ಕೋವಿಡ್ ಪರೀಕ್ಷೆ: ಬೆಂಗಳೂರಿನಲ್ಲಿ ನಿಗದಿತ ಅವಧಿಯೊಳಗೆ ಕೈ ಸೇರದ ವರದಿಗಳು

Update: 2020-08-01 18:00 GMT

ಬೆಂಗಳೂರು, ಆ.1: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ವಿಪರೀತವಾಗಿ ಬೆಳೆವಣಿಗೆಯಾಗುತ್ತಿದೆ. ಆದರೆ, ಸರಕಾರದ ಆದೇಶದ ಪ್ರಕಾರ ಆರ್‍ಟಿಪಿಸಿಆರ್ ಪರೀಕ್ಷೆಯಾದ ನಂತರವೂ ನಿಗದಿತ ಅವಧಿಯೊಳಗೆ ವರದಿಗಳು ಕೈ ಸೇರುತ್ತಿಲ್ಲ.

ಬೆಂಗಳೂರು ನಗರದಾದ್ಯಂತ ಕೊರೋನ ಸೋಂಕಿತರನ್ನು ತ್ವರಿತವಾಗಿ ಪತ್ತೆ ಹಚ್ಚುವ ಸಲುವಾಗಿ ಜ್ವರ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿ, ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ದಿನವೊಂದಕ್ಕೆ 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಆದರೆ, 24 ಗಂಟೆಗಳಲ್ಲಿ ವರದಿ ನೀಡಬೇಕಾದ ಪ್ರಯೋಗಾಲಯಗಳು ವಿಳಂಬ ಮಾಡುತ್ತಿರುವುದು ಸೋಂಕು ಶಂಕಿತರ ಆತಂಕಕ್ಕೆ ಕಾರಣವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಜ್ವರ ಚಿಕಿತ್ಸಾಲಯಗಳಲ್ಲಿ ದಿನವೊಂದಕ್ಕೆ ಸರಾಸರಿ 2 ಸಾವಿರ ಮಂದಿಯನ್ನು ತಪಾಸಣೆ ಮಾಡಲಾಗುತ್ತಿದೆ. ಜ್ವರ, ಕೆಮ್ಮು ಸೇರಿದಂತೆ ವಿವಿಧ ಸೋಂಕಿನ ಲಕ್ಷಣಗಳು ಇದ್ದಲ್ಲಿ ವ್ಯಕ್ತಿಯ ಗಂಟಲ ದ್ರವ ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ರವಾನಿಸಲಾಗುತ್ತದೆ. ಮಾದರಿಗಳನ್ನು ಪರೀಕ್ಷಿಸುವ ಪ್ರಯೋಗಾಲಯಗಳು ಐಸಿಎಂಆರ್ ಪೋರ್ಟಲ್‍ನಲ್ಲಿ ವಿವರವನ್ನು ನಮೂದಿಸಿ, ವರದಿಯನ್ನು ನಿಗದಿತ ಚಿಕಿತ್ಸಾಲಯಗಳಿಗೆ ಹಾಗೂ ವ್ಯಕ್ತಿಗೆ ಕಳುಹಿಸುತ್ತವೆ. ಆದರೆ, ಸರಕಾರದ ಆದೇಶದ ಪ್ರಕಾರ ಆರ್‍ಟಿಪಿಸಿಆರ್ ಪರೀಕ್ಷೆಯಾದಲ್ಲಿ ಈ ಪ್ರಕ್ರಿಯೆ 24 ಗಂಟೆಯಿಂದ 72 ಗಂಟೆಯೊಳಗೆ ಪೂರ್ಣಗೊಳ್ಳಬೇಕು.

ಆದರೆ, ನಿಗದಿತ ಅವಧಿಯೊಳಗೆ ವರದಿ ಬಾರದ ಪರಿಣಾಮ ಪರೀಕ್ಷೆ ಮಾಡಿಸಿಕೊಂಡವರು ಹಲವರ ಸಂಪರ್ಕಕ್ಕೆ ಒಳಪಡುತ್ತಿದ್ದಾರೆ. ಸರಕಾರ ರೂಪಿಸಿರುವ ನಿಯಮದ ಪ್ರಕಾರ ಸಂಶಯಾಸ್ಪದವಾಗಿ ಮೃತಪಟ್ಟವರು, ಸೋಂಕಿತರೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿರುವವರು ಸೇರಿದಂತೆ ‘ಎ’ ವರ್ಗದಲ್ಲಿ ಬರುವವರ ಮಾದರಿಯನ್ನು 12 ಗಂಟೆಗಳಲ್ಲಿ ಪರೀಕ್ಷೆ ನಡೆಸಬೇಕು.

ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ(ಐಎಲ್‍ಐ) ಬಳಲುತ್ತಿರುವವರು ‘ಬಿ’ ವರ್ಗದಡಿ ಬರಲಿದ್ದು, ಅವರ ಮಾದರಿಗಳನ್ನು 24 ಗಂಟೆಗಳಲ್ಲಿ ಪರೀಕ್ಷೆ ನಡೆಸಬೇಕು. ಲಕ್ಷಣಗಳು ಗೋಚರಿಸದ ‘ಸಿ’ ವರ್ಗದವರ ಮಾದರಿಗಳನ್ನು 24ರಿಂದ 48 ಗಂಟೆಗಳೊಳಗೆ ಪರೀಕ್ಷೆ ಮಾಡಬೇಕು. ಆದರೆ, ಸದ್ಯ ಈ ನಿಯಮಗಳು ಪಾಲನೆಯಾಗುತ್ತಿಲ್ಲ.

ಆಂಟಿಜೆನ್ ಕಿಟ್ ಬಂದರೂ ವಿಳಂಬ: ಸೋಂಕಿತರನ್ನು ಶೀಘ್ರವಾಗಿ ಪತ್ತೆ ಮಾಡುವ ಉದ್ದೇಶದಿಂದ ಬಿಬಿಎಂಪಿ ಸರಕಾರ ಆರಂಭದಲ್ಲಿ 50 ಸಾವಿರ ಆಂಟಿಜೆನ್ ಕಿಟ್ ವಿತರಿಸಲಾಗಿತ್ತು. ಇದೀಗ ಒಂದು ಲಕ್ಷ ಕಿಟ್‍ಗಳನ್ನು ನೀಡಲಾಗಿದೆ. ಪ್ರಸಕ್ತ ನಗರದಲ್ಲಿ 7 ಸಾವಿರದಿಂದ 8 ಸಾವಿರ ಆಂಟಿಜೆನ್ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಗೆ ಒಳಗಾದವರಿಗೆ ಕೆಲವೇ ನಿಮಿಷಗಳಲ್ಲಿ ಫಲಿತಾಂಶ ತಿಳಿಯಲಿದೆ. ಇದರಿಂದಾಗಿ ಪ್ರಯೋಗಾಲಯಗಳ ಮೇಲಿನ ಹೊರೆ ಕಡಿಮೆ ಆಗಿದೆ. ಇಷ್ಟಾಗಿಯೂ ಆರ್‍ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ಮಾತ್ರ ನಿಗದಿತ ಸಮಯದೊಳಗೆ ಬರುತ್ತಿಲ್ಲ.

ಸೋಂಕಿನ ಶಂಕಿತರ ಮಾದರಿಗಳನ್ನು ಸಂಗ್ರಹ ಮಾಡಿ ಕಳುಹಿಸಿಕೊಡುವುದು ನಮ್ಮ ಕೆಲಸ. ಸೋಂಕು ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ವರದಿಗಳು ಸ್ವಲ್ಪ ವಿಳಂಬವಾಗುತ್ತಿರಬಹುದು. ವರದಿ ಬರುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿ ಎಂದು ಸೂಚಿಸುತ್ತಿದ್ದೇವೆ ಎಂದು ಜ್ವರ ಚಿಕಿತ್ಸಾಲಯದ ವೈದ್ಯರೊಬ್ಬರು ಹೇಳಿದ್ದಾರೆ.

ಪರೀಕ್ಷೆಗೆ ಒಳಪಟ್ಟವರು ಏನು ಮಾಡಬೇಕು?

ಪರೀಕ್ಷೆ ವರದಿ ಬರುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು. ಕುಟುಂಬದ ಸದಸ್ಯರೊಂದಿಗೆ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು. ಯಾವಾಗಲೂ ಮುಖಗವಸು ಧರಿಸಿರಬೇಕು. ಕೋವಿಡ್ ಪರೀಕ್ಷೆಯ ಫಲಿತಾಂಶವನ್ನು ದೂರವಾಣಿ ಮೂಲಕ ಅಥವಾ ವೈಯಕ್ತಿಕವಾಗಿ ತಿಳಿಸಲಾಗುತ್ತದೆ. ಕೋವಿಡ್ ಸೋಂಕು ದೃಢಪಟ್ಟಲ್ಲಿ ಬೇರೆ ಕಾಯಿಲೆಗಳಿಲ್ಲದ 50 ವರ್ಷದೊಳಗಿನವರು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News