ಅಪಪ್ರಚಾರ ಆರೋಪ: ನಟ ಜಗ್ಗೇಶ್ ವಿರುದ್ಧ ಕಾಂಗ್ರೆಸ್ ಮುಖಂಡ ದೂರು

Update: 2020-07-06 16:39 GMT

ಬೆಂಗಳೂರು, ಜು.6: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಬಿಜೆಪಿ ನಾಯಕ, ನಟ ಜಗ್ಗೇಶ್ ಅಪ್ರಪಚಾರ ಮಾಡಿದ್ದಾರೆಂದು ಆರೋಪಿಸಿ ಇಲ್ಲಿನ ಬನಶಂಕರಿ ಪೊಲೀಸ್ ಠಾಣೆಗೆ ಯುವ ಕಾಂಗ್ರೆಸ್ ಮುಖಂಡ ಸಂದೀಪ್ ಅನಬೇರು ದೂರು ನೀಡಿದ್ದಾರೆ.

ಸೋಮವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ನಿರ್ವಹಣೆಯಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆ ಬಡ ಮತ್ತು ಸಾಮಾನ್ಯ ವರ್ಗದ ಜನರು ರಾಜಧಾನಿ ಬೆಂಗಳೂರು ಬಿಟ್ಟು ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ. ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿ ತೆರಳುತ್ತಿರುವ ವ್ಯಕ್ತಿಗಳ ಸಂದರ್ಶನ ಮಾಡಿದ್ದು, ತಮ್ಮನ್ನು ಹೋಲುವಂತಹ ವ್ಯಕ್ತಿ ನೀಡಿರುವ ಪ್ರತಿಕ್ರಿಯೆಗೆ, ನಾನೇ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಫೋಟೋ ಪ್ರಕಟಿಸಿ ಅಪ್ರಪಚಾರ ಮಾಡಿದ್ದಾರೆಂದು ಅವರು ಬೇಸರ ವ್ಯಕ್ತಪಡಿಸಿದರು.

ತಾನು ಯುವ ಕಾಂಗ್ರೆಸ್‍ನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತನ್ನ ವಿರುದ್ಧ ಅವಹೇಳನ ಮಾಡಿರುವ ಜಗ್ಗೇಶ್ ಅವರು ಈ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಚಿತ್ರಗಳನ್ನು ತೆಗೆದುಹಾಕಿ, ಕ್ಷಮೆ ಕೋರಬೇಕು. ಇಲ್ಲದಿದ್ದಲ್ಲಿ, ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂದೀಪ್ ಅವರು ತಿಳಿಸಿದರು.

ಚಿಕ್ಕಮಗಳೂರು ಮೂಲದ ವ್ಯಕ್ತಿ ಮಾತನಾಡಿರುವುದನ್ನು ನನ್ನ ಫೋಟೋದ ಜೊತೆ ತಳುಕು ಹಾಕಿ ಸತ್ಯ ಮರೆಮಾಚುವ ಕಾರ್ಯವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಜಗ್ಗೇಶ್ ಅವರೇ ಇದರಲ್ಲಿ ನೇರ ಪಾತ್ರಧಾರಿ. ಒಂದು ಉತ್ತಮ ಸ್ಥಾನದಲ್ಲಿದ್ದವರು ಇಂತಹ ಕಾರ್ಯ ಮಾಡುವುದು ಎಷ್ಟು ಸರಿ ಎಂದು ಸಂದೀಪ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News