​ಉತ್ತರ ಪ್ರದೇಶ: ಮತ್ತೊಬ್ಬ ದಲಿತ ಯುವತಿಯ ಅತ್ಯಾಚಾರ, ಕೊಲೆ

Update: 2020-10-01 04:17 GMT

ಲಕ್ನೋ, ಅ.1: ಹಾಥರಸ್ ಘಟನೆ ಮರೆಯುವ ಮುನ್ನವೇ ಉತ್ತರ ಪ್ರದೇಶದಲ್ಲಿ 22 ವರ್ಷದ ಮತ್ತೊಬ್ಬಳು ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

ಬಲರಾಂಪುರದ ಗೈಸ್ರಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಶಾಹೀದ್ ಮತ್ತು ಸಾಹಿಲ್ ಎಂಬುವವನ್ನು ಬಂಧಿಸಲಾಗಿದೆ.

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಂಗಳವಾರ ತಡರಾತ್ರಿಯಾದರೂ ಮನೆಗೆ ಬರಲಿಲ್ಲ. ಬುಧವಾರ ನಸುಕಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಯುವತಿ ರಿಕ್ಷಾವೊಂದರಲ್ಲಿ ಆಗಮಿಸಿದ್ದಾಳೆ. ಕೈಗಳಿಗೆ ಗ್ಲೂಕೋಸ್ ಡ್ರಿಪ್ ಹಾಕಲಾಗಿತ್ತು. ತಕ್ಷಣ ಆಸ್ಪತ್ರೆಗೆ ಒಯ್ದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಳು ಎಂದು ಕುಟುಂಬದವರು ದೂರು ನೀಡಿದ್ದಾಗಿ ಬಲರಾಂಪುರ ಎಸ್ಪಿ ದೇವರಾಜನ್ ವರ್ಮಾ ಹೇಳಿದ್ದಾರೆ.

"ಯುವಕರು ಅತ್ಯಾಚಾರ ಎಸಗಿದ ಬಳಿಕ ತೀವ್ರ ಅಸ್ವಸ್ಥಳಾಗಿದ್ದ ಆಕೆಯನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆಕೆಯ ದೇಹಸ್ಥಿತಿ ಮತ್ತಷ್ಟು ಕ್ಷೀಣಿಸಿದಾಗ ಅಕೆಯನ್ನು ಆಸ್ಪತ್ರೆಗೆ ಒಯ್ಯುವ ಬದಲು ಮನೆಗೆ ವಾಪಸ್ ಕರೆತಂದಿದ್ದಾರೆ. ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ" ಎಂದು ಅವರು ವಿವರಿಸಿದ್ದಾರೆ.

ಯುವತಿಗೆ ಚಿತ್ರಹಿಂಸೆ ನೀಡಿ ಆಕೆಯ ಕೈಕಾಲು ಮುರಿದಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿರುವ ಬಲರಾಂಪುರ ಪೊಲೀಸರು, ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢಪಟ್ಟಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಆಘಾತ ಹಾಗೂ ರಕ್ತಸ್ರಾವ ಯುವತಿಯ ಸಾವಿಗೆ ಕಾರಣ ಎಂದು ದೇವಿಪಟ್ನ ವಲಯ ಡಿಐಜಿ ರಾಕೇಶ್ ಸಿಂಗ್ ಹೇಳಿದ್ದಾರೆ. "ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆದಿದೆಯೇ ಇಲ್ಲವೇ ಎನ್ನುವುದನ್ನು ವೈದ್ಯಕೀಯ ತಜ್ಞರು ಪರಿಶೀಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News