ಮಾರಕಾಸ್ತ್ರಗಳಿಂದ ದಾಳಿ ನಡೆಸಿ ವ್ಯಕ್ತಿಯ ಕೊಲೆ
Update: 2020-07-10 18:17 GMT
ಬೆಂಗಳೂರು, ಜು.10: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ವ್ಯಕ್ತಿಯೋರ್ವನನ್ನು ಕೊಲೆಗೈದು ಪರಾರಿಯಾಗಿರುವ ಘಟನೆ ಇಲ್ಲಿನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಾಲನಹಳ್ಳಿ ನಿವಾಸಿ ಚನ್ನಕೇಶವ ಕೇಶವ(36) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಚನ್ನಕೇಶವ ಅವರು ವಾಟರ್ ಟ್ಯಾಂಕರ್ ಗಳನ್ನು ಇಟ್ಟುಕೊಂಡಿದ್ದರು. ಗುರುವಾರ ರಾತ್ರಿ 10:30ರ ಸುಮಾರಿನಲ್ಲಿ ಪಾಲನಹಳ್ಳಿಯ ಹೊರವಲಯದ ಅಪಾರ್ಟ್ ಮೆಂಟ್ವೊಂದರ ಬಳಿ ತಮ್ಮ ಕಾರಿನಲ್ಲಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಕಾರಿನ ಗಾಜು ಒಡೆದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಯಲಹಂಕ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.