ಮಾನಹಾನಿ ಪ್ರಕರಣ: ದಿಲ್ಲಿ ಸಚಿವ ಸತ್ಯಂದರ್ ಜೈನ್ ರ ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ನಾಯಕ ಕಪಿಲ್ ಮಿಶ್ರಾ
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದಿಂದ 2017ರಲ್ಲಿ ಹೊರಹಾಕಲ್ಪಟ್ಟ ಕೆಲವೇ ದಿನಗಳಲ್ಲಿ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ದಿಲ್ಲಿ ನ್ಯಾಯಾಲಯದ ಮುಂದೆ ಗುರುವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಜೈನ್ ಅವರು ಮಿಶ್ರಾ ವಿರುದ್ಧ 2017ರ ಮೇ 7ರಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಜೈನ್ ಅವರು ಮೇ 5 ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಲಂಚ ನೀಡಿದ್ದರು ಎಂದು ಮಿಶ್ರಾ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಮಿಶ್ರಾಗೆ ಸಮನ್ಸ್ ನೀಡಲಾಗಿತ್ತು. ಐಪಿಸಿ ಸೆಕ್ಷನ್ 500(ಮಾನಹಾನಿಗೆ ಶಿಕ್ಷೆ)ಅಡಿ ಮಿಶ್ರಾ ವಿರುದ್ಧ ಆರೋಪಗಳನ್ನು ಹೊರಿಸಲಾಗಿತ್ತು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ ಅವರ ಎದುರು ಹಾಜರಾದ ಮಿಶ್ರಾ ಬೇಷರತ್ ಕ್ಷಮೆಯಾಚಿಸುವ ಮೊದಲು ಹೇಳಿಕೆ ನೀಡಲು ಸಿದ್ಧ ಎಂದು ಹೇಳಿದರು. ಮಿಶ್ರಾ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದರೆ ಪ್ರಸ್ತುತ ದೂರನ್ನು ಹಿಂಪಡೆದುಕೊಳ್ಳುವೆ ಎಂದು ಜೈನ್ ನ್ಯಾಯಾಲಯಕ್ಕೆ ತಿಳಿಸಿದರು.
ಮಿಶ್ರಾ ಹಾಗೂ ಜೈನ್ ಅವರ ಹೇಳಿಕೆಗಳನ್ನು ದಾಖಲಿಸಿದ ನಂತರ ದೂರನ್ನು ಹಿಂಪಡೆಯಲಾಯಿತು. ಹಾಗೂ ನಂತರ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿತು.