'ನನ್ನ ರಾಷ್ಟ್ರೀಯ ಶಿಕ್ಷಣ ನೀತಿ' ಅಭಿಯಾನಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಚಾಲನೆ

Update: 2020-09-11 17:59 GMT

ಬೆಂಗಳೂರು, ಸೆ.11: ವಿದ್ಯಾಭಾರತಿ ರಾಷ್ಟ್ರೀಯ ಸಂಘಟನೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಸಲುವಾಗಿ ‘ಮೈಎನ್‍ಇಪಿʼ (ನನ್ನ ರಾಷ್ಟ್ರೀಯ ಶಿಕ್ಷಣ ನೀತಿ) ರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಅಭಿಯಾನಕ್ಕೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ವಿದ್ಯಾಭಾರತಿ ಆಯೋಜಿಸಿದ್ದ ಸಮಾರಂಭದಲ್ಲಿ ಮೈಎನ್‍ಇಪಿ ವೆಬ್‍ಸೈಟ್‍ಗೂ ಚಾಲನೆ ನೀಡಿದ ಅವರು, ಎನ್‍ಇಪಿ ಕುರಿತ ರಾಷ್ಟ್ರೀಯ ಸ್ಪರ್ಧೆಯಲ್ಲಿ ಹೆಚ್ಚುಹೆಚ್ಚು ಜನ ಭಾಗವಹಿಸುವುದರ ಮೂಲಕ ಅದು ಹೆಚ್ಚು ಜನರಿಗೆ ತಲುಪುವ ಹಾಗೆ ಆಗಬೇಕು. ಈ ಕೆಲಸವನ್ನು ವಿದ್ಯಾಭಾರತಿ ಸಂಸ್ಥೆ ಕೈಗೆತ್ತಿಕೊಂಡಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಗತ್ತಿಗೆ ವಿಶ್ವ ಗುರು ಭಾರತವಾಗಬೇಕಾದರೆ ಶಿಕ್ಷಣ ನೀತಿ ಚೆನ್ನಾಗಿರಬೇಕು. ಅಂತಹ ನೀತಿಯನ್ನು 34 ವರ್ಷಗಳ ನಂತರ ಕೇಂದ್ರ ಸರಕಾರ ನಾಡಿಗೆ ಕೊಟ್ಟಿರುವುದು ನಮ್ಮೆಲ್ಲರ ಪುಣ್ಯ. ಹೀಗಾಗಿ ಅದರಲ್ಲಿನ ಅಂಶಗಳು ಎಲ್ಲರಿಗೂ ತಲುಪುವಂತಾಗಬೇಕು. ಈ ಸ್ಪರ್ಧೆ ಮೂಲಕ ಅದು ಹೆಚ್ಚು ಚರ್ಚೆಯಾಗಬೇಕು. ನೀತಿ ಜಾರಿ ಸಂಬಂಧ ಇನ್ನೊಂದು ವರ್ಷ ಕಾಲ ನಿರಂತರವಾಗಿ ಸಭೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್ ಮಾತನಾಡಿ, ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಎಲ್ಲ ರೀತಿಯ ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿಯೂ ಹಲವು ಸಭೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ಮೈಎನ್‍ಇಪಿ ಸ್ಪರ್ಧೆಯಲ್ಲಿ ಹೆಚ್ಚು ಹೆಚ್ಚು ಜನರು ಭಾಗವಹಿಸುವುದರ ಮೂಲಕ ಅದು ಜನಪ್ರಿಯ ಎನ್‍ಇಪಿ ಆಗಬೇಕು. ಆಗ ಮಾತ್ರ ಅದು ಯಶಸ್ವಿ ಕೂಡ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಪೂರ ಮಾತನಾಡಿ, ಎನ್‍ಇಪಿ ಜಾರಿಗೆ ಸರಕಾರ ಹಾಕಿಕೊಂಡಿರುವ ಕಾರ್ಯಕ್ರಮಗಳು ಮೆಚ್ಚುವಂತಹದ್ದು. ಜಾರಿ ವಿಷಯದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿರಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ವಿದ್ಯಾಭಾರತಿಯ ನಾಗರಾಜ ರೆಡ್ಡಿ ಮಾತನಾಡಿ, ಹದಿಮೂರು ಭಾಷೆ ಮತ್ತು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 9ರಿಂದ 12ನೇ ತರಗತಿ ಮಕ್ಕಳಿಗಾಗಿ ಎರಡು ನಿಮಿಷದ ಭಾಷಣ ಸ್ಪರ್ಧೆ, ಕೈಬರಹದ ಭಿತ್ತಪತ್ರ ಸ್ಪರ್ಧೆ, ಪ್ರಧಾನಿಗೆ ಪತ್ರ ಬರೆಯುವ ಸ್ಪರ್ಧೆ, 300 ಪದಗಳ ಪ್ರಬಂಧ ಸ್ಪರ್ಧೆ ಇರುತ್ತದೆ ಎಂದರು.

ಪದವಿ ಹಂತದವರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಎರಡು ಪ್ರತ್ಯೇಕ ಸ್ಪರ್ಧೆಗಳು ಇರುತ್ತವೆ. ಕಿರುಚಿತ್ರ (2.20 ನಿಮಿಷ), ಡಿಜಿಟಲ್ ಪೋಸ್ಟರ್, ಪ್ರಿಂಟಿಂಗ್ ಮತ್ತು ಹ್ಯಾಂಡ್‍ಮೇಡ್ ಪೋಸ್ಟರ್, 8 ಟ್ವೀಟ್‍ಗಳ ಥ್ರೇಡ್ ಇತ್ಯಾಧಿ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಎನ್‍ಇಪಿ ಕರಡು ಸಮಿತಿ ಅಧ್ಯಕ್ಷ ಪ್ರೊ.ಕಸ್ತೂರಿರಂಗನ್ ವರ್ಚುಯಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಯೊಕಾನ್ ಮುಖ್ಯಸ್ಥೆ ಕಿರಣ್ ಮಂಜುಂದಾರ್ ಶಾ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೇಣುಗೋಪಾಲ್, ವಿದ್ಯಾಭಾರತಿ ಕರ್ನಾಟಕ ಶಾಖೆಯ ಉಪಾಧ್ಯಕ್ಷ ರಾಜಶೇಖರರೆಡ್ಡಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News