ಸಲಿಂಗ ಕಾಮಕ್ಕೆ ಒಪ್ಪದ ವ್ಯಕ್ತಿಯ ಹತ್ಯೆ ಪ್ರಕರಣ: ಆರೋಪಿ ಬಂಧನ
ನೆಲಮಂಗಲ, ನ. 29: ಸಲಿಂಗ ಕಾಮಕ್ಕೆ ಒಪ್ಪದ ವ್ಯಕ್ತಿಯನ್ನು ಹತ್ಯೆಗೈದಿದ್ದ ಆರೋಪದ ಮೇಲೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಸುನೀಲ್ ಯಾದವ್ ಪಾಂಡೆ(35)ಬಂಧಿತ ಆರೋಪಿಯಾಗಿದ್ದು, ಸಿಕಂದರ್(38)ಹತ್ಯೆಯಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
ಸುನೀಲ್ ಹಾಗೂ ಸಿಕಂದರ್ ಇವರಿಬ್ಬರೂ ಕಡಬಗೆರೆ ಗೇಟ್ನ ಬಳಿ ಇರುವ ಖಾಸಗಿ ಸ್ಟೀಲ್ ಕಂಪೆನಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅ.29ರಂದು ಸುನೀಲ್, ಸಿಕಂದರ್ ಬಳಿ ಸಲಿಂಗಕಾಮಕ್ಕೆ ಒತ್ತಾಯಿಸಿ, ಬಲವಂತ ಮಾಡಿದ್ದ. ಆಗ ಸಿಕಂದರ್ ಅದಕ್ಕೆ ಪ್ರತಿರೋಧ ಒಡ್ಡಿದ್ದ ಎನ್ನಲಾಗಿದೆ.
ಈ ವೇಳೆ ಆಕ್ರೋಶಗೊಂಡ ಸುನೀಲ್ ಇಟ್ಟಿಗೆಯಿಂದ ಸಿಕಂದರ್ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿದ್ದ. ಹಲ್ಲೆಯಿಂದ ಗಾಯಗೊಂಡ ಸಿಕಂದರ್ ನನ್ನು ಆಸ್ಪತ್ರೆಗೆ ಸೇರಿಸಿದ್ದರೂ, ಚಿಕಿತ್ಸೆ ಫಲಿಸದೆ ಅ.31ರಂದು ಮೃತಪಟ್ಟಿದ್ದ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿತ್ತು.
ಆಂಧ್ರದ ರೇಣಿಗುಂಟ ಕೈಗಾರಿಕಾ ಪ್ರದೇಶದ ಬಳಿ ತಲೆ ಮರೆಸಿಕೊಂಡಿದ್ದ ಸುನೀಲ್ ಯಾದವ್ ಪಾಂಡೆಯನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ.