ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಜೂಹಿ ಚಾವ್ಲಾ ತರಾಟೆ

Update: 2020-11-12 17:22 GMT

ಹೊಸದಿಲ್ಲಿ: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸಹ ಮಾಲಕಿ ಜೂಹಿ ಚಾವ್ಲಾ ಏರ್‌ಪೋರ್ಟ್‌ನಲ್ಲಿ ತನಗಾದ ಕಹಿ ಅನುಭವಕ್ಕೆ ಟ್ವಿಟ್ಟರ್‌ನಲ್ಲಿ ಏರ್‌ಪೋರ್ಟ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯ ದುಬೈನಲ್ಲಿ ಮಂಗಳವಾರ ಮುಕ್ತಾಯವಾದ ಬಳಿಕ ದುಬೈನಿಂದ ಸ್ವದೇಶಕ್ಕೆ ವಾಪಸಾದ ಬಾಲಿವುಡ್‌ನ ಹಿರಿಯ ನಟಿ ಚಾವ್ಲಾ ಆರೋಗ್ಯ ತಪಾಸಣೆಗಾಗಿರುವ ಸರದಿ ಸಾಲಿನಲ್ಲಿ ಇತರ ಪ್ರಯಾಣಿಕರೊಂದಿಗೆ ಎರಡು ಗಂಟೆಗೂ ಅಧಿಕ ಸಮಯ ಸಿಲುಕಿ ಕೊಂಡಿದ್ದರು. ಇಂತಹ ಕಳಪೆ ವ್ಯವಸ್ಥೆ ಅಧಿಕಾರಿಗಳಿಗೆ ಗೊತ್ತು ಮಾಡಲು ಚಾವ್ಲಾ ಸಣ್ಣ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಾಕಿದ್ದರು.

"ಆರೋಗ್ಯ ತಪಾಸಣೆಗಾಗಿ ಹೆಚ್ಚಿನ ಕೌಂಟರ್ ನಿರ್ಮಾಣ ಹಾಗೂ ಅಧಿಕಾರಿಗಳನ್ನು ತಕ್ಷಣವೇ ನಿಯೋಜಿಸಬೇಕೆಂದು ಏರ್‌ಪೋರ್ಟ್ ಹಾಗೂ ಸರಕಾರದ ಅಧಿಕಾರಿಗಳಿಗೆ ವಿನಂತಿಸುವೆ. ಎಲ್ಲ ಪ್ರಯಾಣಿಕರು ವಿಮಾನದಿಂದ ಇಳಿದ ಬಳಿಕ ಗಂಟೆಗಳ ಕಾಲ ಕಾದಿದ್ದಾರೆ. ಇದು ನಿಜಕ್ಕೂ ಕರುಣಾಜನಕ. ನಾಚಿಕೆಗೇಡಿನ ವಿಚಾರ'' ಎಂದು ಚಾವ್ಲಾ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News