ಕೋವಿಡ್ ಬಗ್ಗೆ ಭಯ ಬೇಡ, ಪಾಸಿಟಿವ್ ಬಂದವರೂ ಗುಣಮುಖರಾಗುತ್ತಾರೆ: ಸಚಿವ ಎಸ್.ಟಿ. ಸೋಮಶೇಖರ್

Update: 2020-07-16 12:56 GMT

ಬೆಂಗಳೂರು, ಜು. 16: ಕೋವಿಡ್-19 ಸಂಬಂಧ ಮೊದಲು ಭಯಗೊಳ್ಳುವುದನ್ನು ಬಿಡಬೇಕು. ಪಾಸಿಟಿವ್ ಬಂದವರೂ ಗುಣಮುಖರಾಗುತ್ತಾರೆ. ಭಯವೇ ಅರ್ಧ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ಭಯ ಬಿಡಿ. ಜೊತೆಗೆ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸುರಕ್ಷಿತ ಅಂತರ ಕಾಪಾಡಿಕೊಳ್ಳಿ ಎಂದು ಸಹಕಾರ ಸಚಿವರೂ ಆಗಿರುವ ರಾಜರಾಜಶ್ವರಿ ನಗರ ವಲಯದ ಕೋವಿಡ್-19 ನಿಯಂತ್ರಣ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಸಲಹೆ ಮಾಡಿದ್ದಾರೆ.

ಗುರುವಾರ ಇಲ್ಲಿನ ಆರ್.ಆರ್.ನಗರದ ಶೇಷಾದ್ರಿಪುರ ಕಾಲೇಜಿನಲ್ಲಿ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದ ಕಾರ್ಪೋರೇಟರ್ ಗಳ ಸಭೆಯಲ್ಲಿ ಮಾತನಾಡಿ, ಸುಮಾರು 3500 ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಮಾಸ್ಕ್, ವೈದ್ಯಕೀಯ ಕಿಟ್ ಸೇರಿ ಅಗತ್ಯ ಸೌಕರ್ಯವನ್ನು ನೀಡಲಾಗುತ್ತಿದೆ. ಇನ್ನು ಸಾರ್ವಜನಿಕರಲ್ಲೂ ಯಾರು ಧರಿಸುತ್ತಿಲ್ಲವೋ ಅಂಥವರನ್ನು ಗುರುತಿಸಿ ಮಾಸ್ಕ್ ವಿತರಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ, ಈಗಾಗಲೇ ಗಮನಕ್ಕೆ ತರಲಾದ ವಿಷಯಗಳನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು. ಜನರು ಏನೇ ಮಾತನಾಡಿದರೂ ಬೇಸರ ಮಾಡಿಕೊಳ್ಳಬಾರದು, ಅವರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಅವರ ಜೊತೆ ಸಮಾಧಾನದಿಂದ ಮಾತನಾಡಿದರೆ ಕೊನೇ ಪಕ್ಷ ಶೇ.50ರಷ್ಟು ಸಮಸ್ಯೆಗಳು ಬಗೆಹರಿದಂತೆಯೇ ಲೆಕ್ಕ ಎಂದು ಅವರು ಕಿವಿಮಾತು ಹೇಳಿದರು.

ಕೋವಿಡ್‍ಗೆ ಸಂಬಂಧಪಟ್ಟಂತೆ ಈಗಾಗಲೇ ಕಾರ್ಪೋರೇಟರ್ ಗಳು, ಮುಖಂಡರನ್ನೊಳಗೊಂಡ ಸಭೆಗಳನ್ನು ಮಾಡಿದ್ದೇನೆ. ಪ್ರತಿ ಮನೆಗೂ ಸೌಲಭ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದ ಅವರು, ಇನ್ನು ರಾಜರಾಜೇಶ್ವರಿನಗರ ಸೇರಿ ಯಶವಂತಪುರ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರತ್ಯೇಕ ಸಭೆ ಕರೆದು ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಪ್ರತಿ ವಾರ್ಡ್ ಗಳಿಗೂ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಬಗ್ಗೆ ಎಲ್ಲ ಮಾಹಿತಿಯನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ಈ ಮೂಲಕ ಸಿಎಂ ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲಾಗುವುದು ಎಂದು ಅವರು, ಯಶವಂತಪುರ ಕ್ಷೇತ್ರದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಗುಣಮುಖರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಮುಂಜಾಗ್ರತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಸರಕಾರ ಯಾವಾಗಲೂ ಜನರ ಬೆನ್ನಿಗಿದೆ ಎಂದು ತಿಳಿಸಿದರು.

ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ: ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದವರನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದ್ದು, ಅವರ ಕೈಗಳಿಗೆ ಸೀಲ್ ಒತ್ತಲಾಗಿದೆ. ಅವರು 14 ದಿನಗಳ ಕಾಲ ಹೊರ ಬರುವಂತಿಲ್ಲ. ಒಂದು ವೇಳೆ ಪದೇ ಪದೆ ನಿಯಮ ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಹೋಂ ಕ್ವಾರಂಟೈನ್‍ನಲ್ಲಿ ಇರುವವರನ್ನು ನೋಡಿಕೊಳ್ಳಲು ಒಂದು ತಂಡವನ್ನು ರಚನೆ ಮಾಡಿದ್ದು, ಇವರು ಗೃಹ ಬಂಧನದಲ್ಲಿರುವವರಿಗೆ ಆಹಾರ, ವೈದ್ಯಕೀಯ ನೆರವಿಗೆ ಶ್ರಮಿಸಲಿದ್ದಾರೆ. ಜೊತೆಗೆ ಯಾವ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಹಾಗೂ ಅವರನ್ನು ಹೇಗೆ ಸಂಪರ್ಕ ಮಾಡಬೇಕು ಎಂಬ ಬಗ್ಗೆ ಸದ್ಯದಲ್ಲೆ ಕಿರು ಪುಸ್ತಕವನ್ನು ಹೊರತರಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News