ಬಹುಕೋಟಿ ವಂಚನೆ ಆರೋಪ: ಕಣ್ವ ಬ್ಯಾಂಕಿನ 255 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಈಡಿ
ಬೆಂಗಳೂರು, ಸೆ.25: ಸಾರ್ವಜನಿಕರಿಂದ ಹಣ ಪಡೆದು ಬಹುಕೋಟಿ ವಂಚನೆ ಆರೋಪಕ್ಕೆ ಒಳಗಾಗಿರುವ ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿ. ಬ್ಯಾಂಕಿನ 255.17 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ(ಈಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಕಣ್ವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ನಂಜುಂಡಯ್ಯ ಹಾಗೂ ಇವರ ಕುಟುಂಬಸ್ಥರಿಗೆ ಸೇರಿದ ಕೃಷಿ ಹಾಗೂ ಕೃಷಿಯೇತರ ಭೂಮಿ, ಕಟ್ಟಡಗಳು, ರೆಸಾರ್ಟ್ಗಳು, ಬ್ಯಾಂಕ್ ಖಾತೆಗಳಲ್ಲಿದ್ದ ಹಣ, ಸಂಸ್ಥೆಯ ಇತರ ನಿರ್ದೇಶಕರ ಹೆಸರಲ್ಲಿರುವ ಆಸ್ತಿ ಸೇರಿ 255.17 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಲಾಗಿದೆ.
ವಂಚನೆ ಪ್ರಕರಣದ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ನಂಜುಂಡಯ್ಯ ವಿರುದ್ಧ 4 ಎಫ್ಐಆರ್ ದಾಖಲಾಗಿತ್ತು. ನಂತರ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ತದನಂತರ ಮಧ್ಯ ಪ್ರವೇಶಿಸಿದ್ದ ಈಡಿ ತನಿಖೆ ಚುರುಕುಗೊಳಿಸಿ ನಂಜುಂಡಯ್ಯ ಸೇರಿ ಐವರು ನಿರ್ದೇಶಕರ ನಿವಾಸದ ಮೇಲೆ ದಾಳಿ ನಡೆಸಿತ್ತು.
ಈ ದಾಳಿ ವೇಳೆ ಕೆಲವು ದಾಖಲೆಗಳು ಪತ್ತೆಯಾಗಿದ್ದವು. ಆ.25ರಂದು ನಂಜುಡಯ್ಯನ್ನು ಬಂಧಿಸಿ 7 ದಿನಗಳ ಕಾಲ ಈಡಿ ವಶಕ್ಕೆ ಪಡೆದಿತ್ತು.