×
Ad

ರಾಜ್ಯದಲ್ಲಿ ಶೀಘ್ರವೇ ಒಂದು ಲಕ್ಷ ಕೋವಿಡ್ ಟೆಸ್ಟ್ ಗುರಿ ತಲುಪಲಿದ್ದೇವೆ: ಡಾ.ಕೆ.ಸುಧಾಕರ್

Update: 2020-09-05 17:02 IST

ಬೆಂಗಳೂರು, ಸೆ.5: ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರಕಾರ ಬದ್ಧತೆ ಪ್ರದರ್ಶಿಸಿದೆ. ಕೇವಲ ಒಂದು ಲ್ಯಾಬ್‍ನಿಂದ ಪ್ರಾರಂಭವಾದ ಕೊವಿಡ್ ಟೆಸ್ಟ್, ಕೇವಲ ಆರು ತಿಂಗಳಲ್ಲಿ 108 ಲ್ಯಾಬ್‍ಗಳನ್ನು ತೆರೆದಿದ್ದೇವೆ. ಪ್ರಾರಂಭದಲ್ಲಿ ಸುಮಾರು 300 ಕೋವಿಡ್ ಟೆಸ್ಟ್ ನಿಂದ 75 ಸಾವಿರಕ್ಕೆ ಏರಿಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ದಿನಕ್ಕೆ ಒಂದು ಲಕ್ಷ ಕೋವಿಡ್ ಟೆಸ್ಟ್ ಗುರಿ ತಲುಪಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಎಂವಿಜೆ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಆಸ್ಪತ್ರೆಯಲ್ಲಿ ಎಂವಿಜೆ ‘ಕೋವಿಡ್ ಲ್ಯಾಬ್’ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಲಸಿಕೆ ಲಭ್ಯವಾದಾಗ ಮಾತ್ರ  ಕೋವಿಡ್‍ನನ್ನು ಸಂಪೂರ್ಣ ನಿಗ್ರಹಿಸಲು ಸಾಧ್ಯ. ಸಮಾಧಾನದ ಸಂಗತಿ ಎಂದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.65 ರಷ್ಟಿದ್ದು,. ಇದನ್ನು ಶೇ.1ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ. ಹೊಸಕೋಟೆಯಲ್ಲಿ ತೆರೆದಿರುವ ಕೋವಿಡ್ ಟೆಸ್ಟ್ ಗ್ರಾಮೀಣ ಭಾಗದ ಜನರಿಗೆ ಅತಿ ಹೆಚ್ಚು ಉಪಯುಕ್ತವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬದಲಾವಣೆ ಅನಿವಾರ್ಯ: ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆ ಅನಿವಾರ್ಯವಿದೆ. ನಮ್ಮಲ್ಲಿ 60 ವೈದ್ಯಕೀಯ ಕಾಲೇಜುಗಳಿವೆ. ವರ್ಷಕ್ಕೆ 10 ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಕಾಲೇಜಿನ ಸಂಖ್ಯೆ ಹೆಚ್ಚಿಸಿದರೆ ಸಾಲದು ಗುಣಮಟ್ಟದ ಶಿಕ್ಷಣ ಕೊಡಿಸುವುದು ಅನಿವಾರ್ಯ ಎಂದು ಸುಧಾಕರ್ ಹೇಳಿದರು.

ಹೀಗಾಗಿ ಮುಂದುವರೆದ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ನಡೆಸಿ, ಜಾಗತಿಕ ಮಟ್ಟದ ಗುಣಮಟ್ಟ ಶಿಕ್ಷಣವನ್ನು ಇಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಅವರು ತಿಳಿಸಿದರು.

ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಗುಣಮಟ್ಟದ ಲ್ಯಾಬ್: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ 108 ಲ್ಯಾಬ್‍ಗಳನ್ನು ತೆರೆದಿದ್ದೇವೆ. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲೂ ಗುಣಮಟ್ಟದ ಪ್ರಯೋಗಾಲಯಗಳನ್ನು ತೆರೆಯಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಗಮನಹರಿಸಲಿ ಎಂದು ಸುಧಾಕರ್ ಹೇಳಿದರು.

ಇನ್ನು, ಅಂತರ್‍ರಾಷ್ಟ್ರೀಯ ಮೆಡಿಕಲ್ ಕಾಲೇಜಿನೊಂದಿಗೆ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು ವಿನಿಮಯ ಕಾರ್ಯಕ್ರಮ ನಡೆಸಲು ಯೋಜಿಸಿದ್ದೇವೆ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಕ್ಲಿನಿಕಲ್ ಪ್ರಯೋಗಕ್ಕೆ ತೆರೆದುಕೊಳ್ಳಲು ಸಾಧ್ಯವಾಗಲಿದೆ. ಆಗ ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕಲಿಕೆ ಹಾಗೂ ಹೊಸ ಆವಿಷ್ಕಾರಕ್ಕೆ ಅವಕಾಶ ಸಿಗುತ್ತದೆ. ಈ ವರ್ಷದಿಂದಲೆ ಈ ಕಾರ್ಯವನ್ನು ಪ್ರಾರಂಭಿಸಲು ಯೋಜಿಸಿದ್ದೆವು. ಆದರೆ ಕೋವಿಡ್ ಕಾರಣದಿಂದ ಸಾಧ್ಯವಾಗಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಲಿಕೆಗೆ ಉತ್ತೇಜನ ನೀಡುತ್ತೇವೆ ಎಂದು ಅವರು ಹೇಳಿದರು.

ನಾನು ಸಹ ಮೊದಲ ಪ್ರಯತ್ನದಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಆಯ್ಕೆಯಾಗದೆ ಒಂದು ವರ್ಷ ತಡವಾಗಿ ವೈದ್ಯ ಶಿಕ್ಷಣಕ್ಕೆ ಸೇರಿಕೊಂಡಿದ್ದೆ. ಆ ಒಂದು ವರ್ಷದಲ್ಲಿ ನಾನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಯವನ್ನು ಸದುಪಯೋಗ ಮಾಡಿಕೊಂಡಿದ್ದೆ. ಇದರ ಜೊತೆಗೆ ಮುಂದಿನ ವರ್ಷದ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿ ಸಫಲನಾದೆ. ಮೊದಲ ಪ್ರಯತ್ನದಲ್ಲೆ ಪ್ರವೇಶಾತಿ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಧೃತಿಗೆಡದೆ ಪ್ರಯತ್ನ ಮುಂದುವರೆಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News