ಗ್ರಾಮಸ್ಥನನ್ನು ಗುಂಡಿಕ್ಕಿ ಹತ್ಯೆಗೈದ ಸಮೀಪವರ್ತಿಯ ಬೆಂಬಲಕ್ಕೆ ನಿಂತ ಬಿಜೆಪಿ ಶಾಸಕನಿಗೆ ನಡ್ಡಾ ಎಚ್ಚರಿಕೆ

Update: 2020-10-19 05:31 GMT
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ 

ಹೊಸದಿಲ್ಲಿ : ಕಳೆದ ವಾರ ಬಲ್ಲಿಯಾದಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಸಾಯಿಸಿದ ತನ್ನ ಸಮೀಪವರ್ತಿ ಧೀರೇಂದ್ರ ಸಿಂಗ್ ಎಂಬಾತನ ಬೆಂಬಲಕ್ಕೆ ನಿಂತ ಬಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ವಿವರಣೆ ಕೋರಿದ್ದಾರೆ, ಈ ಘಟನೆ ಹಾಗೂ ಶಾಸಕನ ನಿಲುವಿಗೆ ಸಂಬಂಧಿಸಿದಂತೆ ನಡ್ಡಾ ಅವರು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರಿಗೂ ಎಚ್ಚರಿಕೆ ನೀಡಿದ್ದಾರೆ.

ಕಳೆದ ಗುರವಾರ ಪಂಚಾಯತ್ ಸಭೆ ಸಂದರ್ಭ ಮಾಜಿ ಯೋಧನಾಗಿರುವ ಧೀರೇಂದ್ರ ಸಿಂಗ್ ಗ್ರಾಮಸ್ಥರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಘಟನೆ ನಡೆದ ನಂತರ ನಾಪತ್ತೆಯಾಗಿದ್ದ ಸಿಂಗ್ ಕೊನೆಗೆ ತಾನು ಶರಣಾಗುವುದಾಗಿ ಹೇಳಿಕೊಂಡಿದ್ದು ರವಿವಾರ ಆತನನ್ನು ಹೆದ್ದಾರಿ ಸಮೀಪ ಬಂಧಿಸಲಾಗಿದೆ.

ಧೀರೇಂದ್ರ ಸಿಂಗ್ ಸ್ವರಕ್ಷಣೆಗಾಗಿ ಗುಂಡು ಹಾರಿಸಬೇಕಾಗಿ ಬಂದಿತ್ತು ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಾದಿಸಿದ್ದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಡ್ಡಾ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಿಗೆ ಕರೆ ಮಾಡಿ ಶಾಸಕನ ವರ್ತನೆಯ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರಲ್ಲದೆ ಶಾಸಕನಿಗೆ ಶೋಕಾಸ್ ನೋಟಿಸ್ ಕೂಡ ಜಾರಿಗೊಳಿಸುವಂತೆ ಸೂಚಿಸಿದ್ದು ತನಿಖೆಯ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪದ ವಿರುದ್ಧ ಎಚ್ಚರಿಕೆಯನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News