ಬೆಂಗಳೂರು: ನಟಿಯ ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ; ಆರೋಪಿಯನ್ನು ಹಿಡಿದು ಥಳಿಸಿದ ಗ್ರಾಮಸ್ಥರು

Update: 2020-08-28 12:33 GMT

ಬೆಂಗಳೂರು, ಆ.28: ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ಅವರ ಮನೆಯ ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯ ಕೊರಳಿನಲ್ಲಿದ್ದ ಸರ ಕದ್ದು ಪರಾರಿಯಾಗಿದ್ದ ವ್ಯಕ್ತಿಯೋರ್ವನನ್ನು ಗ್ರಾಮಸ್ಥರು ಹಿಡಿದು, ಥಳಿಸಿದ ಘಟನೆ ನಡೆದಿದೆ.

ನೆಲಮಂಗಲ ತಾಲೂಕಿನ ಗುರುವನಹಳ್ಳಿಯಲ್ಲಿ ಘಟನೆ ನಡೆದಿದ್ದು, ಬೈಕ್‍ನಲ್ಲಿ ಬಂದಿದ್ದ ವ್ಯಕ್ತಿ ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯ ಬಳಿ ಹೋಗಿದ್ದಾನೆ. ನಟಿ ಲೀಲಾವತಿ ಮನೆ ವಿಳಾಸ ಕೇಳುತ್ತಿರುವಾಗಲೇ ಮಹಿಳೆಯ ಕುತ್ತಿಗೆಯಲ್ದಿದ್ದ ಚಿನ್ನದ ಸರ ಕಸಿದು ಸೋಲದೇವನಹಳ್ಳಿಯತ್ತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಚಿನ್ನದ ಸರ ಕಳೆದುಕೊಂಡ ಮಹಿಳೆ ಜೋರಾಗಿ ಕಿರುಚಿದ್ದು, ಆಗ ಹತ್ತಿರದಲ್ಲಿದ್ದ ಅದೇ ಗ್ರಾಮದ ನಿವಾಸಿ ನವೀನ್ ಎಂಬ ಯುವಕ ಪಕ್ಕದ ಸೋಲದೇವನಹಳ್ಳಿಯ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನವೀನ್ ಸ್ನೇಹಿತ ತನ್ನ ಗ್ರಾಮದ ಜನರನ್ನು ಒಗ್ಗೂಡಿಸಿ ರಸ್ತೆಯಲ್ಲಿ ಕಾದು ಬೈಕಿನಲ್ಲಿ ಬಂದ ವ್ಯಕ್ತಿಗೆ ಅಡ್ಡಗಟ್ಟಿ ಹಿಡಿದು ದೇವಸ್ಥಾನದ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ.

ಸರಗಳ್ಳ ಎನ್ನಲಾದ ವ್ಯಕ್ತಿಯು ಮಾಗಡಿ ತಾಲೂಕಿನ ಕರಡಿದೊಡ್ಡಿ ನಿವಾಸಿ ಸಂತೋಷ್ ಎಂದು ತಿಳಿದು ಬಂದಿದೆ. ಗ್ರಾಮಸ್ಥರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News