ನಾಳೆ (ಸೆ.28) ಸಾರಿಗೆ ಬಸ್ ವ್ಯವಸ್ಥೆ ಎಂದಿನಂತೆ: ಡಿಸಿಎಂ ಸವದಿ

Update: 2020-09-27 09:39 GMT

ಬೆಂಗಳೂರು, ಸೆ.27: ಕೆಲವು ಸಂಘಟನೆಗಳು ನಾಳೆ (ಸೋಮವಾರ) ಬಂದ್ ಗೆ ಕರೆ ಕೊಟ್ಟಿರುವುದರಿಂದ ರಾಜ್ಯಾದ್ಯಂತ ಸಾರಿಗೆ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗುವಂತಾಗಲು ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ , ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಎಂದಿನಂತೆ ಬಸ್ ಸಂಚಾರ ಮುಂದುವರಿಯಲಿದೆ. ಜನತೆಗೆ ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಬಂದ್ ಹಿನ್ನೆಲೆಯಲ್ಲಿ ಬಸ್ಸುಗಳಿಗೆ ಮತ್ತು ಇತರ ಸರಕಾರಿ ಆಸ್ತಿಪಾಸ್ತಿಗಳಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಹೆಚ್ಚಿನ ಸುರಕ್ಷತಾ ವ್ಯವಸ್ಥೆಗಳನ್ನು ಒದಗಿಸಿಕೊಡಬೇಕೆಂದು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕೋರಲಾಗಿದೆ. ಅಷ್ಟೇ ಅಲ್ಲ ಬಸ್ಸುಗಳಿಗೆ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟು ಮಾಡಲು ಯಾರೇ ಯತ್ನಿಸಿದರೂ ಕೂಡ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಹಿಂಜರಿಯುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

ಸರಕಾರವು ರೈತರ ಹಿತಾಸಕ್ತಿಗೆ ಪೂರಕವಾಗಿಯೇ ಎಪಿಎಂಸಿ ಕಾಯ್ದೆ,  ಭೂ ಸುಧಾರಣಾ ಮಸೂದೆಗಳನ್ನು ಜಾರಿಗೆ ತಂದಿದೆ.  ಈ ಬಗ್ಗೆ ಪ್ರತಿಭಟನಾನಿರತರ ಮನವೊಲಿಸಲು ಮುಖ್ಯಮಂತ್ರಿ  ಸಭೆಯನ್ನು ನಡೆಸಿದ್ದರು. ನಿನ್ನೆ ವಿಧಾನ ಮಂಡಲದ ಕಲಾಪದಲ್ಲಿಯೂ ಈ ಮಸೂದೆಗಳಿಂದ ರೈತರಿಗೆ ಉಂಟಾಗಲಿರುವ ಲಾಭಗಳ ಬಗ್ಗೆಯೂ ನಮ್ಮ ಸರಕಾರ ಸ್ಪಷ್ಟನೆ ನೀಡಿತ್ತು. ಆದರೂ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಬಂದ್ ನಡೆಸಲು ನಿರ್ಧರಿಸಿರುವುದು ದುರ್ದೈವದ ಸಂಗತಿ ಎಂದರು.

ಕೊರೋನ ಪಿಡುಗಿನ ಆತಂಕದಲ್ಲಿ ರಾಜ್ಯದ ಜನರು ಪರಿತಪಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರತಿಭಟನೆ, ಬಂದ್ ಗಳನ್ನು ನಡೆಸುವುದು ಸರಿಯಲ್ಲ. ಬಂದ್ ನಡೆಸುವ ನಿರ್ಧಾರವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಕೈಬಿಟ್ಟು ಸಹಕರಿಸಬೇಕೆಂದು ಸವದಿ ಮುಷ್ಕರನಿರತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News