ರವಿಕೃಷ್ಣಾ ರೆಡ್ಡಿಗೆ ಅಪಘಾತ ಹಿನ್ನೆಲೆ: ಕೆಆರ್ಎಸ್ ಪಕ್ಷದ ಸೈಕಲ್ ಯಾತ್ರೆ ತಾತ್ಕಾಲಿಕ ಮುಂದೂಡಿಕೆ
ಬೆಂಗಳೂರು, ಸೆ.18: ಸಶಕ್ತ, ಮೌಲ್ಯಾಧಾರಿತ, ನೆಮ್ಮದಿಯ ಕರ್ನಾಟಕಕ್ಕಾಗಿ ಕೈಗೊಂಡಿದ್ದ ಕೆಆರ್ಎಸ್ ಸೈಕಲ್ ಯಾತ್ರೆಯನ್ನು ತನಗೆ ಅಪಘಾತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ತಟ್ಟೆಕೆರೆ ಕಣಿವೆಯ ಬಳಿ ಸೈಕಲ್ನಿಂದ ಬಿದ್ದು ಅಪಘಾತಗೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಇನ್ನು ಎರಡು ತಿಂಗಳಗಳ ಕಾಲ ಪ್ರವಾಸವನ್ನು ಕೈಗೊಳ್ಳಬಾರದೆಂದು ತೀರ್ಮಾನಕ್ಕೆ ಬಂದಿದ್ದೇನೆ. ನನಗೆ ಅಪಘಾತವಾದ ಬೆನ್ನಲ್ಲೇ ಕೆಆರ್ಎಸ್ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯು ಸುದೀರ್ಘ ಚರ್ಚೆ ಮಾಡಿ, ಸೈಕಲ್ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮತ್ತು ಮುಂದೂಡುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಎರಡು ವಾರಗಳ ಬಳಿಕ ಪಕ್ಷದ ಸಭೆಗಳಲ್ಲಿ ಭಾಗವಹಿಸುವ ಆಶಾಭಾವನೆ ಹೊಂದಿದ್ದೇನೆ. ಫೇಸ್ಬುಕ್ ಮೂಲಕ ಸಂವಹನ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಅಲ್ಲದೆ, ಶೀಘ್ರ ಗುಣಮುಖನಾಗಿ ಸೈಕಲ್ ಯಾತ್ರೆ, ಮೋಟಾರ್ ಸೈಕಲ್ ಯಾತ್ರೆ, ಪಾದಯಾತ್ರೆ, ಜಾಗೃತಿ ಕಾರ್ಯಕ್ರಮಗಳು, ಹೋರಾಟಗಳಲ್ಲಿ ಭಾಗವಹಿಸಲಿದ್ದೇನೆ ಎಂದು ಹೇಳಿದ್ದಾರೆ.
ಈಗಾಗಲೇ ಸೈಕಲ್ ಯಾತ್ರೆಯನ್ನು ನಾಲ್ಕು ದಿನ ಪೂರೈಸಿದ್ದು, 235 ಕಿಲೋಮಿಟರ್ ದೂರ ಕ್ರಮಿಸಿದ್ದೇವೆ. ಆದರೆ, ನನಗೆ ಅಪಘಾತವಾದಾಗ 215 ಕ್ರಮಿಸಿದ್ದು, ಈ ಅಪಘಾತದ ಕಾರಣಕ್ಕಾಗಿ ಯಾತ್ರೆಯು ನಿಲ್ಲುವ ಪರಿಸ್ಥಿತಿ ಬಂದಿದ್ದು, ನನಗೆ ಅಪಾರ ನೋವು ಉಂಟು ಮಾಡಿದೆ ಎಂದಿದ್ದಾರೆ.