ಬೆಂಗಳೂರು ಹಿಂಸಾಚಾರದಲ್ಲಿ ಎಸ್ಡಿಪಿಐ, ಪಿಎಫ್ಐ ಪಾತ್ರ: ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು, ಆ. 13: ಡಿ.ಜಿ. ಹಳ್ಳಿ ಮತ್ತು ಕೆ.ಜಿ.ಹಳ್ಳಿ ದೊಂಬಿ, ಹಿಂಸಾಚಾರ ಪ್ರಕರಣಗಳಲ್ಲಿ ಎಸ್ಡಿಪಿಐ, ಪಿಎಫ್ಐ ಪಾತ್ರ ಇರುವುದು ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ಆ ಸಂಘಟನೆಗಳ ನಿಷೇಧಕ್ಕೆ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದಿದ್ದ ಗಲಭೆ ವೇಳೆಯೂ ಎಸ್ಡಿಪಿಐ ಹಾಗೂ ಪಿಎಫ್ಐ ಪಾತ್ರದ ಬಗ್ಗೆ ಆರೋಪ ಕೇಳಿಬಂದಿತ್ತು. ಶಾಸಕ ತನ್ವೀರ್ ಸೇಠ್ ಹಲ್ಲೆ ವೇಳೆ ಇದೇ ಸಂಘಟನೆ ಮೇಲೆ ಆರೋಪ ವ್ಯಕ್ತವಾಗಿತ್ತು. ಯಾವುದೇ ಸಂಘಟನೆಯನ್ನು ಏಕಾಏಕಿ ನಿಷೇಧಿಸಲು ಸಾಧ್ಯವಿಲ್ಲ. ಈ ಬಗ್ಗೆ ಕೆಲ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ ಎಂದರು.
ಮೇಲ್ಕಂಡ ಸಂಘಟನೆಗಳನ್ನು ನಿಷೇಧಿಸಲು ಹಲವರು ಆಗ್ರಹಿಸುತ್ತಿದ್ದಾರೆ. ಕಾನೂನಿನಡಿಯಲ್ಲಿ ಕೆಲ ನಿಬಂಧನೆಗಳಿದ್ದು, ವಿಧ್ವಂಸಕ ಹಾಗೂ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರನ್ನು ನಿಷೇಧಿಸಲು ಅವಕಾಶವಿದೆ. ಈ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ ಎಂದ ಅವರು, ಡಿ.ಜಿ.ಹಳ್ಳಿ ಹಿಂಸಾಚಾರದಲ್ಲಿಯೂ ಎಸ್ಡಿಪಿಐ ಪದಾಧಿಕಾರಿಗಳು ಇದ್ದಾರೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.