ಅಧಿಕಾರಿಗಳು ರೈತ ಸ್ನೇಹಿಗಳಾಗಬೇಕೇ ಹೊರತು ವ್ಯಾಪಾರಿ ಸ್ನೇಹಿಯಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2020-09-10 12:19 GMT

ಬೆಂಗಳೂರು, ಸೆ. 10: ಕೃಷಿ ಇಲಾಖಾ ಅಧಿಕಾರಿಗಳು ರೈತ ಸ್ನೇಹಿಗಳಾಗಬೇಕೇ ಹೊರತು, ವ್ಯಾಪಾರಿ ಸ್ನೇಹಿಗಳಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ಸಲಹೆ ನೀಡಿದ್ದಾರೆ.

ಗುರುವಾರ ಇಲ್ಲಿನ ಜಿಕೆವಿಕೆಯ ಕುವೆಂಪು ಸಭಾಂಗಣದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಕೃಷಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳು ರೈತಸ್ನೇಹಿಗಳಾಗಬೇಕು. ರೈತರಿಗೆ ಅಧಿಕಾರಿಗಳು ಸ್ಥಳೀಯವಾಗಿ ಸಿಗುವಂತಾಗಬೇಕು. ರೈತರೇ ಉತ್ತಮ ಅಧಿಕಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸುವಂತಾಗಬೇಕು. ಕೃಷಿ ಇಲಾಖೆಯ ಅಭಿವೃದ್ಧಿಗೆ ರೈತರಿಗೆ ಅನುಕೂಲಕಲ್ಪಿಸಲು ಅಧಿಕಾರಿಗಳು ಯೋಜನೆಗಳನ್ನು ರೂಪಿಸಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ರೈತರ ಅಭಿವೃದ್ಧಿಗಾಗಿ ನೀಡುವ ಸಲಹೆಗಳನ್ನು ಸ್ವೀಕರಿಸಲಾಗುವುದು. ಈ ಬಾರಿ ಶೇ.101ರಷ್ಟು ಬಿತ್ತನೆಯಾಗಿರುವುದು ಇಲಾಖೆಯ ಸಾಧನೆಯಾಗಿದೆ. ರೈತರೇ ಮುಂದಿನ ವರ್ಷದಿಂದ ತಮ್ಮ ಬೆಳೆಯ ಸಮೀಕ್ಷೆಯನ್ನು ತಾವೇ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ವರ್ಷದಲ್ಲಿ ಬೆಳೆ ಸಮೀಕ್ಷೆಗೆ ಪ್ರಾಯೋಗಿಕ ಕೆಲಸ ಮಾಡಲಾಗಿದೆ. ಕೆಲವೆಡೆ ತಂತ್ರಜ್ಞಾನದಿಂದ ಮಳೆಯಿಂದ ಸಮೀಕ್ಷೆಗೆ ತೊಂದರೆಯಾಗಿರಬಹುದಷ್ಟೇ. ಆದರೆ ಪ್ರಾಯೋಗಿಕತೆ ಯಶಸ್ವಿಯಾಗುತ್ತಿದೆ ಎಂದರು.

ಬೆಳೆ ಸಮೀಕ್ಷೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಲೇಬೇಕು. ಸರಕಾರದ ಸೌಲಭ್ಯಗಳಿಗೆ ರೈತರು ತಪ್ಪದೇ ಆ್ಯಪ್ ಬೆಳೆ ಸಮೀಕ್ಷೆ ಮಾಡಬೇಕು. ಅಧಿಕಾರಿಗಳು ಇನ್ನಷ್ಟು ಹೆಚ್ಚು ಶ್ರಮ ಮತ್ತು ಆಸಕ್ತಿ ವಹಿಸಿ ಬೆಳೆ ಸಮೀಕ್ಷೆ ಮಾಡಿಸಬೇಕು ಎಂದ ಅವರು, ಕೃಷಿ ಇಲಾಖೆಗೆ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಆಹಾರ ಉತ್ಪಾದನೆ, ಕೃಷಿಗೆ ಹೆಚ್ಚು ಒತ್ತು ನೀಡಿ ಅನುದಾನ ನೀಡುತ್ತಿದ್ದಾರೆ. ನಮ್ಮ ಇಲಾಖೆಯ ಕೆಲಸ ನಾವೇ ಮಾಡಬೇಕು. ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲಾಖೆಯ ಅಭಿವೃದ್ಧಿಗಳನ್ನು ಮಾಹಿತಿಗಳನ್ನು ನೀಡಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ನಿಜಕ್ಕೂ ಯೂರಿಯಾಕ್ಕಾಗಲೀ ರಸಗೊಬ್ಬರಕ್ಕಾಗಲೀ ಯಾವುದೇ ಕೊರತೆಯಿಲ್ಲ. ಸರಬರಾಜು ಹಂಚಿಕೆಯಲ್ಲಿ ಎಲ್ಲೋ ಒಂದೆರಡು ಕಡೆ ವಿಳಂಬವಾಗಿರಬಹುದಷ್ಟೇ. ಆದರೆ ವಾಸ್ತವವಾಗಿ ರಸಗೊಬ್ಬರ ಕೊರತೆಯಿಲ್ಲ. ಕಾಳಸಂತೆ ಮಾರಾಟ ಸುಳ್ಳು. ತಪ್ಪು ಮಾಹಿತಿ ನೀಡುವವರ ವಿರುದ್ಧ ಎಚ್ಚರಿಕೆ ವಹಿಸಬೇಕು ಎಂದರು. ಇಲಾಖೆ ಕಾರ್ಯದರ್ಶಿ ರಾಜಕುಮಾರ್ ಖತ್ರಿ, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಎಂ.ಎಚ್.ರವೀಂದ್ರನಾಥ್ ಅವರು ದಾವಣಗೆರೆಯಲ್ಲಿ ಬದುಕು ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳು ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವರದಿ ಕೇಳಿದ್ದೆ. ಅಂತೆಯೇ ವರದಿ ಪರಿಶೀಲನೆ ಬಳಿಕ ರವೀಂದ್ರನಾಥ್ ಅವರನ್ನು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ನಿಯೋಜಿಸಲಾಗಿದೆ. ಹಗಲಿರುಳು ಶ್ರಮಿಸುವ ಎಲ್ಲ ವೈದ್ಯರ ಹಿತಾಸಕ್ತಿ ಕಾಪಾಡಲು ನಮ್ಮ ಸರಕಾರ ಬದ್ಧ'

-ಬಿ.ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News