ವಿಶ್ವದ ಅತ್ಯಂತ ಶ್ರೀಮಂತ ತೈಲರಾಷ್ಟ್ರಗಳಲ್ಲಿ ಒಂದಾದ ಕುವೈತ್‌ನಲ್ಲಿ ಆರ್ಥಿಕ ಬಿಕ್ಕಟ್ಟು

Update: 2020-09-02 17:45 GMT

ಕುವೈತ್,ಸೆ.2: ವಿಶ್ವದ ಅತ್ಯಂತ ಶ್ರೀಮಂತ ತೈಲರಾಷ್ಟ್ರಗಳಲ್ಲೊಂದಾಗಿರುವ ಕುವೈತ್ ಈಗ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿದೆ. 2016ರಲ್ಲಿ ಕುವೈತ್‌ನ ಆಗಿನ ವಿತ್ತಸಚಿವ ಅನಸ್ ಅಲ್-ಸಾಲೇಹ್ ಅವರು, ಇದು ಮಿತವ್ಯಯವನ್ನು ರೂಢಿಸಿಕೊಳ್ಳಲು ಮತ್ತು ತೈಲ ನಿಕ್ಷೇಪ ಬರಿದಾದ ನಂತರ ಬದುಕಿಗೆ ಸಿದ್ಧರಾಗಲು ಸಕಾಲ ಎಂದು ಹೇಳಿದ್ದರು. ತಡೆರಹಿತವಾಗಿ ಹರಿದುಬರುತ್ತಿದ್ದ ಪೆಟ್ರೋ ಡಾಲರ್‌ಗಳ ರುಚಿ ಕಂಡಿದ್ದ ಜನರು ಆಗ ಅವರನ್ನು ಗೇಲಿ ಮಾಡಿದ್ದರು. ನಾಲ್ಕು ವರ್ಷಗಳ ಬಳಿಕ ಇಂದು ಕುವೈತ್ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಣಕಾಸಿಗಾಗಿ ಪರದಾಡುತ್ತಿದೆ. ಇಂಧನ ಬೆಲೆಗಳಲ್ಲಿ ತೀವ್ರ ಕುಸಿತ ಈ ಸಂಕಷ್ಟಕ್ಕೆ ಕಾರಣವಾಗಿದ್ದು, ಇದು ಕೊಲ್ಲಿಯ ಅರಬ್ ರಾಷ್ಟ್ರಗಳ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಸೃಷ್ಟಿಸಿದೆ.

ಹಾಲಿ ವಿತ್ತಸಚಿವ ಬರಾಕ್ ಅಲ್-ಶೀತನ್ ಅವರು ಅಕ್ಟೋಬರ್ ಬಳಿಕ ಸರಕಾರಿ ನೌಕರರಿಗೆ ವೇತನಗಳನ್ನು ಪಾವತಿಸಲು ಬೊಕ್ಕಸದಲ್ಲಿ ಹಣವಿಲ್ಲ ಎಂದು ಕಳೆದ ತಿಂಗಳೇ ಎಚ್ಚರಿಕೆಯನ್ನು ನೀಡಿದ್ದರು.

ಈ ವರ್ಷ ತನ್ನ ಐತಿಹಾಸಿಕ ಬೆಲೆ ಕುಸಿತವನ್ನು ದಾಖಲಿಸಿದ್ದ ಕಚ್ಚಾ ತೈಲವು ಒಪೆಕ್ ಕೂಟದಿಂದ ಪುನಃಶ್ಚೇತನಗೊಂಡಿದೆಯಾದರೂ ಹಾಲಿ ಪ್ರತಿ ಬ್ಯಾರೆಲ್‌ ಗೆ 40 ಡಾ.ಬೆಲೆ ಈಗಲೂ ತೀರ ಕಡಿಮೆ ಮಟ್ಟದಲ್ಲಿಯೇ ಇದೆ. ಕೊರೋನ ವೈರಸ್ ಬಿಕ್ಕಟ್ಟು ಮತ್ತು ನವೀಕರಿಸಬಹುದಾದ ಇಂಧನಗಳತ್ತ ಹೆಚ್ಚುತ್ತಿರುವ ಒಲವಿನಿಂದಾಗಿ ತೈಲ ಬೆಲೆಗಳು ಚೇತರಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.

ಬಹರೈನ್ ಮತ್ತು ಒಮನ್‌ ಗಳು ಸಾಲ ಮತ್ತು ಬೆಂಬಲಕ್ಕಾಗಿ ಶ್ರೀಮಂತ ನೆರೆರಾಷ್ಟ್ರಗಳ ಮೊರೆ ಹೋಗಿವೆ. ದುಬೈ ಲಾಜಿಸ್ಟಿಕ್ಸ್ ಮತ್ತು ಹಣಕಾಸು ಚಟುವಟಿಕೆಗಳ ಕೇಂದ್ರವಾಗಿ ಹೊರಹೊಮ್ಮುವುದರೊಂದಿಗೆ ತನ್ನ ಆದಾಯ ಮೂಲಗಳಲ್ಲಿ ವೈವಿಧ್ಯಗಳನ್ನು ತಂದುಕೊಂಡಿರುವ ಯುಎಇ ಇದ್ದುದರಲ್ಲಿ ಪರವಾಗಿಲ್ಲ.

 ಕುವೈತ್‌ನಲ್ಲಿ ಚುನಾಯಿತ ಸಂಸತ್ ಮತ್ತು ಅಮಿರ್ ಅವರಿಂದ ನೇಮಕಗೊಂಡಿರುವ ಪ್ರಧಾನಿಯ ನೇತೃತ್ವದ ಸರಕಾರದ ನಡುವಿನ ಬಿಕ್ಕಟ್ಟಿನಿಂದಾಗಿ ಹೊಸ ನೀತಿಗಳನ್ನು ರೂಪಿಸುವುದೂ ಸಾಧ್ಯವಾಗುತ್ತಿಲ್ಲ. ಸರಕಾರಿ ಅನುದಾನಗಳ ಮರುಹಂಚಿಕೆಯ ಯೋಜನೆಯನ್ನು ವಿಫಲಗೊಳಿಸಿರುವ ಸಂಸದರು ಸಾಲಪತ್ರಗಳನ್ನು ವಿತರಣೆಯನ್ನೂ ತಡೆಹಿಡಿದಿದ್ದಾರೆ. ಬದಲಿಗೆ ಸರಕಾರವು ತನ್ನ ಬಳಿಯಿದ್ದ ನಗದನ್ನೆಲ್ಲ ಖಾಲಿ ಮಾಡಿಕೊಂಡಿದೆ ಮತ್ತು ಈ ವರ್ಷ ಸುಮಾರು 46 ಬಿಲಿಯನ್ ಡಾ.ಗಳಷ್ಟು ನಿರೀಕ್ಷಿತ ಮುಂಗಡಪತ್ರ ಕೊರತೆಯನ್ನು ತುಂಬಿಕೊಳ್ಳಲೂ ಅದಕ್ಕೆ ಸಾಧ್ಯವಾಗುತ್ತಿಲ್ಲ. ತನ್ನ ನಿರ್ಭಿಡೆಯ ಸಂಸತ್,ಔದ್ಯಮಿಕ ಪರಂಪರೆ ಮತ್ತು ವಿದ್ಯಾವಂತ ಪ್ರಜೆಗಳಿಂದಾಗಿ 1970ರ ದಶಕದಲ್ಲಿ ಅತ್ಯಂತ ಉತ್ಸಾಹಿ ಕೊಲ್ಲಿ ರಾಷ್ಟ್ರಗಳಲ್ಲೊಂದಾಗಿದ್ದ ಕುವೈತ್ ಕ್ರಮೇಣ ಕುಸಿತದ ಮಾರ್ಗದಲ್ಲಿ ಸಾಗುತ್ತಿದೆ. 1982ರಲ್ಲಿ ಅನೌಪಚಾರಿಕ ಶೇರು ಮಾರುಕಟ್ಟೆ ಕುಸಿತವು ಕುವೈತಿನ ಆರ್ಥಿಕತೆಯನ್ನು ನಡುಗಿಸಿತ್ತು ಮತ್ತು ದಶಕದ ಕಾಲ ನಡೆದಿದ್ದ ಇರಾನ್-ಇರಾಕ್ ಯುದ್ಧದಿಂದಾಗಿ ಅಸ್ಥಿರತೆಯೂ ಇದರೊಂದಿಗೆ ಸೇರಿಕೊಂಡಿತ್ತು.

 1991ರಲ್ಲಿ ಕುವೈತ್ ಮೇಲೆ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ನಡೆಸಿದ್ದ ದಾಳಿ ಕೊಲ್ಲಿ ಯುದ್ಧಕ್ಕೆ ಕಾರಣವಾಗಿತ್ತು ಮತ್ತು ಕುವೈತ್ ತನ್ನ ಪುನರ್‌ನಿರ್ಮಾಣಕ್ಕಾಗಿ ಭಾರೀ ವೊತ್ತವನ್ನು ವಿನಿಯೋಗಿಸುವಂತಾಗಿತ್ತು.

ಕುವೈತ್ ಹಾಲಿ ಹಣಕಾಸು ಮುಗ್ಗಟ್ಟಿನಿಂದ ತತ್ತರಿಸುತ್ತಿದೆ ನಿಜ. ಆದರೆ ಅದರ ಬಳಿ ಹಣವಿಲ್ಲ ಎಂದಲ್ಲ, ಬಹಳಷ್ಟು ಹಣವಿದೆ. ತೈಲ ನಿಕ್ಷೇಪಗಳು ಬರಿದಾದ ಬಳಿಕ ದೇಶವನ್ನು ಮುನ್ನಡೆಸಲು ಸ್ಥಾಪಿಸಲಾಗಿರುವ ‘ಫ್ಯೂಚರ್ ಜನರೇಷನ್ ಫಂಡ್’ನಲ್ಲಿ ಅಂದಾಜು 550 ಶತಕೋಟಿ ಡಾ.ಗಳು ಜಮಾವಣೆಗೊಂಡಿದ್ದು,ಇದು ವಿಶ್ವದಲ್ಲಿಯೇ ನಾಲ್ಕನೆಯ ಅತ್ಯಂತ ದೊಡ್ಡ ನಿಧಿಯಾಗಿದೆ. ಈ ನಿಧಿಗೆ ಕೈಹಚ್ಚುವ ಪ್ರಸ್ತಾವವು ಭಾರೀ ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ. ಈ ನಿಧಿಯನ್ನು ಬಳಸಿಕೊಳ್ಳುವ ಕಾಲವೀಗ ಬಂದಿದೆ ಎಂದು ಕೆಲವು ಕುವೈತಿಗಳು ಹೇಳುತ್ತಿದ್ದಾರೆ. ಆದರೆ ಆರ್ಥಿಕತೆಯನ್ನು ವೈವಿಧ್ಯಗೊಳಿಸದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸದೆ ಈ ಉಳಿತಾಯವನ್ನು ಬಳಸಿದರೆ 15-20 ವರ್ಷಗಳಲ್ಲಿ ಅದೂ ಖಾಲಿಯಾಗುತ್ತದೆ ಎಂದು ಪ್ರತಿಸ್ಪರ್ಧಿಗಳು ಎಚ್ಚರಿಕೆ ನೀಡಿದ್ದಾರೆ.

ಕೃಪೆ: bloomberg

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News