ಪತಿಯ ಕೊಲೆಗೈದ ಪ್ರಕರಣ: ಪತ್ನಿ, ಪ್ರಿಯಕರ ಸೇರಿ ಮೂವರ ಬಂಧನ

Update: 2020-07-18 10:52 GMT

ಬೆಂಗಳೂರು, ಜು.18: ಪತಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಮೂವರನ್ನು ಇಲ್ಲಿನ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದಾಸರಹಳ್ಳಿ ನಿವಾಸಿ ಹರೀಶ್(24)ನನ್ನು ಕೊಲೆಯಾದ ಪತಿಯಾಗಿದ್ದು, ಆತನ ಪತ್ನಿ ಕೃಪಾ(22), ಆಕೆಯ ಪ್ರಿಯಕರ ಅಭಿಷೇಕ್ ಮತ್ತು ರವಿ ಎಂಬವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಹರೀಶ್ ಮತ್ತು ಕೃಪಾ ದಾಸರಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈ ನಡುವೆ ಕಾರು ಚಾಲಕ ಅಭಿಷೇಕ್ ಮತ್ತು ಕೃಪಾ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ವಿಷಯ ತಿಳಿದ ಹರೀಶ್ ಪತ್ನಿಯ ಜೊತೆ ಜಗಳವಾಡಿ ಹಲವು ಬಾರಿ ಬುದ್ಧಿ ಮಾತು ಹೇಳಿದ್ದರೂ ಆಕೆಯ ನಡವಳಿಕೆ ಸರಿ ಹೋಗಿರಲಿಲ್ಲ. ತಮ್ಮಿಬ್ಬರ ಸಂಬಂಧಕ್ಕೆ ಹರೀಶ್ ಅಡ್ಡಿಯಾಗುತ್ತಾನೆಂದು ಹತ್ಯೆಗೆ ಪತ್ನಿಯೇ ಸಂಚು ರೂಪಿಸಿ ಜು.9ರ ರಾತ್ರಿ ಪತಿ ಮಲಗಿದ ಬಳಿಕ ಪ್ರಿಯಕರ ಮತ್ತು ಆತನ ಸ್ನೇಹಿತನನ್ನು ಕರೆಸಿಕೊಂಡಿದ್ದಳು. ಬೆಳಗಿನ ಜಾವ 5 ಗಂಟೆಯಲ್ಲಿ ಗಾಢ ನಿದ್ದೆಯಲ್ಲಿದ್ದ ಹರೀಶ್‍ನ ಕತ್ತು ಕೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದರು ಎನ್ನಲಾಗಿದೆ.

ನಂತರ ಶವವನ್ನು ದಾಸರಹಳ್ಳಿಯ ರಾಜಕಾಲುವೆಗೆ ಎಸೆದಿದ್ದರು. ಮರುದಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ತೆರಳಿದ ಕೃಪಾ, ಕೆಲಸಕ್ಕೆ ಹೋಗಿದ್ದ ಪತಿ ವಾಪಸ್ ಬಂದಿಲ್ಲ ಎಂದು ದೂರು ನೀಡಿದ್ದಳು. ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡ ಪೊಲೀಸರು, ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News