ಆಧುನಿಕ ತಂತ್ರಜ್ಞಾನದ ಮೂಲಕ ಕೊಳಚೆ ನೀರು ಶುದ್ಧೀಕರಣ: ಡಿಸಿಎಂ ಡಾ.ಅಶ್ವತ್ಥ ನಾರಾಯಣ

Update: 2020-08-27 17:22 GMT

ಬೆಂಗಳೂರು, ಆ. 27: `ನಗರದ ವೃಷಭಾವತಿ ನದಿಯಿಂದ ರಾಮನಗರ ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ಜಮೀನುಗಳಿಗೆ ಕೊಳಚೆ ನೀರು ಹೋಗುತ್ತಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಕೊಳಚೆ ನೀರನ್ನು ಶುದ್ದೀಕರಿಸಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಇಂದಿಲ್ಲಿ ಹೇಳಿದ್ದಾರೆ.

ಗುರುವಾರ ರಾಮನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ವೃಷಭಾವತಿ ನದಿಯಿಂದ ವಾರ್ಷಿಕ 5ರಿಂದ 6 ಟಿಎಂಸಿ ಕೊಳಚೆ ನೀರು ಹೋಗುತ್ತಿದೆ. ಸದ್ಯ ನಾಯಂಡಹಳ್ಳಿ, ನೀಲಸಂದ್ರ ಮತ್ತು ದೊಡ್ಡಬೆಲೆಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳು ಇವೆ. ಇವು ಸಾಕಾಗುತ್ತಿಲ್ಲ. ಹೀಗಾಗಿ ನದಿಯಲ್ಲಿ ಹರಿಯುವ ಪೂರ್ಣ ಪ್ರಮಾಣದ ನೀರನ್ನು ಶುದ್ಧೀಕರಿಸಲು ಆಗುತ್ತಿಲ್ಲ. ಹೀಗಾಗಿ ಕೊಳಚೆ ನೀರು ಹರಿದು ಹೋಗುತ್ತಿದೆ. ಇದನ್ನು ಸರಿ ಮಾಡಬೇಕಾದರೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಕೊಳಚೆ ನೀರಿನಿಂದಲೇ ಇಟ್ಟುಮೊಡು, ರಾಮನಹಳ್ಳಿ, ಗೋಡಹಳ್ಳಿ, ಬೈರಮಂಗಲ ಸೇರಿದಂತೆ 19 ಗ್ರಾಮಗಳ ರೈತರು ಕೃಷಿಗೆ ಬಳಸುತ್ತಿದ್ದಾರೆ. ಇವರಿಗೆ ಶುದ್ದೀಕರಣ ನೀರು ಕೊಡುವುದರಿಂದ ಹೆಚ್ಚು ಅನುಕೂಲ ಆಗುತ್ತದೆ. ಇಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಬಳಸುವ ಜನರಿಗೂ ಆರೋಗ್ಯದ ಸಮಸ್ಯೆ ಬರುವುದಿಲ್ಲ. ಬೈರಮಂಗಲ ಕೆರೆಗೆ ಕೇವಲ ಶುದ್ಧೀಕರಿಸಿದ ನೀರು ಹೋಗುವ ಹಾಗೆ ಮಾಡಲು ಪ್ರತ್ಯೇಕ ಕಾಲುವೆ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಮನಗರ ಜಿಲ್ಲೆಯಲ್ಲಿ 35 ಕೋಟಿ ರೂಪಾಯಿ ವೆಚ್ಚದಲ್ಲಿ 26 ಕಡೆ ಚೆಕ್ ಡ್ಯಾಮ್‍ಗಳನ್ನು ನಿರ್ಮಿಸುತ್ತಿದ್ದು ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಕಣ್ವ ಜಲಾಶಯದಿಂದ ನೀರು ಎತ್ತಿ 18 ಕೆರೆಗಳಿಗೆ ನೀರು ತುಂಬಿಸುವ 28 ಕೋಟಿ ರೂ.ವೆಚ್ಚದ ಯೋಜನೆ ಪ್ರಗತಿಯಲ್ಲಿ ಇದ್ದು 18 ತಿಂಗಳಲ್ಲಿ ಮುಗಿಸುವುದು. ಬೈರಮಂಗಲ ಎಡ ಮತ್ತು ಬಲದಂಡೆ ಕಾಲುವೆಯನ್ನು 106 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ಸಿದ್ಧ ಆಗಿದ್ದು ಆದಷ್ಟು ಬೇಗ ಟೆಂಡರ್ ಕರೆಯಲಾಗುವುದು ಎಂದರು.

ಸಣ್ಣ ನೀರಾವರಿ ಇಲಾಖೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಎನ್.ನಾಗರಾಜು, ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎಂ.ಕಿಶೋರ್, ಸಹಾಯಕ ಇಂಜಿನಿಯರ್ ಕೊಟ್ರೇಶ್ ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News