×
Ad

ರೈತ ಬೆಳೆ ಸಮೀಕ್ಷೆ ಆ್ಯಪ್ ಲೋಕಾರ್ಪಣೆಗೊಳಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2020-08-13 00:19 IST

ಬೆಂಗಳೂರು, ಆ.12: ಕೃಷಿಕರು ಮತ್ತು ಕೃಷಿ ಇಲಾಖೆ ನಡುವೆ ಇನ್ನಷ್ಟು ಉತ್ತಮ ಬಾಂಧವ್ಯ ವೃದ್ಧಿಸಲು ರೈತರ ಅನುಕೂಲಕ್ಕಾಗಿ ರಾಜ್ಯ ಇ ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ‘ರೈತ ಬೆಳೆ ಸಮೀಕ್ಷೆ ಆ್ಯಪ್’ ಅನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಆನ್‍ಲೈನ್ ಮೂಲಕ ಲೋಕಾರ್ಪಣೆಗೊಳಿಸಿದರು.

ಈ ಆ್ಯಪ್ ಮೂಲಕ ಅಂತರ್ಜಾಲದ ಸಹಾಯದಿಂದ ಕೃಷಿಕರು ಲಾಭ ಪಡೆಯಲು ತಮ್ಮ ಅಂಗೈನಲ್ಲಿಯೇ ಇನ್ನು ಮುಂದೆ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮೀಕ್ಷೆ ನಡೆಸುವವರ ವಿವರ ಲಭ್ಯವಾಗಲಿದೆ.

ಈ ಮೊಬೈಲ್ ಅಪ್ಲೀಕೇಷನ್ ಅನ್ನು ರೈತರು ಆಂಡ್ರೈಡ್ ಮೊಬೈಲ್ ಸಹಾಯದಿಂದ ಪ್ಲೇ ಸ್ಟೋರ್‍ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಸುಮಾರು 60 ಎಂಬಿ ಸಾಮರ್ಥ್ಯವುಳ್ಳ ಈ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ನೋಡುವುದಾದರೆ, ರೈತರು ತಮ್ಮ ಅಂಡ್ರೈಡ್ ಮೊಬೈಲ್‍ನಲ್ಲಿ ಪ್ಲೇಸ್ಟೋರ್ ಮೂಲಕ ಬೆಳೆ ಸಮೀಕ್ಷೆ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಂಬರ್ ಅನ್ನು ಓಟಿಪಿ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು.

ನೋಂದಣಿಯಾದ ನಂತರ ತಮ್ಮ ಜಮೀನಿನ ಜಿಲ್ಲೆ, ತಾಲೂಕು, ಗ್ರಾಮ, ಸರ್ವೆ ನಂಬರ್ ಸೇರಿದಂತೆ ಜಮೀನಿನ ವಿವರಗಳನ್ನು ನಮೂದಿಸಿ ಜಮೀನಿನ ಮಾಹಿತಿ ಹಾಗೂ ತಮ್ಮ ಗ್ರಾಮದ ಉIS ನಕ್ಷೆಯನ್ನು ಡೌನ್ಲೋಡ್ ಮಾಡಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಹಾಗೂ ಇತರೆ ವಿವರಗಳನ್ನು ಮತ್ತು ಛಾಯಾಚಿತ್ರಗಳನ್ನು ಮೊಬೈಲ್ ಆ್ಯಪ್‍ನಲ್ಲಿ ಸಂಗ್ರಹಿಸಿ ಅಪ್ಲೋಡ್ ಮಾಡಬೇಕು.

ಆಗ ರೈತರ ಸರ್ವೆ ನಂಬರ್ ವಾರು ಜಮೀನಿನ ಬೆಳೆಯ ವಿವರಗಳನ್ನು ‘ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್’ ನಲ್ಲಿ ಸಂಗ್ರಹಣೆ ಮಾಡಿ ವಿವಿಧ ಯೋಜನೆಗಳಿಗೆ ಬಳಸಲಾಗುತ್ತದೆ. ರೈತರ ಅನುಕೂಲಕ್ಕಾಗಿ ಹಾಗೂ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ  ಈ ಆಪ್ ಅನ್ನು ಪರಿಚಯಿಸಲಾಗುತ್ತಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಬಿ.ಸಿ.ಪಾಟೀಲ್ ರೈತರಲ್ಲಿ ಮನವಿ ಮಾಡಿದ್ದಾರೆ.

ಮಾಹಿತಿಗಾಗಿ: https://play.google.com/store/apps/details?id=com.csk.KariffTPKfarmer.cropsurvey ಈ ಲೈವ್ ಆ್ಯಪ್‍ಗೆ ಲಿಂಕ್ ಅನ್ನು ಕ್ಲಿಕ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News