ಕಾಫಿನಾಡಿನಲ್ಲಿ ಸತತ ಮಳೆಯ ಅಬ್ಬರಕ್ಕೆ ಜನತೆ ತತ್ತರ

Update: 2020-08-06 18:42 GMT

ಚಿಕ್ಕಮಗಳೂರು, ಆ.6: ಕಳೆದ ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಆಶ್ಲೇಷ ಮಳೆ ಜಿಲ್ಲೆಯಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದು, ಮಹಾಮಳೆಗೆ ಮಲೆನಾಡು ಜನರು ತತ್ತರಿಸಿ ಹೋಗಿದ್ದಾರೆ. ಗುಡ್ಡ ಕುಸಿತದಿಂದ ಮಲೆನಾಡು ಭಾಗದಲ್ಲಿ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ, ತುಂಬಿ ಹರಿಯುತ್ತಿರುವ ನದಿಗಳು ನದಿ ಪಾತ್ರ ಹೊಲಗದ್ದೆ, ಕಾಫಿ, ಅಡಿಕೆ ತೋಟಗಳಿಗೆ ನುಗ್ಗಿ ಬೆಳೆ ನಷ್ಟ ಸಂಭವಿಸಿದೆ. ಭಾರೀ ಗಾತ್ರದ ಮರಗಳು ಧರೆಗುರುಳಿ ಮಲೆನಾಡಿನಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನರು ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ. ಮೂರು ದಿನಗಳಿಂದ ಭಾರೀ ಗಾಳಿ ಮತ್ತು ಮಳೆಯಿಂದ ಬೇಸತ್ತು ಹೋಗಿದ್ದ ಜನತೆಗೆ ಗುರುವಾರ ಮಳೆ ಮತ್ತು ಗಾಳಿಯ ಆರ್ಭಟ ಸ್ವಲ್ಪಮಟ್ಟಿಗೆ ಕಡಿಮೆಯಾದ ಪರಿಣಾಮ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಮೂಡಿಗೆರೆ ತಾಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಹೇಮಾವತಿ ನದಿ ಉಕ್ಕಿ ಹರಿದಿದ್ದು, ಹಲವು ಗ್ರಾಮಗಳಲ್ಲಿನ ಭತ್ತದ ಗದ್ದೆಗಳು ಜಲಾವೃತಗೊಂಡಿದ್ದರೆ, ಮನೆಗಳು ಜಖಂಗೊಂಡು, ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ.

ಭಾರೀ ಮಳೆಗೆ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ರಾತ್ರಿಯಿಡೀ ಮುಳುಗಿದ್ದು, ಗುರುವಾರ ಬೆಳಗ್ಗೆ ಸೇತುವೆ ಮೇಲೆ ಮೂರು ಅಡಿ ನೀರು ಹರಿದಿದೆ. ಗುರುವಾರ ಮಳೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಸೇತುವೆ ಮೇಲೆ ಹರಿಯುತ್ತಿದ್ದ ನೀರು ಇಳಿದಿದೆಯಾದರೂ ನದಿಯಲ್ಲಿ ನೀರಿನ ಹರಿವು ತೀವ್ರಗೊಂಡಿದೆ.

ಕೊಟ್ಟಿಗೆಹಾರ-ಕಳಸ ಸಂಪರ್ಕ ರಸ್ತೆ ಮೇಲೆ ಬೃಹತ್ ಮರಗಳು, ಮಣ್ಣು ಕುಸಿದು ರಸ್ತೆ ಸಂಪರ್ಕ ಬೆಳಗಿನವರೆಗೂ ಸ್ಥಗಿತಗೊಂಡಿತ್ತು. ಗುರುವಾರ ಮಧ್ಯಾಹ್ನ ವೇಳೆ ರಸ್ತೆ ಸಂಪರ್ಕ ಮತ್ತೆ ಆರಂಭವಾಗಿದೆ. ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯ ಚೆನ್ನಡ್ಲು ಗ್ರಾಮದಲ್ಲಿ ಈ ಬಾರಿಯಯೂ ಮತ್ತೆ ಭೂ ಕುಸಿತ ಆರಂಭವಾಗಿದ್ದು, ನಿವಾಸಿಗಳ ನಿದ್ದೆಗೆಡಿಸಿದೆ. ಕಳಸ ಪಟ್ಟಣ ಸಮೀಪದ ಬಾಳಗಲ್ ಎಂಬಲ್ಲಿ ಉದಯ್ ಎಂಬವರ ಮನೆ ಮೇಲೆ ಬೃಹತ್ ಮರ ಉರುಳಿ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಪಟ್ಟಣ ಸಮೀಪದ ಕಲ್ಲುಬಾವಿ ಬಡಾವಣೆ ಸಂಪರ್ಕ ರಸ್ತೆ ಕುಸಿದು ಬಿದ್ದಿದೆ.
ಶೃಂಗೇರಿ ಪಟ್ಟಣ ಸಮೀಪ ಹರಿಯುವ ತುಂಗಾನದಿ ಉಕ್ಕಿ ಹರಿದ ಪರಿಣಾಮ ಶಾರದಾಂಬ ದೇವಾಲಯದ ಸಮೀಪದ ವಾಹನ ನಿಲುಗಡೆ ಪ್ರದೇಶವಾದ ಗಾಂಧಿ ಮೈದಾನ ಜಲಾವೃತಗೊಂಡಿತ್ತು. ಇನ್ನು ತಾಲೂಕಿನ ಶಂಕ್ಲಾಪುರ ಗ್ರಾಮದ ನಾಗೇಶ್‌ಗೌಡ ಎಂಬವರ ಮನೆ ಮೇಲೆ ಮರ ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ.

ಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಂತೆ ಮೈದಾನ ನದಿ ನೀರಿನಿಂದ ಜಲಾವೃತಗೊಂಡು ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿತ್ತು. ಭದ್ರಾ ನದಿ ಪಾತ್ರದಲ್ಲಿರುವ ಅಡಿಕೆ ತೋಟ, ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಗುರುವಾರ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ್ದ ನೀರು ಇಳಿದಿದೆ.

ಶೃಂಗೇರಿ-ಜಯಪುರ, ಬಾಳೆಹೊನ್ನೂರು-ಜಯಪುರ ರಸ್ತೆ ಬದಿಗಳಲ್ಲಿ ಧರೆ ಕುಸಿತ ಉಂಟಾಗಿದ್ದಲ್ಲದೆ ಭಾರೀ ಗಾತ್ರದ ಮರ ಮತ್ತು ಮಣ್ಣು ರಸ್ತೆ ಮೇಲೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ನರಸಿಂಹರಾಜಪುರದಲ್ಲಿ ಭಾರೀ ಮಳೆಗೆ ರಾಜ್ಯ ಹೆದ್ದಾರಿ 17 ಬಾಳೆಹೊನ್ನೂರು ಜಲದುರ್ಗದ ಸಮೀಪ ರಸ್ತೆ ಪಕ್ಕದಲ್ಲಿ ಕುಸಿತ ಉಂಟಾಗಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಮಲೆನಾಡಿನಲ್ಲಿನ ಮಳೆಯ ಆರ್ಭಟಕ್ಕೆ ಜಲಪಾತಗಳು ತುಂಬಿ ಹರಿಯುತ್ತಿದ್ದು, ತರೀಕೆರೆ ತಾಲೂಕಿನ ಹೆಬ್ಬೆ ಜಲಪಾತ ಮೈದುಂಬಿ ಹರಿಯುತ್ತಿದೆ. ಜಿಲ್ಲೆಯ ಚಿಕ್ಕಮಗಳೂರು, ತರೀಕೆರೆ, ಕಡೂರು ಬಾಗದಲ್ಲಿ ಸಾಧಾರಣ ಮಳೆಯಾಗಿದೆ.

ಮೊದಲ ಬಲಿ
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮಲೆನಾಡಿನಲ್ಲಿ ಸಂಭವಿಸಿದ ಅತಿವೃಷ್ಟಿಗೆ 10ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಈ ಬಾರಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕಡೂರು ತಾಲೂಕಿನಲ್ಲಿ ರೈತನೊಬ್ಬ ಬಲಿಯಾಗಿದ್ದಾರೆ. ಬುಧವಾರ ರಾತ್ರಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದ್ದು, ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಬೀಸಿದ ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ರೈತ ಪರಮೇಶ್ವರಪ್ಪ (38) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಸ್ಥಳಕ್ಕೆ ಕಡೂರು ತಹಶೀಲ್ದಾರ್, ಯಗಟಿ ಪೊಲೀಸ್ ಠಾಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News