ಮಾನನಷ್ಟ ಮೊಕದ್ದಮೆ ಇತ್ಯರ್ಥ ಮಾಡಿಕೊಳ್ಳಿ: ಎಂ.ಜೆ. ಅಕ್ಬರ್, ಪ್ರಿಯಾ ರಮಣಿಗೆ ದಿಲ್ಲಿ ನ್ಯಾಯಾಲಯ ಆಗ್ರಹ
ಹೊಸದಿಲ್ಲಿ, ನ. 21: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಇತ್ಯರ್ಥ ಮಾಡಿಕೊಳ್ಳುವಂತೆ ದಿಲ್ಲಿ ನ್ಯಾಯಾಲಯ ಶನಿವಾರ ಕೇಂದ್ರದ ಮಾಜಿ ಸಹಾಯಕ ಸಚಿವ ಎಂ.ಜೆ. ಅಕ್ಬರ್ ಹಾಗೂ ಪತ್ರಕರ್ತೆ ಪ್ರಿಯಾ ರಮಣಿ ಅವರನ್ನು ಆಗ್ರಹಿಸಿದೆ.
ಸುಮಾರು 100 ನ್ಯಾಯಾಧೀಶರನ್ನು ದಿಲ್ಲಿ ಉಚ್ಚ ನ್ಯಾಯಾಲಯ ನವೆಂಬರ್ 18ರಂದು ವರ್ಗಾಯಿಸಿದೆ. ಇವರಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ವಿಶಾಲ್ ಪಹುಜಾ ಕೂಡ ಸೇರಿದ್ದಾರೆ. ಪಹುಜಾ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ರವೀಂದ್ರ ಪಾಂಡೆ ಈ ಪ್ರಕರಣದ ವಿಚಾರಣೆ ನಡೆಸಿ ವಾದಿ-ಪ್ರತಿಪಾದಿಗಳಲ್ಲಿ ಈ ಮನವಿ ಮಾಡಿದರು.
ಈ ಪ್ರಕರಣದ ವಿಚಾರಣೆ ಕೊನೆಯ ಹಂತದಲ್ಲಿ ಇದೆ. ವಾದಿ, ಪ್ರತಿವಾದಿಗಳು ತಮ್ಮ ಅಂತಿಮ ವಾದವನ್ನು ಮಂಡಿಸಿದ್ದರು. ಎಂ.ಜೆ. ಅಕ್ಬರ್ ಅವರನ್ನು ಪ್ರತಿನಿಧಿಸಿದ್ದ ಗೀತಾ ಲುಥರಾ ಅವರು ಅಂತಿಮ ವಾದ ಮಂಡಿಸಿದ ಬಳಿಕ ನ್ಯಾಯವಾದಿ ಪಹುಜಾ ವರ್ಗಾವಣೆಯಾಗಿದ್ದರು.
ಎಂ.ಜೆ. ಅಕ್ಬರ್ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪತ್ರಕರ್ತೆ ಪ್ರಿಯಾ ರಮಣಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಎಂ.ಜೆ. ಅಕ್ಬರ್ ತನ್ನ ಕೇಂದ್ರದ ಸಹಾಯಕ ಸಚಿವನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.