ಮಂದದೃಷ್ಟಿ ಅಥವಾ ಮಸುಕು ದೃಷ್ಟಿಗೆ ವಿಲಕ್ಷಣ ಕಾರಣಗಳು ಯಾವುದು ಗೊತ್ತಾ?

Update: 2020-08-24 14:23 GMT

ನಿಮಗೆ ದೃಷ್ಟಿ ಮಸುಕಾಗಿರುವ ಅನುಭವ ಉಂಟಾಗುತ್ತಿದೆಯೇ ಅಥವಾ ದೂರದ ವಸ್ತುಗಳನ್ನು ನೋಡಲು ಕಷ್ಟವಾಗುತ್ತಿದೆಯೇ? ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ನಿಮ್ಮ ಕಣ್ಣುಗಳಿಗೆ ಆಯಾಸವಾಗಿದೆ ಎಂದು ಅನಿಸುತ್ತಿದೆಯೇ? ನಿಮಗೆ ಆಗಾಗ್ಗೆ ತಲೆನೋವು ಕಾಡುತ್ತದೆಯೇ? ಇವೆಲ್ಲ ನಿಮ್ಮ ದುರ್ಬಲಗೊಳ್ಳುತ್ತಿರುವ ಕಣ್ಣುಗಳು ನಿಮಗೆ ನೀಡುತ್ತಿರುವ ಕೆಲವು ಸಂಕೇತಗಳಾಗಿರಬಹುದು. ಹಿಂದೆಲ್ಲ ವಯಸ್ಸಾದವರು ಕಣ್ಣುಗಳ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರು,ಆದರೂ ಪ್ರತಿಯೊಬ್ಬರೂ ದುರ್ಬಲ ದೃಷ್ಟಿಯಿಂದ ನರಳುತ್ತಿರಲಿಲ್ಲ. ನಿಮ್ಮ ಅಜ್ಜ-ಅಜ್ಜಿಗೆ 70 ವರ್ಷ ವಯಸ್ಸಾಗುವವರೆಗೆ ಅವರು ಕನ್ನಡಕ ಧರಿಸಿದ್ದನ್ನು ನೀವು ನೋಡಿರಲಿಕ್ಕಿಲ್ಲ. ಇಂದು ಹದಿಹರೆಯದ ಮಕ್ಕಳೂ ದೃಷ್ಟಿ ಮಸುಕಾಗಿರುವ ಬಗ್ಗೆ ದೂರಿಕೊಳ್ಳುತ್ತಾರೆ. ಇದು ಎಚ್ಚರಿಕೆಯ ಸಂಕೇತವಾಗಿದ್ದು,ಇದನ್ನು ಖಂಡಿತ ಕಡೆಗಣಿಸಬಾರದು. ಮಂದದೃಷ್ಟಿಗೆ ಕೆಲವು ವಿಲಕ್ಷಣ ಕಾರಣಗಳಿಲ್ಲಿವೆ......

* ಮೊಡವೆ ನಿಯಂತ್ರಣಕ್ಕೆ ಔಷಧಿ ಸೇವನೆ

  ಇದು ನಿಮಗೆ ಆಘಾತವನ್ನುಂಟು ಮಾಡಬಹುದು ಅಲ್ಲವೇ? ಆದರೆ ನೀವು ಮೊಡವೆಗಳು ಏಳದಂತೆ ಔಷಧಿಗಳನ್ನು ಸೇವಿಸುತ್ತಿದ್ದರೆ ದೃಷ್ಟಿ ಸಂಬಂಧಿತ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಮೊಡವೆ ಔಷಧಿಗಳು ಐಸೊಟ್ರಿಟಿನೊಯಿನ್ ಅನ್ನು ಒಳಗೊಂಡಿರುತ್ತವೆ ಮತ್ತು ಇದು ಹಲವಾರು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ. ಇದರಿಂದಾಗಿ ವ್ಯಕ್ತಿಯು ಔಷಧಿ ಸೇವನೆಯ ಅವಧಿಯಲ್ಲಿ ಶುಷ್ಕ ಕಣ್ಣುಗಳು,ಗುಲಾಬಿ ಕಣ್ಣುಗಳು ಅಥವಾ ಕೆಂಗಣ್ಣು ಬೇನೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ ಈ ಔಷಧಿಯ ಸೇವನೆಯು ಗರ್ಭಿಣಿಯರಲ್ಲಿ ಗರ್ಭಪಾತಕ್ಕೂ ಕಾರಣವಾಗಬಹುದು.

* ಹುಳಿ ಆಹಾರಗಳನ್ನು ತಿನ್ನದಿರುವುದು

ವಿಟಾಮಿನ್ ಸಿ ನಮ್ಮ ಶರೀರಕ್ಕೆ ಅಗತ್ಯವಾಗಿರುವ ಪ್ರಮುಖ ವಿಟಾಮಿನ್‌ಗಳಲ್ಲೊಂದಾಗಿದೆ. ಈ ಕೊರೋನ ವೈರಸ್ ಯುಗದಲ್ಲಿ ವಿಟಾಮಿನ್ ಸಿ ಮಹತ್ವ ಹೆಚ್ಚಿನವರಿಗೆ ಗೊತ್ತಾಗಿರಬಹುದು. ಟೊಮೆಟೊ,ಲಿಂಬೆ,ಮಾವು,ಕಿತ್ತಳೆ,ನೆಲ್ಲಿ,ಸ್ಟ್ರಾಬೆರಿ ಇತ್ಯಾದಿಗಳು ಹುಳಿಯಾಗಿದ್ದು,ಇದಕ್ಕೆ ಅವುಗಳಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಸಿ ಕಾರಣವಾಗಿದೆ. ವಿಟಾಮಿನ್ ಸಿ ಕೊರತೆಯು ಫ್ರೀ ರ್ಯಾಡಿಕಲ್ ಗಳಿಂದ ಹಾನಿಗೆ ಕಾರಣವಾಗುತ್ತದೆ ಮತ್ತು ಇದು ಕಣ್ಣಿನ ದೃಷ್ಟಿಗೂ ಹಾನಿಯನ್ನುಂಟು ಮಾಡುತ್ತದೆ. ನೀವು ಸೇವಿಸಲು ವಿಟಾಮಿನ್ ಸಿ ಸಮೃದ್ಧವಾಗಿರುವ ಹಲವಾರು ಆಹಾರಗಳಿವೆ.

* ಅತಿಯಾಗಿ ಓದುವಿಕೆ

 ನೀವು ಅತಿಯಾಗಿ ಓದುತ್ತಿದ್ದು,ಕಣ್ಣುಗಳ ಆಯಾಸವನ್ನು ಶಮನಿಸಲು ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಅದು ನಿಮ್ಮ ಕಣ್ಣುಗಳ ಸ್ಥಿತಿಯನ್ನು ಹದಗೆಡಿಸಬಹುದು. ಕಣ್ಣುಗಳಿಗೆ ವಿರಾಮವನ್ನು ನೀಡದೆ ಅತಿಯಾಗಿ ಓದುವುದು ದೃಷ್ಟಿಗೆ ಕೆಟ್ಟದ್ದು. ಓದುತ್ತಿರುವಾಗಿ ಕಣ್ಣುಗಳನ್ನು ಮಿಟುಕಿಸುವುದಲ್ಲದೆ ಇತರ ಕಣ್ಣಿನ ವ್ಯಾಯಾಮಗಳನ್ನೂ ಮಾಡಬೇಕು. ನಿರಂತರವಾಗಿ ಅಧ್ಯಯನ ಮಾಡುತ್ತಿರುವಾಗ ಪ್ರತಿ 20-30 ನಿಮಿಷಗಳಿಗೊಮ್ಮೆ ಕಣ್ಣುಗಳಿಗೆ ವಿರಾಮ ನೀಡಬೇಕು. ನೀವು ಗಂಟೆಗಟ್ಟಲೆ ಓದುತ್ತಿದ್ದರೆ ಕಣ್ಣುಗಳಿಗೆ ಆರಾಮ ನೀಡಲು ಅವುಗಳನ್ನು ನೀರಿನಿಂದ ತೊಳೆದುಕೊಳ್ಳಿ ಅಥವಾ ಮಂಜುಗಡ್ಡೆಯ ತುಣುಕನ್ನು ಕಣ್ಣುಗಳ ಮೇಲಿರಿಸಿಕೊಳ್ಳಿ. ಇದು ಕಣ್ಣುಗಳಿಗೆ ಹಿತಕರ ಅನುಭವವನ್ನು ನೀಡುತ್ತದೆ ಮತ್ತು ಸುಮಾರು ಸಮಯದವರೆಗೆ ಅವುಗಳಿಗೆ ಆಯಾಸವಾಗುವುದಿಲ್ಲ.

* ಮೊಬೈಲ್ ಫೋನಿನ ಅತಿಯಾದ ಬಳಕೆ

ಮೊಬೈಲ್ ಫೋನ್,ಲ್ಯಾಪ್‌ಟಾಪ್,ಟಿವಿ ಮತ್ತು ಕಂಪ್ಯೂಟರ್‌ಗಳಂತಹ ಸ್ಕ್ರೀನ್ ಗ್ಯಾಜೆಟ್‌ಗಳನ್ನು ನೀವು ಅತಿಯಾಗಿ ಬಳಸುತ್ತಿದ್ದರೆ ಕಾಲಕ್ರಮೇಣ ಕಣ್ಣುಗಳು ದುರ್ಬಲಗೊಳ್ಳಬಹುದು. ಹೆಚ್ಚಿನ ಡಿಜಿಟಲ್ ಸ್ಕ್ರೀನ್‌ಗಳಲ್ಲಿ ನೀಲಿ ಬೆಳಕು ಬಳಕೆಯಾಗುತ್ತದೆ ಮತ್ತು ಇದು ಕಣ್ಣುಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ದಿನಕ್ಕೆ ಒಂದೆರಡು ಗಂಟೆಗಳಿಗಿಂತ ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್‌ಗಳೊಂದಿಗೆ ಕಳೆಯುವವರಿಗೆ ದುರ್ಬಲ ಕಣ್ಣುಗಳ ಸಮಸ್ಯೆ ಹೆಚ್ಚಾಗಿರುತ್ತದೆ.

* ಬಾಲ್ಯದಲ್ಲಿ ಮನೆಯ ಹೊರಗೆ ಹೆಚ್ಚು ಸಮಯ ಆಡಿರದಿದ್ದರೆ

ಇದು ಎಲ್ಲಕ್ಕಿಂತ ಹೆಚ್ಚು ವಿಲಕ್ಷಣ ಕಾರಣವಾಗಿದೆ. ಬಾಲ್ಯದಲ್ಲಿ ನೀವು ಹೆಚ್ಚು ಸಮಯ ಮನೆಯೊಳಗೇ ಕಳೆದಿದ್ದರೆ ನೀವು ಮಂದದೃಷ್ಟಿಯ ಅಪಾಯವನ್ನು ಎದುರಿಸುತ್ತಿರಬಹುದು. ಇಂದು ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಮತ್ತು ಇದು ಅವರ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಅವರಿಗೆ ವಿಟಾಮಿನ್ ಡಿ ಕೊರತೆ ಕಾಡುವುದು ಮಾತ್ರವಲ್ಲ,ಕಣ್ಣಿನ ಸಮಸ್ಯೆಗಳೂ ಉಂಟಾಗುತ್ತವೆ. ಹೆತ್ತವರು ತಮ್ಮ ಮಕ್ಕಳಿಗೆ ಹೊರಗೆ ಆಟವಾಡಲು ಉತ್ತೇಜಿಸಬೇಕು. ಒಟ್ಟಾರೆ ಆರೋಗ್ಯಕ್ಕಾಗಿ ಮಕ್ಕಳು ಬೆಳಿಗ್ಗೆ ಮತ್ತು ಸಂಜೆ ಬಿಸಿಲಿಗೆ ತಮ್ಮನ್ನು ಒಡ್ಡಿಕೊಳ್ಳುವಂತೆ ನೋಡಿಕೊಳ್ಳಬೇಕು.

 ಮಂದದೃಷ್ಟಿ ಅಥವಾ ಮಸುಕಾದ ದೃಷ್ಟಿಗೆ ಇವು ಕೆಲವು ಕಾರಣಗಳಾಗಿವೆ. ಇವುಗಳನ್ನು ನಿವಾರಿಸುವ ಮೂಲಕ ನೀವು ದೃಷ್ಟಿಗೆ ಸಂಬಂಧಿಸಿದ ಅಪಾಯಗಳಿಂದ ದೂರವಿರಬಹುದು. ಆರೋಗ್ಯಕರ ಆಹಾರ ಸೇವನೆ ಮತ್ತು ಕಣ್ಣುಗಳಿಗೆ ವ್ಯಾಯಾಮ ನೀಡುವ ಮೂಲಕ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News