ಕ್ವಾರಂಟೈನ್ ಅವ್ಯವಸ್ಥೆ; ಸರಕಾರಿ ಸ್ವಾಮ್ಯದ ಸಿಬ್ಬಂದಿಗಳ ಆಕ್ರೋಶ
Update: 2020-07-05 18:08 GMT
ಬೆಂಗಳೂರು, ಜು.5: ರಾಜ್ಯ ಸರಕಾರ ಮಾಡಿರುವ ಕ್ವಾರಂಟೈನ್ ವ್ಯವಸ್ಥೆ ಬಗ್ಗೆ ಸರಕಾರಿ ಸ್ವಾಮ್ಯದ ಸಿಬ್ಬಂದಿಗಳಿಂದಲೇ ಆಕ್ರೋಶ ವ್ಯಕ್ತವಾದ ಘಟನೆ ನಗರದಲ್ಲಿ ನಡೆದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಅಕಾಡೆಮಿಯ ಇಬ್ಬರು ಸಿಬ್ಬಂದಿಗಳಿಗೆ ಕೊರೋನ ಸೋಂಕು ತಗುಲಿದೆ. ಹೀಗಾಗಿ ಆ ಸಿಬ್ಬಂದಿಯನ್ನು ಜಿಕೆವಿಕೆ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ, ಅಲ್ಲಿನ ಅವ್ಯವಸ್ಥೆ ಬಗ್ಗೆ ಈ ಸಿಬ್ಬಂದಿಯೇ ರೋಸಿ ಹೋಗಿದ್ದಾರೆ.
ಕ್ವಾರಂಟೈನ್ ಸೆಂಟರ್ ನಲ್ಲಿ ಸರಿಯಾದ ಸಮಯಕ್ಕೆ ಊಟ, ತಿಂಡಿ ನೀಡುತ್ತಿಲ್ಲ. ಶೌಚಾಲಯಕ್ಕೆ ಹೋಗಲು ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಯಾವುದೇ ವೈದ್ಯರಾಗಲಿ, ನರ್ಸ್ ಗಳಾಗಲಿ ಬಂದು ಕೊರೋನ ಸೋಂಕಿತರನ್ನು ಪರೀಕ್ಷೆ ಮಾಡುತ್ತಿಲ್ಲ. ಇಂತಹ ಕ್ವಾರಂಟೈನ್ ಸೆಂಟರ್ ನಲ್ಲಿ ಬಿಡುವ ಬದಲು ರಸ್ತೆಗೆ ಬಿಡೋದು ಸೂಕ್ತ ಎಂದು ವೀಡಿಯೋದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.