ಆಹ್ವಾನ ಪತ್ರಿಕೆ ಕೊಡುವ ನೆಪದಲ್ಲಿ ಚಿನ್ನದ ಸರ ಕದ್ದು ಮಹಿಳೆ ಪರಾರಿ; ದೂರು ದಾಖಲು

Update: 2020-08-24 13:27 GMT

ಬೆಂಗಳೂರು, ಆ.24: ಗೃಹ ಪ್ರವೇಶದ ಆಹ್ವಾನ ಪತ್ರಿಕೆ ಕೊಡುವ ಸೋಗಿನಲ್ಲಿ ಮನೆಗೆ ಹೋಗಿದ್ದ ಮಹಿಳೆ 48 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ಇಲ್ಲಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೇವಸಂದ್ರ ನಿವಾಸಿ ನಂದಿನಿ ವಂಚನೆಗೊಳಗಾದವರು ಎಂದು ತಿಳಿದುಬಂದಿದೆ.

ಆ.20ರಂದು ನಂದಿನಿ ಮಧ್ಯಾಹ್ನ ಮನೆಯಲ್ಲಿ ಒಬ್ಬರೇ ಇದ್ದರು. ಅಂದು ಮನೆ ಮುಂದೆ ಬಂದಿದ್ದ ಅಪರಿಚಿತ ಮಹಿಳೆ, ಮನೆಯಲ್ಲಿ ನಿಮ್ಮ ಅತ್ತೆ ಇಲ್ಲವೇ ಎಂದು ಕೇಳಿದ್ದು, ಅದಕ್ಕೆ ನಂದಿನಿ ಇಲ್ಲ ಎಂದಿದ್ದಾರೆ. ಬಳಿಕ ಮಹಿಳೆ, ಗೃಹ ಪ್ರವೇಶದ ಆಹ್ವಾನ ಪತ್ರಿಕೆ ಕೊಡಲು ಬಂದಿರುವುದಾಗಿ ಹೇಳಿದ್ದಾಳೆ.

ನಿಮ್ಮ ಅತ್ತೆ ಮನೆಯಲ್ಲಿ ಇದ್ದಿದ್ದರೆ ನನಗೆ ಟೀ ಮಾಡಿ ಕೊಡುತ್ತಿದ್ದರು ಎಂದಿದ್ದಾಳೆ. ಆಕೆಯ ಮಾತಿನ ಹಿನ್ನೆಲೆಯಲ್ಲಿ ಮನೆಯೊಳಗೆ ಕರೆದು ಕೂರಿಸಿದ್ದರು. ಈ ವೇಳೆ ಚಿನ್ನದ ಸರ ಚೆನ್ನಾಗಿದೆಯಲ್ಲ, ಎಲ್ಲಿ ಮಾಡಿಸಿದ್ದು ಎಂದು ಕೇಳಿದ್ದಾಳೆ. ಬಳಿಕ ಅದನ್ನು ನೋಡಿ ಕೊಡುವುದಾಗಿ ಹೇಳಿ ಬಿಚ್ಚಿಸಿಕೊಂಡಿದ್ದಾಳೆ. ನಂದಿನಿ ಟೀ ಮಾಡಲೆಂದು ಅಡುಗೆ ಕೊಠಡಿಗೆ ಹೋದಾಗ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಮಂಜುಳಾ ಎಂಬಾಕೆ ವಿರುದ್ಧ ದೂರು ನೀಡಲಾಗಿದ್ದು, ಮನೆಯ ಸುತ್ತಮುತ್ತಲಿನ ರಸ್ತೆಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News