ಮೈಸೂರ ಹುಲಿ ಖ್ಯಾತಿಯ ಟಿಪ್ಪು ಈ ದೇಶದ ಇತಿಹಾಸದ ಭಾಗ: ಡಿ.ಕೆ.ಶಿವಕುಮಾರ್

Update: 2020-07-28 13:43 GMT

ಬೆಂಗಳೂರು, ಜು. 28: `ಮೈಸೂರು ಹುಲಿ ಎಂದೇ ಖ್ಯಾತಿ ಗಳಿಸಿರುವ ಟಿಪ್ಪು ಸುಲ್ತಾನ್ ವಿಚಾರ ಒಂದು ಜಾತಿ, ವರ್ಗಕ್ಕೆ ಸೇರಿದ್ದಲ್ಲ. ಅವರು ಈ ದೇಶದ ಇತಿಹಾಸದ ಭಾಗ. ಬಿಜೆಪಿ ಸರಕಾರ ತಮ್ಮ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನೇ ತಿರುಚಲು ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಟಿಯಲ್ಲಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪಠ್ಯದಿಂದ ಟಿಪ್ಪು ಸುಲ್ತಾನ್ ಅವರ ಪಾಠಗಳನ್ನು ಕೈಬಿಡುವ ಬಗ್ಗೆ ರಾಜ್ಯ ಸರಕಾರದ ಪ್ರಸ್ತಾವನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದು ಬಿಡುವುದು ಆ ಸರಕಾರಕ್ಕೆ ಬಿಟ್ಟ ವಿಚಾರ. ಟಿಪ್ಪು ಸುಲ್ತಾನ್, ಹೈದರಾಲಿ ಅವರು ನಮ್ಮ ಇತಿಹಾಸದ ಭಾಗ. ಈ ದೇಶದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವಿಧಾನಸೌಧಕ್ಕೆ ಬಂದು ಜಂಟಿ ಅಧಿವೇಶನದಲ್ಲಿ ಟಿಪ್ಪು ಸುಲ್ತಾನ್ ಇತಿಹಾಸ, ಚರಿತ್ರೆ, ದೇಶಭಕ್ತಿ ಬಗ್ಗೆ ಹಾಡಿ ಹೊಗಳಿ ಹೋಗಿದ್ದಾರೆ. ಇವತ್ತು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಇತಿಹಾಸ ಬದಲಿಸಲು ಹೊರಟಿರುವುದು ಹಾಗೂ ಸಂವಿಧಾನವನ್ನು ತಿರುಚಿ ಬರೆಯಲು ಪ್ರಯತ್ನ ನಡೆಯುತ್ತಿರುವುದು ಖಂಡನೀಯ ಎಂದು ಅವರು ಟೀಕಿಸಿದರು.

ಇತಿಹಾಸ ಬದಲಾವಣೆ ಆಗಬಾರದು. ಇವರು ಜನರನ್ನು ದಾರಿ ತಪ್ಪಿಸಲು ನಾವು ಬಿಡಲ್ಲ. ಇದು ಕಾಂಗ್ರೆಸ್ ಪಕ್ಷದ ನಿಲುವು. ಇದರ ಸಾಧಕ-ಬಾಧಕ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸುತ್ತೇವೆ. ಇದು ಒಂದು ವರ್ಗ, ಜಾತಿಗೆ ಸೀಮಿತವಾದುದಲ್ಲ. ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ದೇಶದ ಚರಿತ್ರೆ ವಿಚಾರ ಎಂದು ಶಿವಕುಮಾರ್ ಹೇಳಿದರು.

ಜಗತ್ತಿನ ಹಲವು ರಾಷ್ಟ್ರಗಳು ಭಾರತದ ಸಂವಿಧಾನವನ್ನು ಪ್ರಶಂಸೆ ಮಾಡಿ ತಾವು ಅಳವಡಿಸಿಕೊಳ್ಳಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದವು. ಆದರೆ, ಬಿಜೆಪಿ ಸರಕಾರ ಇದನ್ನು ಮೊಟಕು ಮಾಡಲು ಪ್ರಯತ್ನಿಸುತ್ತಿದೆ. ನಮ್ಮ ಮಕ್ಕಳಿಗೆ ತಿಳುವಳಿಕೆ ಹೇಳಿಕೊಡಬೇಕು. ಇದರ ಬಗ್ಗೆಯೂ ನಮ್ಮ ಪಕ್ಷದ ತಂಡ ಅಧ್ಯಯನ ಮಾಡಲಿದೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News