ಗುಂಡು ಹಾರಿಸಿ ಉದ್ಯಮಿಯ ಹತ್ಯೆಗೆ ಯತ್ನ ಪ್ರಕರಣ: ಇಬ್ಬರ ಬಂಧನ

Update: 2020-08-24 12:10 GMT

ಬೆಂಗಳೂರು, ಆ.24: ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದ ಆರೋಪದಡಿ ಇಬ್ಬರನ್ನು ಕೆ.ಆರ್.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್.ಪುರಂ ನಿವಾಸಿಗಳಾದ ಸುಹೇಲ್ ಪಾಷಾ ಮತ್ತು ಶೋಹೆಬ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ರಮಝಾನ್ ಸಂದರ್ಭದಲ್ಲಿ ಆರೋಪಿ ಸುಹೇಲ್ ಪಾಷಾ ಮತ್ತು ಸ್ನೇಹಿತ ಮಿರ್ಜಾ ಖಾನ್ ನಡೆಸುತ್ತಿದ್ದ ಸಮೋಸ ಅಂಗಡಿ ಬಳಿ ಸೇರುತ್ತಿದ್ದ ಜನರ ವಿಚಾರವಾಗಿ ರಿಯಲ್ ಎಸ್ಟೇಟ್ ಉದ್ಯಮಿ ಬಾಬು ಹಾಗೂ ಸುಹೇಲ್ ಪಾಷಾ ನಡುವೆ ಗಲಾಟೆಯಾಗಿತ್ತು.

ಈ ಘಟನೆಯಿಂದ ಆರೋಪಿ ಸುಹೇಲ್ ಪಾಷಾನಿಗೆ ಆಟೋ ಬಾಬು ಅವರ ಮೇಲೆ ದ್ವೇಷವಿತ್ತು. ಬಾಬು ಮೇಲೆ ಹಲ್ಲೆ ಮಾಡಬೇಕೆಂದು ಸ್ನೇಹಿತ ಮಿರ್ಜಾ ಖಾನ್‍ನೊಂದಿಗೆ ಸುಹೇಲ್ ಚರ್ಚಿಸಿದ್ದ. ತದನಂತರ, ಬಾಬುವಿನಿಂದ ಹಲ್ಲೆಗೊಳಗಾದ ಮತ್ತೊಬ್ಬ ಸ್ನೇಹಿತ ಶೋಹೆಬ್ ನನ್ನು ತನ್ನ ಜೊತೆ ಸೇರಿಸಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಇದರಿಂದ ಬಾಬು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದನು. ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News