ಚಿನ್ನಾಭರಣ, ನಗದು ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಬೆಂಗಳೂರು, ಸೆ.4: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಆರೋಪದಡಿ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಬಂಧಿಸಿರುವ ಕೆ.ಆರ್.ಪುರಂ ಪೊಲೀಸರು 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೆ.ಆರ್.ಪುರಂ ವಿ.ಬಿ.ಲೇಔಟ್ 1ನೇ ಕ್ರಾಸ್ನ ಶಿವಕುಮಾರ್ ಯಾನೆ ಮನೋಜ್(37), ಕೆ.ಆರ್ಪುರಂ ಆನಂದಪುರ ಸರ್ಕಲ್ನ ಸಿದ್ದಾರ್ಥ ಎಸ್(25) ಹಾಗೂ ಕೆ.ಆರ್.ಪುರಂ ಅತಿಥಿ ಬಡಾವಣೆಯ 3ನೇ ಕ್ರಾಸ್ನ ಡೇವಿಡ್(32) ಬಂಧಿತ ಆರೋಪಿಗಳಾಗಿದ್ದಾರೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಶಿವಕುಮಾರ್ ಮೂಲತಃ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಎಂಜಿಆರ್ ನಗರದವನು. ಸಿದ್ದಾರ್ಥ ಮತ್ತು ಡೆವಿಡ್ ತ್ರಿಪತ್ತೂರು ಜಿಲ್ಲೆಯ ಯಾಲಗಿರಿ ಗ್ರಾಮದ ಜೋಲಾರಪೇಟೆಯವರಾಗಿದ್ದಾರೆ. ಆ.19ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ನಲ್ಲಿ ಕೊರಿಯರ್ ಡೆಲಿವರಿ ಮಾಡುವ ನೆಪದಲ್ಲಿ ಒಂಟಿಯಾಗಿ ವಾಸವಿದ್ದ ಮಹಿಳೆಯ ಮನೆಗೆ ಏಕಾಏಕಿ ಒಳಗೆ ನುಗ್ಗಿ, ಮಹಿಳೆಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಮನೆಯಲ್ಲಿದ್ದ ನಗದು, 170 ಗ್ರಾಂ ತೂಕದ ಚಿನ್ನಾಭರಣ, ಮಾಂಗಲ್ಯ ತಾಳಿ ಸಮೇತ ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಕೆ.ಆರ್.ಪುರಂ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ರಚಿಸಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.