ಬೆಂಗಳೂರು ಗಲಭೆ, ಕಾಂಗ್ರೆಸ್ ವೈಫಲ್ಯಗಳನ್ನು ಮುಂದಿಟ್ಟು ಪಕ್ಷ ಸಂಘಟನೆ ಮಾಡಿ: ಬಿ.ಎಲ್.ಸಂತೋಷ್ ಸೂಚನೆ

Update: 2020-08-23 17:11 GMT

ಬೆಂಗಳೂರು, ಆ. 23: ರಾಜ್ಯದಲ್ಲಿ ಚುನಾವಣೆ ದೂರ ಇದ್ದರೂ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರಾಜ್ಯ ಬಿಜೆಪಿ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರವಿವಾರ ಪಕ್ಷದ ನೂತನ ಪದಾಧಿಕಾರಿಗಳ ಜೊತೆಗೆ ಸರಣಿ ಸಭೆಗಳನ್ನು ನಡೆಸಿದ ಅವರು ಪಕ್ಷದ ಸಂಘಟನೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು. ರಾಜ್ಯದಲ್ಲಿ ಕೇವಲ ಅಧ್ಯಕ್ಷರು ಮಾತ್ರ ಪ್ರವಾಸ ಮಾಡುವುದಲ್ಲ, ಬದಲಾಗಿ ಎಲ್ಲರೂ ಸಕ್ರೀಯವಾಗಿರಬೇಕು ಎಂದು ಸೂಚಿಸಿದ್ದಾರೆ.

ಉಪಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಪಕ್ಷದ ಸಂಘಟನೆಗೆ ಒತ್ತು ನೀಡಬೇಕು. ಸರಕಾರದ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಪ್ರಚಾರ ಮಾಡುವ ಕೆಲಸವನ್ನು ಈಗಾಗಲೇ ಆರಂಭಿಸಬೇಕು ಎಂದು ತಿಳಿಸಿದ್ದಾರೆಂದು ತಿಳಿದು ಬಂದಿದೆ.

ಬೆಂಗಳೂರು ಗಲಭೆ, ಕಾಂಗ್ರೆಸ್ ವೈಫಲ್ಯ ಮುಂತಾದವುಗಳನ್ನು ಮುಂದಿಟ್ಟು ಪಕ್ಷ ಸಂಘಟನೆ ಮಾಡಬೇಕು, ಕೋವಿಡ್-19 ಸಂದರ್ಭದಲ್ಲಿ ಯಾವ ರೀತಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂಬ ಚರ್ಚೆ ನಡೆದಿದೆ ಎನ್ನಲಾಗಿದೆ. ಪಕ್ಷದ ಚಟುವಟಿಕೆಗಳು ಮುಂದೆ ಹೇಗಿರಬೇಕು, ಸಕ್ರೀಯ ಕೆಲಸ ಕಾರ್ಯಕ್ರಮಗಳನ್ನು ಹೇಗೆ ರೂಪಿಸಬೇಕು ಎಂಬ ನಿಟ್ಟಿನಲ್ಲೂ ಪದಾಧಿಕಾರಿಗಳಿಗೆ ಬಿಎಲ್ ಸಂತೋಷ್ ಸಲಹೆಗಳನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News