ಲೋಕಾಯುಕ್ತಕ್ಕೆ ಆಸ್ತಿ ಸಲ್ಲಿಕೆ ಮಾಡದ 124 ಬಿಬಿಎಂಪಿ ಮಾಜಿ ಸದಸ್ಯರು

Update: 2020-11-06 16:36 GMT

ಬೆಂಗಳೂರು, ನ.6: ಕೆಎಂಸಿ ಕಾಯ್ದೆ ಪ್ರಕಾರ ಮೇಯರ್ ಅವರಿಗೆ ಆಸ್ತಿ ವಿವರ ಸಲ್ಲಿಸುತ್ತಿದ್ದ ಕಾರ್ಪೋರೇಟರ್ ಗಳು, 2019ರಲ್ಲಿ ಲೋಕಾಯುಕ್ತಕ್ಕೂ ಆಸ್ತಿ ವಿವರ ಸಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದರೂ 124 ಮಂದಿ ಪಾಲಿಕೆ ಸದಸ್ಯರು ಇದುವರೆಗೂ ಆಸ್ತಿ ವಿವರ ಸಲ್ಲಿಸಿಲ್ಲ.

ಕಾನೂನಿನ ಪ್ರಕಾರ ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದೆ ಲೋಪ ಎಸಗಿದ್ದಾರೆ. ಮತದಾರನಿಂದ ಮತ ಪಡೆದು ಗೆದ್ದ ಜನಪ್ರತಿನಿಧಿ ಕಡ್ಡಾಯ ಆಸ್ತಿ ವಿವರ ಸಲ್ಲಿಸಬೇಕು. ಜೂನ್ 30ರೊಳಗೆ ಲೋಕಾಯುಕ್ತದ ಕಾಯ್ದೆ ಪ್ರಕಾರ ಆಸ್ತಿ ವಿವರ ಸಲ್ಲಿಸಬೇಕು ಎಂಬ ನಿಯಮವಿದ್ದರೂ ನ.5ರವರೆಗೆ 124 ಮಾಜಿ ಕಾರ್ಪೋರೇಟರ್ ಗಳ ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ದಾಖಲೆ ಬಿಡುಗಡೆ ಮಾಡಿದರು.

ಮೇಯರ್ ಆಗಿ ಕೆಲಸ ನಿರ್ವಹಣೆ ಮಾಡಿದ್ದ ಮಂಜುನಾಥ್ ರೆಡ್ಡಿ, ಗೌತಮ್ ಕುಮಾರ್, ಸಂಪತ್ ರಾಜ್, ಪದ್ಮಾವತಿ ಕೂಡ ಆಸ್ತಿ ವಿವರ ಸಲ್ಲಿಸಿಲ್ಲ. ಆಸ್ತಿ ವಿವರ ಸಲ್ಲಿಸದ ಕಾರ್ಪೋರೇಟರ್ಸ್ ಗೆ ನೋಟಿಸ್ ನೀಡಬಹುದು. ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಿಸಬಹುದು. ಅಲ್ಲದೆ ರಾಜ್ಯಪಾಲರಿಗೆ ಪತ್ರ ಬರೆಯಬೇಕು. ಐಪಿಸಿ ಸೆಕ್ಷನ್ 176 ರ ಪ್ರಕಾರ ಕ್ರಿಮಿನಲ್ ಕೇಸ್ ದಾಖಲು ಮಾಡುವ ಅಧಿಕಾರವಿದೆ. ಆದರೆ, ಈವರೆಗೂ ಲೋಕಾಯುಕ್ತದಿಂದಲೂ ದೂರು ದಾಖಲು ಮಾಡಿಲ್ಲ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News