ಕಬ್ಬನ್‍ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಕ್ಕೆ ವಿಜ್ಞಾನಿಗಳ ತಂಡ ಶಿಫಾರಸ್ಸು

Update: 2020-09-11 13:01 GMT

ಬೆಂಗಳೂರು, ಸೆ.11: ನಗರದ ಮಧ್ಯಭಾಗದಲ್ಲಿರುವ ಕಬ್ಬನ್‍ ಪಾರ್ಕ್ ನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳ ತಂಡ ಶಿಫಾರಸ್ಸು ಮಾಡಿದೆ.

ಐಐಎಸ್ಸಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಾರಿಗೆ ವ್ಯವಸ್ಥೆ ಇಂಜಿನಿಯರಿಂಗ್ ಘಟಕದ ಸಹಾಯಕ ಪ್ರಾಧ್ಯಾಪಕ ಪ್ರೊ.ಆಶಿಶ್ ವರ್ಮ ಹಾಗೂ ಸಂಶೋಧನಾ ವಿದ್ಯಾರ್ಥಿಗಳಾದ ಹೇಮಂತಿನಿ ಅಲ್ಲಿರಾಣಿ ಮತ್ತು ಹರ್ಷ ವಜ್ಜರಪು ಅವರ ತಂಡವು ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದ್ದು, ಅದನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ.

ವಾಹನ ಸಂಚಾರ ನಿಷೇಧಿಸಿದರೆ ಹಾಗೂ ನಿಷೇಧಿಸದೇ ಇದ್ದರೆ ಕಬ್ಬನ್ ಉದ್ಯಾನದ ಒಳಗಿನ ರಸ್ತೆಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಎಷ್ಟು ವಾಹನಗಳು ಸಂಚರಿಸುತ್ತವೆ ಎಂಬ ಅನುಪಾತವನ್ನು ಹೋಲಿಸಿ ನೋಡಿದೆ. ಅದರ ಪ್ರಕಾರ, ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಿದರೆ ಬೆಂಗಳೂರು ಮಹಾನಗರ ವ್ಯಾಪ್ತಿಯ ರಸ್ತೆ ಜಾಲದಲ್ಲಿ ವಾಹನ ಸಂಚಾರದ ಒಟ್ಟು ಕಿಲೋಮೀಟರ್ (ವಿಕೆಟಿ) ಪ್ರಮಾಣವು ಶೇ 0.44ರಷ್ಟು ಇಳಿಕೆ ಆಗಲಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.

ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ, ಕೆಲವು ಪ್ರಯಾಣಿಕರು ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಇದೇ ಮಾರ್ಗವನ್ನು ಬಳಸುತ್ತಾರೆ. ಅವರು ಹೆಚ್ಚು ದೂರದ ಮಾರ್ಗವನ್ನು ಬಳಸಲು ಇದು ಕಾರಣವಾಗುತ್ತದೆ. ಇದರಿಂದ ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುವ ದೈನಂದಿನ ಪ್ರಮಾಣವೂ 1,400 ಕೆ.ಜಿಗಳಷ್ಟು ಹೆಚ್ಚುತ್ತದೆ. ವಾತಾವರಣ ಸೇರುವ ದೂಳಿನ ಕಣಗಳ (ಪಾರ್ಟಿಕ್ಯುಲೇಟ್ ಮ್ಯಾಟರ್) ಪ್ರಮಾಣವೂ ಶೇ 0.68ರಷ್ಟು ಕಡಿಮೆಯಾಗಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ವಿಜ್ಞಾನಿಗಳ ತಂಡವು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತೆ ಮಂಜುಳಾ, ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದರ್ ಕಟಾರಿಯಾ ಹಾಗೂ ಸಂಚಾರ ಪೊಲೀಸ್ ಜಂಟಿ ಕಮಿಷನರ್ ರವಿಕಾಂತೇಗೌಡ ಅವರಿಗೂ ಅಧ್ಯಯನ ವರದಿಯನ್ನು ಸಲ್ಲಿಸಿದೆ.

ತಂಡದ ಪ್ರಮುಖ ಶಿಫಾರಸ್ಸುಗಳು

ಕಬ್ಬನ್‍ ಪಾರ್ಕ್ ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಬೇಕು. ವಾಹನ ಒತ್ತಡ ಕಡಿಮೆ ಮಾಡಲು ಏಕಮುಖ ಸಂಚಾರ, ಜಂಕ್ಷನ್‍ಗಳ ಅಭಿವೃದ್ಧಿ, ಟ್ರಾಫಿಕ್ ಸಿಗ್ನಲ್‍ಗಳ ಸಮಯ ಮರುಹೊಂದಾಣಿಕೆಯಂತಹ ಕ್ರಮಗಳನ್ನು ಕಬ್ಬನ್ ಉದ್ಯಾನದ ಅಕ್ಕಪಕ್ಕದ ರಸ್ತೆಗಳಲ್ಲಿ ಅನುಸರಿಸಬೇಕು. ವಾಣಿಜ್ಯ ಕೇಂದ್ರ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆ ಬಳಕೆ, ಸೈಕಲ್ ಬಳಕೆ, ನಡೆದು ಹೋಗುವುದನ್ನು ಉತ್ತೇಜಿಸಬೇಕು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News