ಗೋದಾಮುಗಳಿಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ನಷ್ಟ
Update: 2020-07-18 10:49 GMT
ಬೆಂಗಳೂರು, ಜು.18: ನಗರದ ಚಾಮರಾಜಪೇಟೆಯ ಟಿಆರ್ ಮಿಲ್ನ ಎಲೆಕ್ಟ್ರಿಕ್ ಹಾಗೂ ಮರದ ವಸ್ತುಗಳಿದ್ದ ಎರಡು ಗೋದಾಮುಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಹೋಗಿದ್ದು, ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ.
ಶನಿವಾರ ಮುಂಜಾನೆ ಕೆಆರ್ ಮಿಲ್ನ ಎಲೆಕ್ಟ್ರಿಕ್ ಹಾಗೂ ಮತ್ತೊಂದು ಮರದ ಸಾಮಾನುಗಳಿದ್ದ ಗೋದಾಮುಗಳಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಹೊರಬರಲಾರಂಭಿಸಿದೆ. ಇದನ್ನು ನೋಡಿದ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ 2 ವಾಹನಗಳು ಸತತ 4 ಗಂಟೆ ಶ್ರಮಿಸಿ ಬೆಂಕಿ ನಂದಿಸಿವೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಗೋಡೌನ್ಗಳಲ್ಲಿ ಯಾರು ಇಲ್ಲದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ನಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚಾಮರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.