ಕೋವಿಡ್-19)ರಿಂದಾಗಿ ಪರಿಸ್ಥಿತಿ ಆಘಾತಕಾರಿ ಹಂತ ತಲುಪುತ್ತಿದೆ. ಕರ್ನಾಟಕದಲ್ಲಿಯೂ ಸಹ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಅತ್ಯಂತ ತುರ್ತಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇರುವುದರಿಂದ ಈ ಕೆಳಕಂಡ ಕೆಲ ಅಂಶಗಳನ್ನು ಮತ್ತೊಮ್ಮೆ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಅದಕ್ಕಾಗಿ ಈ ಹಿನ್ನೆಲೆಯಲ್ಲಿ ದಿನಾಂಕ 24.3.2020 ಮತ್ತು 26.3.2020 ಮತ್ತು 1.4.2020 ಮತ್ತು 5.4.2020, 20.4.2020 ಮತ್ತು 13.5.2020ರಂದು ನಾನು ಬರೆದ ಪತ್ರಗಳನ್ನು ಹಾಗೂ ದಿನಾಂಕ 12.3.2020 ಮತ್ತು 23.3.2020 ರಂದು ವಿಧಾನಸಭೆಯಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದಾಗ ಮಾಡಿದ ಹಲವಾರು ಸಲಹೆಗಳು ತಮ್ಮ ಗಮನದಲ್ಲಿರಲಿಕ್ಕೆ ಸಾಕು.

1.        ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗೆ ಅವಕಾಶ ಕಲ್ಪಿಸಿ ದಿನಾಂಕ 23.6.2020 ರಂದು ಸರ್ಕಾರಿ ಅಧಿಸೂಚನೆ ಸಂಖ್ಯೆ: ಹೆಚ್.ಎಫ್.ಡಬ್ಲ್ಯೂ 228:ಎಸಿಎಸ್ 2020 ರ ಅನ್ವಯ ಚಿಕಿತ್ಸಾ ದರಗಳನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಈ ದರಗಳನ್ನು ಒಪ್ಪಿಕೊಂಡಿರುವುದಿಲ್ಲ. ಇಂಥ ತುರ್ತು, ಅನಿವಾರ್ಯ, ಗಂಭೀರ ಪರಿಸ್ಥಿತಿಯ ಸಂದರ್ಭದಲ್ಲಿ ಸಂಘರ್ಷಕ್ಕೆ ಕಾಲವಲ್ಲ. ತಕ್ಷಣವೇ ಭಾರತೀಯ ವೈದ್ಯ ಸಂಘ IMA (Indian Medical Association) ಜೊತೆಗೆ ಸಭೆ ಏರ್ಪಡಿಸಿ ಖಾಸಗಿ ಆಸ್ಪತ್ರೆಯ ಪ್ರತಿನಿಧಿಗಳನ್ನು ಕರೆದು ತಕ್ಷಣವೇ ಬಗೆಹರಿಸಿ ಬಿಡಬೇಕು. ಇಲ್ಲದಿದ್ದರೆ ಗಂಡಾಂತರಕಾರಿ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

2.       ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳೆಲ್ಲವೂ ಭರ್ತಿಯಾಗಿವೆ ಎಂಬ ಮಾಹಿತಿ ಇದೆ. ಇದು ಬೆಂಗಳೂರು ಮಾತ್ರವಲ್ಲ ರಾಜ್ಯದ ಇತರೆಡೆಗಳಲ್ಲಿಯೂ ಸಹ ಇದೇ ಸನ್ನಿವೇಶ ಎದುರಾಗಿದೆ. ಈಗ ಲಭ್ಯವಿರುವ ಹಾಸಿಗೆಗಳಿಗಿಂತ 10 ಪಟ್ಟು ಹೆಚ್ಚಿಗೆ ಹಾಸಿಗೆಗಳನ್ನು ಸಿದ್ದಪಡಿಸಿಕೊಳ್ಳುವ ಅವಶ್ಯಕತೆ/ಅನಿವಾರ್ಯತೆ ಇದೆ. ಹಾಸಿಗೆಗಳನ್ನು ಸಿದ್ದಪಡಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು.

3.       ರಾಜ್ಯಾದ್ಯಂತ ಲಭ್ಯವಿರುವ 5 Star ಮತ್ತು 3 Star ಆಸ್ಪತ್ರೆಗಳು ಹಾಗೂ ಹೋಟೆಲ್‍ಗಳನ್ನು ಸರ್ಕಾರ ಆದೇಶ ಅಥವಾ ಸುಗ್ರೀವಾಜ್ಞೆಯ ಮೂಲಕ ತಕ್ಷಣವೇ ತನ್ನ ವಶಕ್ಕೆ  ತೆಗೆದುಕೊಂಡು ಅವುಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಕೋವಿಡ್-19 ಚಿಕಿತ್ಸಾ ಕೇಂದ್ರ ಅಥವಾ ಆಸ್ಪತ್ರೆಗಳನ್ನಾಗಿ ಪರಿವರ್ತಿಸಬೇಕು.

ಇಂಥ ಕಠಿಣ ಸಂದರ್ಭಗಳಲ್ಲಿ ರಾಜ್ಯದ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಕಾಳಜಿಪೂರ್ವಕ, ಮಾನವೀಯ ಅನುಕಂಪದ, ಸಮರ್ಪಕ, ಸಮಗ್ರ, ಸಮಯೋಚಿತ ಮತ್ತು ಪರಿಣಾಮಕಾರಿಯಾದ ವ್ಯವಸ್ಥೆ ರೂಪಿಸಲು ಅತ್ಯಂತ ಗಂಭೀರವಾದ ಕ್ರಮಗಳ ಬಗ್ಗೆ ಆಲೋಚನೆ ನಡೆಯಬೇಕೆ ಹೊರತು, ಕೇವಲ ಮೇಲ್ಪದರದ ಅಥವಾ ವಿಂಡೋ ಡ್ರೆಸ್ಸಿಂಗ್ ನಡೆಯಬಾರದು.

ಮೇಲ್ಕಂಡ ಕ್ರಮಗಳನ್ನು  ತುರ್ತಾಗಿ ಕೈಗೊಳ್ಳಬೇಕೆಂದು ಒತ್ತಾಯಿಸುವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News