ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಿಸಲು ಸರಕಾರಕ್ಕೆ ಶಿಫಾರಸು
ಬೆಂಗಳೂರು, ಸೆ.7: ಕಬ್ಬನ್ ಉದ್ಯಾನದೊಳಗೆ ಮೋಟಾರು ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ನಗರ ಭೂಸಾರಿಗೆ ನಿರ್ದೇಶನಾಲಯವು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.
ಈ ಸಂಬಂಧ ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾಗೆ ಪತ್ರ ಬರೆದಿರುವ ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತರಾದ ವಿ.ಮಂಜುಳಾ, ನಗರದ ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಸರಕಾರ ಚಿಂತನೆ ನಡೆಸುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಕಬ್ಬನ್ ಉದ್ಯಾನವನ್ನು ವಾಹನ ಸಂಚಾರ ರಹಿತ ವಲಯವನ್ನಾಗಿ ಮುಂದುವರಿಸುವಂತೆ ನಾಗರಿಕ ಸಂಘ ಸಂಸ್ಥೆಗಳು ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿವೆ ಎಂದು ತಿಳಿಸಿದ್ದಾರೆ.
ನಿರ್ದೇಶನಾಲಯವು ಈ ವಿಚಾರವನ್ನು ವಿಸ್ತೃತವಾಗಿ ಪರಿಶೀಲಿಸಿದ್ದು, ಕಬ್ಬನ್ ಉದ್ಯಾನ ನಗರದ ಹೃದಯ ಭಾಗದಲ್ಲಿರುವ ವಿಶಾಲ ಹಸಿರು ಪ್ರದೇಶವಾಗಿದೆ. ಈ ಅತ್ಯುನ್ನತ ಪರಿಸರವನ್ನು ಕಾಪಾಡಬೇಕಿದೆ. ಜಗತ್ತಿನ ಹಲವು ರಾಷ್ಟ್ರಗಳ ಪ್ರಮುಖ ನಗರಗಳಲ್ಲಿನ ಇಂತಹ ಪ್ರದೇಶಗಳನ್ನು ಪಾದಚಾರಿಗಳು ಮತ್ತು ಸೈಕಲ್ ಸವಾರರ ಬಳಕೆಗೆ ಮೀಸಲಿಡಲಾಗಿದೆ. ಕಬ್ಬನ್ ಉದ್ಯಾನವು ಬೆಂಗಳೂರಿನಲ್ಲಿ ಪಾದಚಾರಿಗಳು ಮತ್ತು ಸೈಕಲ್ ಬಳಕೆದಾರರಿಗೆ ಮೀಸಲಿಡಬಹುದಾದ ಪ್ರದೇಶವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಾದಚಾರಿಗಳು ಮತ್ತು ಸೈಕಲ್ ಬಳಕೆದಾರರು ತ್ವರಿತವಾಗಿ ಗಮ್ಯ ತಲುಪಲು ಕಬ್ಬನ್ ಉದ್ಯಾನದ ಮಾರ್ಗವಾಗಿ ಹಾದುಹೋಗಲು ಅವಕಾಶ ಕಲ್ಪಿಸಬಹುದು. ಮೋಟಾರು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳಿವೆ. ಆದ್ದರಿಂದ ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸುವುದರಿಂದ ಯಾವುದೇ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಮಂಜುಳಾ ಪತ್ರದಲ್ಲಿ ತಿಳಿಸಿದ್ದಾರೆ.
ಕಬ್ಬನ್ ಉದ್ಯಾನವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದು ಉತ್ತಮ ನಿರ್ಧಾರವಾಗುವುದಿಲ್ಲ. ಅಲ್ಲಿ ವಾಹನಗಳ ನಿಲುಗಡೆಗೂ ಅನುಮತಿ ನೀಡಬಾರದು ಎಂಬ ಅಭಿಪ್ರಾಯವನ್ನು ನಗರ ಭೂಸಾರಿಗೆ ನಿರ್ದೇಶನಾಲಯ ಮಂಡಿಸಿದೆ.