ವಿಧಾನ ಪರಿಷತ್ ನಲ್ಲಿ ಗದ್ದಲ: ತಳ್ಳಿದ ರವಿಕುಮಾರ್, ಬಿದ್ದ ಹರೀಶ್ ಕುಮಾರ್
ಬೆಂಗಳೂರು, ಡಿ. 15: ಗೋಹತ್ಯೆ ನಿಷೆಧ ಮಸೂದೆ ಮಂಡನೆ, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕರೆದಿದ್ದ ವಿಧಾನ ಪರಿಷತ್ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಬಿಜೆಪಿ ಸದಸ್ಯ ಎನ್. ರವಿಕುಮಾರ್, ಕಾಂಗ್ರೆಸ್ ಸದಸ್ಯ ಕೆ.ಹರೀಶ್ ಕುಮಾರ್ ಅವರನ್ನು ಬಲವಾಗಿ ತಳ್ಳಿದ್ದರಿಂದ ಅವರು ಕೆಳಗೆ ಬಿದ್ದ ಘಟನೆಯೂ ನಡೆಯಿತು.
ನಿಗದಿಯಂತೆ ಬೆಳಗ್ಗೆ 11ಕ್ಕೆ ಆರಂಭಗೊಳ್ಳಬೇಕಿದ್ದ ಕಲಾಪ 11:30ರ ಸುಮಾರಿಗೆ ಪರಿಷತ್ ಬೆಲ್ ಹಾಕಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಸಭಾಪತಿ ಆಗಮಿಸುವ ಬಾಗಿಲನ್ನು ಮುಚ್ಚಲಾಗಿತ್ತು. ಈ ಮಧ್ಯೆ ಉಪಸಭಾಪತಿ ಧರ್ಮೇಗೌಡ ಸಭಾಪತಿ ಪೀಠದಲ್ಲಿ ಆಸೀನರಾಗಿದ್ದರು. ಆ ಹಿನ್ನೆಲೆಯಲ್ಲಿ ಕೂಡಲೇ ಸಭಾಪತಿ ಪೀಠದತ್ತ ಧಾವಿಸಿದ ಕಾಂಗ್ರೆಸ್ನ ನಾರಾಯಣಸ್ವಾಮಿ, ನಸೀರ್ ಅಹ್ಮದ್, ಚಂದ್ರಶೇಖರ್ ಪಾಟೀಲ್ ಸೇರಿ ಇನ್ನಿತರರು ಧರ್ಮೇಗೌಡ ಅವರನ್ನು ಎಳೆದು ಕೆಳಗಿಳಿಸಿದರು.
ಅಲ್ಲದೆ, ಮುಚ್ಚಿದ್ದ ಸಭಾಪತಿ ಆಗಮಿಸುವ ದ್ವಾರವನ್ನು ತೆರೆಯಲು ಮುಂದಾದ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಈ ವೇಳೆ ಎನ್.ರವಿಕುಮಾರ್, ಕಾಂಗ್ರೆಸ್ ಸದಸ್ಯರ ಹರಿಶ್ ಅವರನ್ನು ಬಲವಾಗಿ ತಳ್ಳಿದ್ದರಿಂದ ಅವರು ಕೆಳಗೆ ಬಿದ್ದರು. ಅಲ್ಲದೆ, ಕಾಂಗ್ರೆಸ್ನ ನಾರಾಯಣಸ್ವಾಮಿ ಹಾಗೂ ಬಿಜೆಪಿಯ ವೈ.ಎ.ನಾರಾಯಣಸ್ವಾಮಿಯ ಮಧ್ಯೆಯೂ ಪರಸ್ಪರ ಜಪಟಾಪಟಿ, ಅವಾಚ್ಯ ಶಬ್ದಗಳಿಂದಲೂ ನಿಂದನೆ ಮಾಡಿದ್ದು ನಡೆಯಿತು.