‘ಉದ್ಯೋಗಿಗಳ ಮೇಲೆ ದಬ್ಬಾಳಿಕೆ ನಡೆಸುವ ಅರ್ನಬ್’

Update: 2020-09-03 13:21 GMT

ಹೊಸದಿಲ್ಲಿ, ಸೆ.3: ಟೈಮ್ಸ್ ನೌ ಟಿವಿಯಲ್ಲಿ ಸ್ಟಾರ್‌ ಆ್ಯಂಕರ್ ಆಗಿದ್ದು ಬಳಿಕ ಕಾರಣಾಂತರಗಳಿಂದ ಅಲ್ಲಿಂದ ಹೊರಬಿದ್ದಿದ್ದ ಅರ್ನಬ್ ಗೋಸ್ವಾಮಿ ಅದಕ್ಕೆ ಸಡ್ಡು ಹೊಡೆಯಲು 2017ರಲ್ಲಿ ತನ್ನದೇ ಆದ ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯನ್ನು ಆರಂಭಿಸಿದಾಗ ದೇಶಾದ್ಯಂತ ಭಾರೀ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ ಕೇವಲ ಮೂರು ವರ್ಷಗಳಲ್ಲಿ ಅರ್ನಾಬ್ ಮತ್ತು ಅವರ ಪತ್ನಿಯ ನಡವಲಳಿಕೆಯನ್ನು ಸಹಿಸದೆ ರಿಪಬ್ಲಿಕ್ ಟಿವಿಯ ಹಲವಾರು ಅನುಭವಿ ಉದ್ಯೋಗಿಗಳು ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಅರ್ನಬ್ ಕೈಯಲ್ಲಿ ಚಾನೆಲ್ ಇರುವುದರಿಂದ ಅವರು ಅದರಲ್ಲಿ ತಮ್ಮ ತೇಜೋವಧೆಯನ್ನು ಮಾಡಿ ಭವಿಷ್ಯಕ್ಕೆ ಕಲ್ಲು ಹಾಕಬಹುದು ಎಂಬ ಭೀತಿಯಿಂದ ಉದ್ಯೋಗಿಗಳು ತಮ್ಮ ರಾಜೀನಾಮೆಗೆ ಕಾರಣವನ್ನು ಬಹಿರಂಗಗೊಳಿಸಿರಲಿಲ್ಲ. ಇದೀಗ ರಿಪಬ್ಲಿಕ್ ಟಿವಿಯ ಜಮ್ಮು-ಕಾಶ್ಮೀರ ಬ್ಯೂರೊದ ಮುಖ್ಯಸ್ಥರಾಗಿದ್ದ ತೇಜೇದರ್ ಸಿಂಗ್ ಸೋಧಿ ಅವರೂ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಗೂ ಅರ್ನಬ್ ದಂಪತಿಯ ದಬ್ಬಾಳಿಕೆಯೇ ಕಾರಣ ಎಂದು ಆರೋಪಿಸಲಾಗಿದೆ. ಈ ಮೊದಲು ರಾಜೀನಾಮೆ ನೀಡಿದವರಿಗೂ ಸೋಧಿಗೂ ಇರುವ ವ್ಯತ್ಯಾಸವೆಂದರೆ ಸೋಧಿ ವಾಹಿನಿಯಿಂದ ಹೊರಬರುವಾಗ ಅರ್ನಾಬ್‌ಗೆ ಅವರದೇ ಭಾಷೆಯಲ್ಲಿ ತಿರುಗೇಟು ನೀಡುವ ಮೂಲಕ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡಿದ್ದಾರೆ.

ಕೆಲವು ವಿಷಯಗಳಲ್ಲಿ ಅರ್ನಬ್ ಜೊತೆಗೆ ತನಗೆ ಸಹಮತವಿದೆಯಾದರೂ ಅವರ ಕೆಟ್ಟ ವರ್ತನೆಯನ್ನು ತಾನು ಬೆಂಬಲಿಸುವುದಿಲ್ಲ. ರಿಪಬ್ಲಿಕ್ ಟಿವಿಯ ಬಗ್ಗೆ ತಾನು ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆ. 2017 ಮೇ 6ರಂದು ಬೆಳಿಗ್ಗೆ ರಿಪಬ್ಲಿಕ್ ಟಿವಿ ಚಾನೆಲ್ ಆರಂಭಗೊಂಡಾಗ ಅದು ಸುದ್ದಿವಾಹಿನಿಗಳ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೊಂದನ್ನು ಹುಟ್ಟುಹಾಕಲಿದೆ ಎಂದು ತಾನು ಭಾವಿಸಿದ್ದೆ. ಆದರೆ ಚಾನೆಲ್ ಆರಂಭಗೊಂಡ ಒಂದೇ ತಿಂಗಳಿಗೆ ತಾನು ಅದನ್ನು ವೀಕ್ಷಿಸುವುದನ್ನು ನಿಲ್ಲಿಸಿದ್ದೆ,ಏಕೆಂದರೆ ಅದು ತನ್ನ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿತ್ತು. ಅರ್ನಬ್‌ರ ಎಲ್ಲರನ್ನೂ ನಿಂದಿಸುವ ಮತ್ತು ಹಿಂಸಾತ್ಮಕ ವರ್ತನೆಯಿಂದಾಗಿ ಹಲವಾರು ಪತ್ರಕರ್ತರು ರಿಪಬ್ಲಿಕ್ ಟಿವಿಯಿಂದ ಹೊರಬಿದ್ದಿದ್ದಾರೆ ಎಂದು ಸೋಧಿ ಚಾನೆಲ್‌ನ ಮಾನವ ಸಂಪನ್ಮೂಲ ಮುಖ್ಯಸ್ಥೆ ಹಾಗೂ ಉಪಾಧ್ಯಕ್ಷೆ ಹನಿ ಕೌರ್ ಅವರಿಗೆ ರವಾನಿಸಿರುವ ಇ-ಮೇಲ್‌ನಲ್ಲಿ ಬೆಟ್ಟು ಮಾಡಿದ್ದಾರೆ.

ತನ್ನ ಇ-ಮೇಲ್‌ನಲ್ಲಿ ಸೋಧಿ ತನ್ನ ರಾಜೀನಾಮೆಗೆ ಕಾರಣಗಳನ್ನು ವಿವರಿಸಿದ್ದಾರೆ ಮತ್ತು ಇವು ಅರ್ನಬ್ ಹಾಗೂ ರಿಪಬ್ಲಿಕ್ ಟಿವಿಯ ಕರಾಳ ಮುಖವನ್ನು ಬಯಲಿಗೆಳೆದಿವೆ. ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಭಾರತೀಯ ಪತ್ರಕರ್ತರ ಪಾಡು ಇದೇ ಆಗಿದೆ ಎಂದು ಅವರು ಹೇಳಿದ್ದಾರೆ.

ರಿಪಬ್ಲಿಕ್ ಟಿವಿಗೆ ಸೇರಲು ತಾನು ಅರ್ಜಿಯನ್ನು ಹಾಕಿರಲಿಲ್ಲ. ಚಾನೆಲ್ ಆರಂಭಕ್ಕೆ ಕೆಲವೇ ದಿನಗಳ ಮೊದಲು ಅರ್ನಬ್ ತನಗೆ ವೀಡಿಯೊ ಕರೆಯನ್ನು ಮಾಡಿ ತನ್ನ ತಂಡಕ್ಕೆ ಸೇರುವಂತೆ ಆಹ್ವಾನಿಸಿದ್ದರು. ಸುದೀರ್ಘ ಮಾತುಕತೆಯ ವೇಳೆ ಅರ್ನಬ್ ತನ್ನ ರಿಪಬ್ಲಿಕ್ ಟಿವಿಯು ಟಿವಿ ಸುದ್ದಿಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಿದೆ, ಅದು ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲಿದೆ,ಅದು ಶೋಷಿತರ ಧ್ವನಿಯಾಗಲಿದೆ ಎಂಬ ಭರವಸೆಯನ್ನು ತನ್ನಲ್ಲಿ ಮೂಡಿಸಿದ್ದರು. ಹೀಗಾಗಿ ತಾನು ಆವರೆಗೆ ದುಡಿಯುತ್ತಿದ್ದ ಮುದ್ರಣ ಮಾಧ್ಯಮವನ್ನು ತೊರೆದು ರಿಪಬ್ಲಿಕ್‌ಗೆ ಸೇರಿದ್ದೆ. ಆದರೆ ಇಂದು ಹಿಂದಿರುಗಿ ನೋಡಿದಾಗ ರಿಪಬ್ಲಿಕ್‌ನ್ನು ಸೇರುವ ಅಂದಿನ ನಿರ್ಧಾರಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ. ಅರ್ನಬ್ ಪತ್ರಿಕೋದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಲಿಲ್ಲ,ಆದರೆ ಅವರು ಗಂಭೀರ ಪತ್ರಿಕೋದ್ಯಮದ ಕಗ್ಗೊಲೆಯನ್ನು ಮಾಡಿದ್ದಾರೆ ಮತ್ತು ಅದನ್ನು ತಮಾಷೆಯ ಮಟ್ಟಕ್ಕೆ ಇಳಿಸಿಬಿಟ್ಟಿದ್ದಾರೆ. ಎಲ್ಲೋ ಒಂದು ಕಡೆ ತಾನೂ ಅಪರಾಧದಲ್ಲಿ ಭಾಗಿಯಾಗಿದ್ದೆ ಎಂಬ ಪಾಪಪ್ರಜ್ಞೆ ತನ್ನನ್ನು ಕಾಡುತ್ತಿದೆ ಎಂದು ಸೋಧಿ ಹೇಳಿದ್ದಾರೆ.

ಚಾನೆಲ್ ಆರಂಭಗೊಂಡ ಮೊದಲ ವಾರದಲ್ಲಿಯೇ ಟಿಆರ್‌ಪಿಯಲ್ಲಿ ನಂ.1 ಸ್ಥಾನಕ್ಕೇರಿದಾಗ ತಾವೆಲ್ಲ ಖುಷಿ ಪಟ್ಟಿದ್ದೆವು,ಏಕೆಂದರೆ ತಮ್ಮೆಲ್ಲರ ಕಠಿಣ ಪರಿಶ್ರಮ ಈ ಯಶಸ್ಸಿನ ಹಿಂದಿತ್ತು. ಆದರೆ ಅರ್ನಬ್ ಯಶಸ್ಸಿನ ಎಲ್ಲ ಹೆಗ್ಗಳಿಕೆಯನ್ನು ತಾನೇ ಬಾಚಿಕೊಂಡಿದ್ದರು. ಒಂದು ತಂಡವಾಗಿ ಕಾರ್ಯ ಅಥವಾ ಪ್ರಯತ್ನದಲ್ಲಿ ಅವರಿಗೆ ನಂಬಿಕೆಯಿಲ್ಲ ಎನ್ನುವುದು ತನಗೆ ಅಂದೇ ಮನದಟ್ಟಾಗಿತ್ತು. ಅವರನ್ನು ಹೊರತು ಪಡಿಸಿ ರಿಪಬ್ಲಿಕ್ ಟಿವಿಯಲ್ಲಿ ಇತರ ಎಲ್ಲರೂ ಕೇವಲ ನಾಮ್ ಕೆ ವಾಸ್ತೆಗಳಾಗಿದ್ದರು ಅಥವಾ ಅವರನ್ನು ಹಾಗೆ ನೋಡಲಾಗುತ್ತಿತ್ತು. ಹಣ ಮತ್ತು ಅಧಿಕಾರ ಸುಲಭವಾಗಿ ಬರತೊಡಗಿದಾಗ ಅರ್ನಬ್‌ರ ಧಿಮಾಕು ಇನ್ನಷ್ಟು ಏರಿತ್ತು ಮತ್ತು ಅವರು ಟಿವಿ ಕಾರ್ಯಕ್ರಮಗಳಲ್ಲಿ ಯಾರದೇ ಮಾತತನ್ನು ಕೇಳುತ್ತಿರಲಿಲ್ಲ. ಅವರು ತನ್ನ ಸಿಬ್ಬಂದಿಗಳನ್ನೂ ಆಲಿಸುತ್ತಿರಲಿಲ್ಲ. ಅರ್ನಬ್ ಸಿಬ್ಬಂದಿಯನ್ನು ಅವಮಾನಿಸಲು, ಅವರತ್ತ ಬೊಬ್ಬೆ ಹೊಡೆಯಲು, ನಿಂದಿಸಲು, ಅಷ್ಟೇ ಏಕೆ...ದೈಹಿಕವಾಗಿ ಹಲ್ಲೆಯನ್ನೂ ಆರಂಭಿಸಿದ್ದರು ಎಂದು ಸೋಧಿ ಬರೆದಿದ್ದಾರೆ.

ಚಾನೆಲ್‌ನ ಹೆಚ್ಚಿನ ಅನುಭವಿ ಪತ್ರಕರ್ತರು ಹೊರನಡೆದ ಬಳಿಕ ಅರ್ನಬ್ ಹೊಸಬರನ್ನು ನೇಮಿಸಿಕೊಳ್ಳುತ್ತಿದ್ದಾರೆ. ನೌಕರಿಯ ಹೆಸರಿನಲ್ಲಿ ಜುಜುಬಿ ಸಂಬಳ ನೀಡುವ ಮೂಲಕ ಯುವಪ್ರತಿಭೆಗಳನ್ನು ಶೋಷಿಸುತ್ತಿದ್ದಾರೆ. ನಿರ್ದಿಷ್ಟ ರಾಜಕೀಯ ಪಕ್ಷವೊಂದರ ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ನಿರ್ದೇಶಿತಗೊಳ್ಳುವ ತನ್ನ ಸಂಪಾದಕೀಯ ನೀತಿಗಳನ್ನು ಯಾರೂ ಪ್ರಶ್ನಿಸದಿರಲು ಯುವ ಕಾಲೇಜು ಪದವೀಧರರನ್ನು ಅಥವಾ ಏನೇನೂ ಅನುಭವ ಇಲ್ಲದವರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದಿರುವ ಸೋಧಿ,ಅರ್ನಬ್ ಹಲವಾರು ಕಾರ್ಮಿಕ ಕಾನೂನುಗಳನ್ನೂ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತನಗೆ ಅಥವಾ ತನ್ನ ಕುಟುಂಬಕ್ಕೆ ಏನಾದರೂ ಕೆಟ್ಟದ್ದು,ಯಾವುದೇ ಅಪಘಾತ ಅಥವಾ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಅರ್ನಬ್ ಮತ್ತು ಅವರ ಪತ್ನಿಯೇ ಹೊಣೆಯಾಗಿರುತ್ತಾರೆ ಎಂದಿರುವ ಸೋಧಿ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ.

ಕೃಪೆ: medium.com

                  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News