ಮಧ್ಯಪ್ರದೇಶ: ಇಬ್ಬರು ಸಚಿವರ ರಾಜೀನಾಮೆ
Update: 2020-10-21 12:48 GMT
ಭೋಪಾಲ್, ಅ.21: ಮಧ್ಯಪ್ರದೇಶದ ಸಚಿವರಾದ ತುಳಸೀರಾಮ್ ಸಿಲಾವತ್ ಹಾಗೂ ಗೋವಿಂದ್ ರಜಪೂತ್ ಬುಧವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇವರಿಬ್ಬರೂ ಶಾಸಕರಾಗಿರಲಿಲ್ಲ. ಸಂವಿಧಾನದ 164(4)ನೇ ಪರಿಚ್ಛೇದದ ಪ್ರಕಾರ, ವಿಧಾನಸಭೆಯ ಶಾಸಕನಲ್ಲದ ಸಚಿವರು, ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ 6 ತಿಂಗಳೊಳಗೆ ಶಾಸಕನಾಗಿ ಆಯ್ಕೆಯಾಗಬೇಕು. ಇಲ್ಲದಿದ್ದರೆ ಅವರ ಸಚಿವ ಸ್ಥಾನ ರದ್ದಾಗುತ್ತದೆ. ಸಿಲಾವತ್ ಮತ್ತು ರಜಪೂತ್ ಎಪ್ರಿಲ್ 21ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಅಕ್ಟೋಬರ್ 21ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿತ್ತು. ಇದೀಗ ನವೆಂಬರ್ 3ರಂದು ನಡೆಯುವ ಉಪಚುನಾವಣೆಯಲ್ಲಿ ಇಬ್ಬರೂ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.