ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ಇಂದು ವರ್ಗಾವಣೆ ಕೌನ್ಸಲಿಂಗ್

Update: 2020-08-05 16:11 GMT

ಬೆಂಗಳೂರು, ಆ.5: ಕಲ್ಯಾಣ ಕರ್ನಾಟಕ ಭಾಗ(ಸಿ ವಲಯ)ದಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿಪೂರ್ವ ಕಾಲೇಜು ಉಪನ್ಯಾಸಕರುಗಳಿಗೆ ವಿಶೇಷ ಪ್ರಕರಣದಡಿ ವರ್ಗಾವಣೆ ಸಂಬಂಧ ಇಂದು ಕೌನ್ಸಲಿಂಗ್ ನಡೆಸಲಾಗುತ್ತಿದೆ.  

ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಕೊಠಡಿಯಲ್ಲಿ ವಿಡಿಯೋ ಸಂವಾದದ ಮೂಲಕ ವರ್ಗಾವಣೆ ಕೌನ್ಸಲಿಂಗ್ ನಡೆಸಲಾಗುತ್ತಿದೆ. ಕನ್ನಡ ವಿಷಯದ ಕೌನ್ಸಲಿಂಗನ್ನು ಮಧ್ಯಾಹ್ನ 2ರಿಂದ 3ಗಂಟೆವರೆಗೆ, ಸಮಾಜಶಾಸ್ತ್ರ ವಿಷಯಕ್ಕೆ ಮಧ್ಯಾಹ್ನ 3ರಿಂದ 4 ಹಾಗೂ ರಸಾಯನಶಾಸ್ತ್ರ ವಿಷಯಕ್ಕೆ ಮಧ್ಯಾಹ್ನ 4ರಿಂದ 5ರವರೆಗೆ ಸಮಯ ನಿಗದಿ ಮಾಡಲಾಗಿದೆ.

ಸಿ ವಲಯದ ಅವಶ್ಯಕ ಹುದ್ದೆಗಳಿಗೆ ಮಾತ್ರ ಕೌನ್ಸಲಿಂಗ್ ನಡೆಸಲಾಗುತ್ತಿದೆ. ಹುದ್ದೆಯ ಸೇವಾ ಜೇಷ್ಠತಾ ಅನುಸಾರ ಕೌನ್ಸಲಿಂಗ್ ಪ್ರಕ್ರಿಯೆ ನಡೆಸಲಾಗುವುದು. ವರ್ಗಾವಣೆ ಕೌನ್ಸಲಿಂಗ್‍ನಲ್ಲಿ ಉಪನ್ಯಾಸಕರಿಗೆ ಬಿ ವಲಯವನ್ನು ತೋರಿಸಲಾಗುತ್ತದೆ. ಬಿ ವಲಯದಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದಿದ್ದಲ್ಲಿ ಎ ವಲಯದ ಖಾಲಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News