ಕೊರೋನ ಸೊಂಕಿತರನ್ನು ಕಳಂಕಿತರಂತೆ ನೋಡಬೇಡಿ: ಸಚಿವ ಡಾ.ಕೆ.ಸುಧಾಕರ್ ಮನವಿ

Update: 2020-08-10 16:38 GMT

ಬೆಂಗಳೂರು, ಆ. 10: ಕೋವಿಡ್-19 ಸೊಂಕಿತರನ್ನು ಕಳಂಕಿತರಂತೆ ನೋಡುತ್ತಿರುವುದು ದುರದೃಷ್ಟಕರ. ಕೊರೋನ ಸೋಂಕು ಅದೊಂದು ಜಾಗತಿಕವಾಗಿ ಕಾಡುತ್ತಿರುವ ಸಾಮಾನ್ಯ ಕಾಯಿಲೆಯಾಗಿದ್ದು, ಯಾರಿಗೆ ಬೇಕಾದರು ಬರಹುದು. ದಯವಿಟ್ಟು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರನ್ನು ಈ ಸಮಾಜ ಗೌರವದಿಂದ ಕಾಣಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಮನವಿ ಮಾಡಿದ್ದಾರೆ.

ಸೋಮವಾರ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಆನ್‍ಲೈನ್ ಮೂಲಕ ಹಮ್ಮಿಕೊಂಡಿದ್ದ `ಕೋವಿಡ್ ಕಳಂಕ: ಚಿಂತನಾ-ಮಂಥನಾ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು, ಗುಣಮುಖರಾದವರನ್ನು ಗೌರವದಿಂದ ಕಾಣಬೇಕು, ಅದೊಂದು ಕಳಂಕ ಎಂಬಂತೆ ಯಾರೂ ನಡೆದುಕೊಳ್ಳಬಾರದು, ಈ ಕಳಂಕವನ್ನು ಹೋಗಲಾಡಿಸುವುದರಲ್ಲಿ ಸಮಾಜದ ಪಾತ್ರ ಅತಿಮುಖ್ಯ ಎಂದು ಅಭಿಪ್ರಾಯಪಟ್ಟರು.

ಜಯದೇವ ಹೃದ್ರೋಗ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಮಂಜುನಾಥ್ ಮಾತಾನಾಡಿ, ಕೊರೋನ ರೋಗದಿಂದ ಸತ್ತವರಿಗಿಂತ, ಈ ರೋಗದ ಭಯದಿಂದ ಸತ್ತವರು ಹೆಚ್ಚಾಗಿರುವುದು ಈ ಸಮಾಜದ ಮನಸ್ಥಿತಿಯನ್ನು ತೋರಿಸುತ್ತದೆ. ಇದೊಂದು ಸಾಮಾನ್ಯವಾಗಿ ಬಂದು ಹೋಗುವ ಕಾಯಿಲೆಯಾಗಿದ್ದು ಯಾರೂ ಭಯಪಡಬಾರದು. ಜನರಲ್ಲಿ ಧೈರ್ಯ ತುಂಬುವ ಸಕರಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುವ ದೊಡ್ಡ ಜವಾಬ್ಧಾರಿ ಮಾಧ್ಯಮಗಳ ಮೇಲಿದೆ ಎಂದರು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕೋವಿಡ್ ಕಳಂಕವನ್ನು ಹೋಗಲಾಡಿಸುವುದು ಹೇಗೆ ಎನ್ನುವುದಾಗಿದ್ದು, ರೋಗವನ್ನಾಗಲಿ ಅಥವಾ ಸೋಂಕಿತರನ್ನಾಗಲಿ ವೈಭವೀಕರಿಸುವ ಅಗತ್ಯವಿಲ್ಲ. ಗುಣಮುಖರಾದಾಗ ಅವರು ಎಲ್ಲರಂತೆಯೇ ಆರೋಗ್ಯವಂತರು ಎಂಬುದನ್ನು ಮರೆತು ಮಾನವೀಯತೆ ಕಳೆದುಕೊಳ್ಳಬಾರದು ಎಂದು ಡಾ.ಮಂಜುನಾಥ್ ಇದೇ ವೇಳೆ ಮನವಿ ಮಾಡಿದರು.

ಸಂಸದೆ ಸುಮಲತಾ ಅಂಬರೀಷ್ ಮಾತಾನಾಡಿ, ತಾನು ಈ ಸೋಂಕಿಗೆ ತುತ್ತಾದ ಅನುಭವಗಳನ್ನು ಹಂಚಿಕೊಂಡರು. ಇದೊಂದು ಸಾಮಾನ್ಯ ಕಾಯಿಲೆ. ಆದರೆ, ಇದನ್ನು ಪೆಡಂಭೂತವಾಗಿ ಚಿತ್ರಿಸಲಾಗುತ್ತಿದೆ, ಇದರಿಂದ ಗುಣಮುಖರಾದ ಅನೇಕ ವಿಐಪಿಗಳನ್ನು ಹಾಗೂ ಸಾಮಾನ್ಯ ಜನರನ್ನು ಸಮಾಜ ಕಾಣುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ಹೇಳಿದರು.

ಆನ್‍ಲೈನ್ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರಾದ ತಾರಾ, ರಶ್ಮಿಕಾ, ಪ್ರಕೃತಿ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಕೋವಿಡ್ ಕಳಂಕವನ್ನು ಸ್ವತಃ ಅನುಭವಿಸಿರುವ ಹಾಗೂ ಗುಣವಾಗಿರುವ ಭಗವಾನ್ ಹಾಗೂ ವೆಂಕಟರಾಮ್ ಅವರು ಸೇರಿದಂತೆ ಇತರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News