ರಾಜ್ಯದ ಜನರ ಬದುಕಿನಲ್ಲಿ ಮಠ-ಪೀಠಗಳ ಪಾತ್ರ, ಪ್ರಭಾವ ಅಗಾಧ: ಸಿಎಂ ಯಡಿಯೂರಪ್ಪ

Update: 2020-07-28 13:12 GMT

ಬೆಂಗಳೂರು, ಜುಲೈ 28: ಕರ್ನಾಟಕ ರಾಜ್ಯದ ಜನರ ಬದುಕಿನಲ್ಲಿ ಮಠ-ಪೀಠಗಳ ಪಾತ್ರ, ಪ್ರಭಾವ ಅಗಾಧವಾದುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಮಠ-ಪೀಠಗಳ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮೈಸೂರಿನ ಶಿವರಾತ್ರೀಶ್ವರ ಮಹಾವಿದ್ಯಾಪೀಠ ಹೊರತಂದಿರುವ `ಶಿವಪದ ರತ್ನಕೋಶ' ಗ್ರಂಥವನ್ನು ಆನ್‍ಲೈನ್ ಮೂಲಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿವಪದ ರತ್ನಕೋಶವನ್ನು ರೂಪಿಸುವ ಮೂಲಕ ವಿದ್ವತ್ಪೂರ್ಣವೂ, ಪರಿಶ್ರಮದಾಯಕವೂ ಆದ ಈ ಮಹತ್ಕಾರ್ಯವನ್ನು ನೆರವೇರಿಸಿದ ಸುತ್ತೂರು ಶ್ರೀಮಠಕ್ಕೆ ಹಾಗೂ ಸಂಪಾದಕ ಮಂಡಳಿಗೆ ಅಭಿನಂದನೆಗಳು ಎಂದರು.

ಶಿವಪದ ರತ್ನಕೋಶವು ಶೈವಾಗಮಗಳು, ವಚನ ಸಾಹಿತ್ಯ, ವೀರಶೈವ ಕಾವ್ಯ, ಅಪರೂಪದ ರೂಢಿಯ ಪದಗಳನ್ನು ಒಳಗೊಂಡು ರೂಪುಗೊಂಡಿದೆ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಗೌರವ ಸಂಪಾದಕತ್ವದಲ್ಲಿ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಈ ಗ್ರಂಥವು ಶಿವಧರ್ಮ, ಸಂಸ್ಕೃತಿ, ಸಿದ್ಧಾಂತಗಳನ್ನು ಯಥಾವತ್ತಾಗಿ ಪರಿಚಯಿಸುವ ಸಾವಿರ ಪುಟಗಳ ಬೃಹತ್ ಪದ ಭಂಡಾರವಾಗಿದೆ. ಈ ಅಮೂಲ್ಯ ಸಂಪತ್ತಿನ ಸದುಪಯೋಗವನ್ನು ಕನ್ನಡಿಗರು ಪಡೆಯಲಿ. ಶಿವರಾತ್ರೀಶ್ವರ ಗ್ರಂಥಮಾಲೆಯೂ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿರುವ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ ಎಂದು ಯಡಿಯೂರಪ್ಪ ತಿಳಿಸಿದರು.

ಸಭೆಯಲ್ಲಿ ಸುತ್ತೂರು ಮಠದ ಜೆ.ಎಸ್.ಎಸ್.ವಿದ್ಯಾಪೀಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು, ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮಿಗಳು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ, ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News