ಬೆಂಗಳೂರು: ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಅಣಕು ಶವಯಾತ್ರೆ ನಡೆಸಿ ರೈತರ ಪ್ರತಿಭಟನೆ

Update: 2020-09-26 14:48 GMT

ಬೆಂಗಳೂರು, ಸೆ.26: ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಯು ರೈತ ವಿರೋಧಿ ಎಂದು ಆರೋಪಿಸಿ ಅಣಕು ಶವಯಾತ್ರೆ ನಡೆಸುವ ಮೂಲಕ ನಗರದ ಮೌರ್ಯ ಸರ್ಕಲ್‍ನಲ್ಲಿ ಶನಿವಾರ ರೈತರು ಪ್ರತಿಭಟನೆ ನಡೆಸಿದರು.

ರೈತರ ಪಾಲಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸತ್ತು ಹೋಗಿವೆ. ಹೀಗಾಗಿ ಚಟ್ಟಕಟ್ಟಿ, ಅಣಕು ಶವಯಾತ್ರೆ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆಗಳು ರೈತರ ಅಭ್ಯುದಯಕ್ಕೆ ಎಂದು ಸಿ.ಎಂ ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿ ಅವರು ಕಾಯ್ದೆ ಪರ ಇದ್ದಾರೆ. ಸರಕಾರ ರೈತರನ್ನು ಕೈಚೆಲ್ಲಿ ಬಿಟ್ಟಿದೆ. ಇದರಿಂದ ಮಾರುಕಟ್ಟೆ, ಕೃಷಿ ಭೂಮಿ ಸಂಪೂರ್ಣವಾಗಿ ಕಾರ್ಪೋರೇಟ್ ತೆಕ್ಕೆಗೆ ಹೋಗಲಿದೆ. ಹಿಂದಿದ್ದ ಈಸ್ಟ್ ಇಂಡಿಯಾ ಕಂಪನಿಗಳ ಬದಲಿಗೆ, ಈಗ ಕಾರ್ಪೋರೇಟ್ ಕಂಪನಿ ಆಡಳಿತಗಳು ಬರಲಿವೆ ಎಂದರು.

ಸೆ.28ರ ಸೋಮವಾರದಂದು ಕರ್ನಾಟಕ ಬಂದ್ ಸಂಪೂರ್ಣ ಸಫಲ ಆಗಲಿದೆ. ಈಗಾಗಲೇ ಹಲವು ಸಂಘಟನೆಗಳ ಬೆಂಬಲ ನೀಡಿವೆ. ವಿಧಾನಸಭೆಯಲ್ಲಿ ಭೂಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ಮಂಡನೆ ಮಾಡಲಾಗಿದೆ. ಈ ವೇಳೆ ನಮ್ಮ ವಿರೋಧ ವ್ಯಕ್ತಪಡಿಸಲು, ಅಣಕು ಶವಯಾತ್ರೆ ಹಾಗೂ ಅಗ್ನಿಸ್ಪರ್ಶ ಕಾರ್ಯಕ್ರಮ ಮಾಡಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News