ರೆಮಿಡಿಸ್ವಿಯರ್ ಔಷಧಿ ಸರಕಾರದ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ: ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಹತ್ವದ ನಿರ್ಣಯ

Update: 2020-07-21 16:58 GMT

ಬೆಂಗಳೂರು, ಜು.21: ನಿನ್ನೆ ಅಪೂರ್ಣಗೊಂಡಿದ್ದ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಇಂದು ನಡೆಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧಿಕೃತ ಕಾರ್ಯ ನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದರಿಂದ ಅವರ ಹೊರತಾಗಿ ಎಲ್ಲ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿಗಳು, ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಸಭೆಯಲ್ಲಿ ಪಾಲ್ಗೊಂಡು ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಟಾಸ್ಕ್ ಫೋರ್ಸ್ ಸಭೆಯ ಮುಖ್ಯಾಂಶಗಳು: ಪ್ರಮುಖವಾಗಿ ನಾಲ್ಕು ಲಕ್ಷ ರಾಪಿಡ್ ಆಂಟಿಜನ್ ಕಿಟ್ ಮತ್ತು ಐದು ಲಕ್ಷ ಕಿಟ್ ಖರೀದಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಕೋವಿಡ್ ನಿರ್ವಹಣೆಗೆ ಹೆಚ್ಚುವರಿ ಔಷಧ ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ರಾಪಿಡ್ ಆಂಟಿಜನ್ ಟೆಸ್ಟ್ ಗಳಿಗೆ ಸಂಬಂಧಿಸಿದಂತೆ ಸರಕಾರ ಕಳುಹಿಸುವ ರೋಗಿಗಳಿಗೆ ಎರಡು ಸಾವಿರ ರೂ. ಮತ್ತು ಖಾಸಗಿಯಾಗಿ ಪರೀಕ್ಷೆಗೆ ಬಂದವರಿಗೆ ಮೂರು ಸಾವಿರ ರೂ. ಶುಲ್ಕ ನಿಗದಿಗೆ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ಹಾಸಿಗೆ ಸಾಮರ್ಥ್ಯದಲ್ಲಿ ಶೇ.50ರಷ್ಟನ್ನು ಕೋವಿಡ್ ಚಿಕಿತ್ಸೆಗಾಗಿ ಸರಕಾರಕ್ಕೆ ನೀಡಬೇಕು. ಉಳಿದ ಶೇ..50ರಷ್ಟು ಹಾಸಿಗೆಗಳನ್ನು ಖಾಸಗಿಯವರು ಕೋವಿಡ್ ಮತ್ತು ಕೋವಿಡ್‍ಯೇತರ ರೋಗಿಗಳ ಚಿಕಿತ್ಸೆಗೆ ಬಳಸಬಹುದು ಎಂಬ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ(ಎಬಿ-ಎಆರ್‍ಕೆ) ಯೋಜನೆಯ ಪ್ಯಾಕೇಜ್ ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸಲು ಮತ್ತು ಯೋಜನೆ ವ್ಯಾಪ್ತಿಗೆ ಸೇರದ ಚಿಕಿತ್ಸಾ ವಿಧಾನಗಳನ್ನು ಯೂಸರ್ ಚಾರ್ಜ್ ಆಧಾರದ ಮೇಲೆ ಚಿಕಿತ್ಸೆ ನೀಡಲು ಅನುಮೋದನೆ ನೀಡಲಾಗಿದೆ. ಕೋವಿಡ್ ನಿರ್ವಹಣೆಗೆ ವೈದ್ಯಕೀಯ ಪರಿಕರ, ಔಷಧಿ ಖರೀದಿಯ ಶಿಫಾರಸು ಮೇಲ್ವಿಚಾರಣೆಗೆ ಎಸಿಎಸ್, ಐಟಿಬಿಟಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಕೋವಿಡ್ ನಿರ್ವಹಣೆಯಲ್ಲಿ ಕಾರ್ಯ ನಿರತರಾಗಿರುವ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ 2,59,263 ಎನ್-95 ಮಾಸ್ಕ್, 2,59,263  ಪಿಪಿಇ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಕೋವಿಡ್ ನಿರ್ವಹಣೆ ಉದ್ದೇಶಕ್ಕಾಗಿ 17 ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ 4,736 ಹಾಸಿಗೆಗಳಿಗೆ ಆಕ್ಸಿಜನ್ ಪೈಪ್‍ಲೈನ್ ಅಳವಡಿಕೆ ಮತ್ತು ಇತರೆ ಅಗತ್ಯ ಪರಿಕರಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ನಮಗೆ ಹೆಚ್ಚುವರಿ ಹೈಪ್ಲೋ ಆಕ್ಸಿಜನ್ ಹಾಸಿಗೆಗಳು ಲಭ್ಯ ಆಗಲಿದ್ದು, ಭವಿಷ್ಯದ ಬಳಕೆಗೂ ಲಭ್ಯ ಆಗಲಿವೆ ಎಂದು ಸುಧಾಕರ್ ತಿಳಿಸಿದರು.

ಹೊಸದಾಗಿ 16–ಆರ್‍ಟಿ–ಪಿಸಿಆರ್ ಮತ್ತು 15-ಆಟೋಮೇಟೆಡ್ ಆರ್‍ಎನ್‍ಎ ಎಕ್ಸಟ್ರಾಕ್ಷನ್ ಲ್ಯಾಬ್ ಸ್ಥಾಪನೆಗೂ ಅನುಮೋದನೆ ನೀಡಲಾಗಿದೆ. ಇದರಿಂದ ಈಗ ಲಭ್ಯವಿರುವ ಲ್ಯಾಬ್‍ಗಳ ಜತೆಗೆ ಹೆಚ್ಚುವರಿಯಾಗಿ ಸೇರ್ಪಡೆ ಆಗಲಿವೆ. ಟೆಸ್ಟ್ ಗಳ ಸಂಖ್ಯೆ ಸಹಜವಾಗಿ ಹೆಚ್ಚಾಗಲಿದ್ದು ದಿನಕ್ಕೆ ಐವತ್ತು ಸಾವಿರ ಟೆಸ್ಟ್ ಗಳ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಆಯುಷ್ ವೈದ್ಯರಿಗೆ ನೀಡುತ್ತಿರುವ ವೇತನ ನಲವತ್ತೆಂಟು ಸಾವಿರಕ್ಕೆ, ಎಂಬಿಬಿಎಸ್ ವೈದ್ಯರಿಗೆ ಎಂಬತ್ತು ಸಾವಿರಕ್ಕೆ ಹಾಗೂ ನರ್ಸ್ ಗಳಿಗೆ 30 ಸಾವಿರ ರೂ.ಗಳನ್ನು ಮಾಸಿಕ ವೇತನ ನೀಡಲು ನಿರ್ಣಯಿಸಲಾಗಿದೆ. ಇದು ಆರು ತಿಂಗಳಿಗೆ ಅನ್ವಯ ಆಗಲಿದೆ ಎಂದು ಅವರು ಹೇಳಿದರು.

ಸದ್ಯ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯವಿರುವ ರೆಮಿಡಿಸ್ವಿಯರ್ ಔಷಧಿಗೆ ಕಾಳಸಂತೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವ ದೂರುಗಳಿವೆ. ಹೀಗಾಗಿ ಸರಕಾರದ ಮೂಲಕವೇ ಖಾಸಗಿ ಆಸ್ಪತ್ರೆಗಳಿಗೂ ವಿತರಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕೋವಿಡ್ ಚಿಕಿತ್ಸೆಗೆ ದರ ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ನಿರ್ದಿಷ್ಟ ದೂರು ಬಂದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಒಟ್ಟಾರೆ ಐದುನೂರು ಕೋಟಿ ರೂ.ಮೊತ್ತದ ಖರೀದಿ ಮತ್ತು ಸೌಲಭ್ಯಗಳ ಮೇಲ್ದರ್ಜೆ ಏರಿಕೆ ಕ್ರಮಗಳಿಗೆ ಟಾಸ್ಕ್‍ಫೋರ್ಸ್ ಸಮಿತಿ ಸಭೆ ಅನುಮೋದನೆ ನೀಡಿದೆ ಎಂದು ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News