ಬೆಂಗಳೂರಿನ ಉದ್ಯಮಿಯ ಹತ್ಯೆ ಪ್ರಕರಣದಲ್ಲಿ ತಿರುವು: ಆಸ್ತಿಯ ವಿಚಾರದಲ್ಲಿ ಮಗನಿಂದಲೇ ಕೊಲೆ

Update: 2020-08-09 12:02 GMT

ಬೆಂಗಳೂರು, ಆ.9: ಆಸ್ತಿ ವಿಚಾರ ಸಂಬಂಧ ತಂದೆಯನ್ನು ಕೊಲೆಗೈದಿರುವ ಕೃತ್ಯ ಇಲ್ಲಿನ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಅನುಮಾನಾಸ್ಪದ ಸಾವಿನ ಪ್ರಕರಣ ಸಂಬಂಧ ಶವ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ರಾಮಮೂರ್ತಿನಗರ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ರಾಜೇಶ್ ಎಂಬಾತ ಕೊಲೆಗೈದಿರುವ ಆರೋಪಿ ಪುತ್ರ ಎಂದು ತಿಳಿದುಬಂದಿದೆ.

ಶನಿವಾರ ಮುಂಜಾನೆ ಪನ್ನೀರ್ ಸೆಲ್ವಂ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯೆ ಅವರನ್ನು ಅಪಹರಿಸಿದ ದುಷ್ಕರ್ಮಿಗಳು ನಂತರ ದೇಹಕ್ಕೆ ವಿಷಯುಕ್ತ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ತದನಂತರ, ಪುತ್ರ ರಾಜೇಶ್ ಪೊಲೀಸ್ ಠಾಣೆಗೆ ದೂರು ನೀಡಿ ತಂದೆಯನ್ನು ಪತ್ತೆ ಮಾಡುವಂತೆ ಒತ್ತಾಯಿಸಿದ್ದ. ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಅನುಮಾನ ವ್ಯಕ್ತಪಡಿಸಿ ರಾಜೇಶ್ ನನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಮಗ ರಾಜೇಶ್ ಹಾಗೂ ಸ್ನೇಹಿತರನ್ನು ಬಂಧಿಸಿದ್ದಾರೆ.

ತಂದೆಯ ಅಕ್ರಮ ಸಂಬಂಧದಿಂದ ಆಸ್ತಿಯಲ್ಲಿ ಎರಡು ಪಾಲು ಆಗುತ್ತೆ ಎಂದು ಭಯಭೀತನಾಗಿ ಪುತ್ರ ರಾಜೇಶ್ ಈ ರೀತಿ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News