×
Ad

ಅನಿವಾಸಿ ಕನ್ನಡಿಗರು ಕರ್ನಾಟಕದ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿ: ಡಾ.ಕೆ. ಸುಧಾಕರ್ ಕರೆ

Update: 2020-09-07 21:39 IST

ಬೆಂಗಳೂರು, ಸೆ.7: ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಅನಿವಾಸಿ ಕನ್ನಡಿಗರು ಜಾಗತಿಕ ಮಟ್ಟದಲ್ಲಿ ಇದನ್ನು ಪರಿಚಯಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.

ರವಿವಾರ ರಾತ್ರಿ ವರ್ಚುವಲ್ ಕಾರ್ಯಕ್ರಮದಲ್ಲಿ ಅಕ್ಕಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ವೈವಿಧ್ಯಮಯ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದೆ. ಅಲ್ಲದೆ ನಮ್ಮ ರಾಜ್ಯ ಪ್ರವಾಸೋದ್ಯಮಕ್ಕೆ ಸೂಕ್ತವಾದ ಸ್ಥಳವಾಗಿದೆ. ಕರ್ನಾಟಕದಿಂದ ಅಮೆರಿಕಾಗೆ ತೆರಳುವ ಕನ್ನಡಿಗರು ಇಲ್ಲಿರುವ ಸಂಪನ್ಮೂಲಗಳ ಬಗ್ಗೆ ಅಲ್ಲಿನ ಜನರಿಗೆ ಪ್ರಚೂರ ಪಡಿಸಿ, ರಾಜ್ಯದ ಪ್ರವಾಸೋದ್ಯಮವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸುಧಾಕರ್ ಮನವಿ ಮಾಡಿದರು.

ವಿಶ್ವದಲ್ಲೆ ಅಮೆರಿಕಾ ಕೊರೋನದಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾದ ದೇಶವಾಗಿದೆ. ಕರ್ನಾಟಕದಲ್ಲಿ ಕೊರೋನ ನಿಯಂತ್ರಣವನ್ನು ಕಟ್ಟುನಿಟ್ಟಿನಿಂದ ಮಾಡಿದ್ದೇವೆ. ವಿಶ್ವದಲ್ಲೇ ಕರ್ನಾಟಕದ ಸಾವಿನ ಪ್ರಮಾಣ ಶೇ.1.6 ಇದೆ. ಕೊರೋನ ಸಂಕಷ್ಟದಲ್ಲೂ ಆರ್ಥಿಕತೆಯನ್ನು ಸಬಲವಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಅವರು ಹೇಳಿದರು.

ಚೀನಾ ದೇಶಕ್ಕೆ ಸೆಡ್ಡು ಹೊಡೆಯಲು ಕರ್ನಾಟಕದಲ್ಲಿ ಆಟಿಕೆಗಳ ಉತ್ಪಾದನಾ ಘಟಕ ತೆರೆಯುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ. ಚನ್ನಪಟ್ಟಣ ಹಾಗೂ ಈ ಆಟಿಕೆ ಘಟಕಗಳ ಮೂಲಕ ನಮ್ಮ ಆಟಿಕೆ ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಹೊಂದಲಿದೆ ಎಂದು ಸುಧಾಕರ್ ತಿಳಿಸಿದರು.

ಕನ್ನಡ ಭಾಷೆಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿನ ಸಾಂಸ್ಕೃತಿಕ ವೈಭವ ಅತ್ಯುನ್ನತವಾದದ್ದು. ಕನ್ನಡಿಗರು ಸಹೃದಯಿಗಳು. ನಮ್ಮಲ್ಲಿನ ಯುವಕರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೆರಿಕಾಗೆ ತೆರಳಿ ಅಲ್ಲಿನ ಜನರಿಗೆ ಸ್ವಂತ ಶಕ್ತಿಯಿಂದ ವಿವಿಧ ವೃತ್ತಿಯಲ್ಲಿ ತೊಡಗಿ ಕನ್ನಡ ನಾಡಿಗೆ ಕೀರ್ತಿ ತರುತ್ತಿದ್ದಾರೆ. ಕರ್ನಾಟಕಕ್ಕೆ ಮರಳಿ ಕೆಲವರು ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಕ್ಷೇತ್ರವನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಮೇಲಿನ ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News