×
Ad

ಮುಖ್ಯಕಾರ್ಯದರ್ಶಿ ಹುದ್ದೆಗೆ ಐಎಎಸ್ ವಲಯದಲ್ಲಿ ಪೈಪೋಟಿ !

Update: 2020-12-19 23:31 IST
ವಿಜಯಭಾಸ್ಕರ್ 

ಬೆಂಗಳೂರು, ಡಿ.19: ರಾಜ್ಯ ಮುಖ್ಯಕಾರ್ಯದರ್ಶಿಯಾಗಿರುವ ವಿಜಯಭಾಸ್ಕರ್ ಅವಧಿ ಡಿಸೆಂಬರ್ ಗೆ ಮುಗಿಯಲಿದ್ದು, ಇವರಿಂದ ತೆರವಾಗಲಿರುವ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿಗಳಲ್ಲಿ ಇದೀಗ ಪೈಪೋಟಿ ಶುರುವಾಗಿದೆ ಎನ್ನಲಾಗಿದೆ.

ಸೇವಾ ಅವಧಿ ಮುಂದುವರಿಸುವ ಸಾಧ್ಯತೆಯಿಲ್ಲದ ಕಾರಣ ವಿಜಯಭಾಸ್ಕರ್ ಹಿಂದಕ್ಕೆ ಸರಿದಿದ್ದಾರೆ. ಸೇವಾ ಜ್ಯೇಷ್ಠತೆಯಲ್ಲಿ ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮೊದಲನೆಯವರಾಗಿದ್ದರೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಎರಡನೇಯವರಾಗಿದ್ದಾರೆ.

ಐ.ಎಸ್.ಎನ್.ಪ್ರಸಾದ್ ಹಾಗೂ ವಂದಿತಾ ಶರ್ಮಾ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗುವ ಹೆಸರುಗಳು ಎಂದು ಬಿಂಬಿತವಾಗಿದ್ದು, ಪ್ರದೀಪ್‍ಸಿಂಗ್ ಖರೋಲ ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವುದರಿಂದ ರಾಜ್ಯಕ್ಕೆ ವಾಪಸ್ ಬರುವ ಸಾಧ್ಯತೆಯಿಲ್ಲ. ಆದುದರಿಂದಾಗಿ ಶರ್ಮಾ ಹೆಸರು ಮುಂಚೂಣಿಗೆ ಬಂದಿದೆ.

ಕೆಲವು ಬಾರಿ ಉನ್ನತ ಹುದ್ದೆಗಳಿಗೆ ಸೇವಾಜ್ಯೇಷ್ಠತೆ ಬದಿಗಿಟ್ಟು, ಮೂರು ಅಥವಾ ನಾಲ್ಕನೆಯವರನ್ನು ನೇಮಿಸಿರುವ ಉದಾಹರಣೆಗಳಿವೆ. ಅದೇ ರೀತಿಯಲ್ಲಿ ಈಗ ಪ್ರಯತ್ನಗಳು ಮುಂದುವರಿದಿವೆ. ರವಿಕುಮಾರ್ ಪರ ಒಂದಷ್ಟು ಅಧಿಕಾರಿಗಳು, ವಂದಿತಾ ಶರ್ಮಾ ಮತ್ತು ಪ್ರಸಾದ್ ಪರ ಇನ್ನೊಂದಷ್ಟು ಅಧಿಕಾರಿಗಳು ಲಾಬಿ ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಹಿರಿತನದ ಪಟ್ಟಿಯಲ್ಲಿರುವ ಐಎಎಸ್ ಅಧಿಕಾರಿಗಳೆಂದರೆ ಪಿ.ರವಿಕುಮಾರ್, ವಂದಿತಾ ಶರ್ಮಾ, ಪ್ರದೀಪ್ ಸಿಂಗ್ ಖರೋಲ, ಐ.ಎಸ್.ಎನ್ ಪ್ರಸಾದ್, ಮಹೇಂದ್ರ ಜೈನ್, ರಜನೀಶ್ ಗೋಯಲ್. ಹಿರಿತನವನ್ನೇ ಪರಿಗಣಿಸಿದರೆ ಪಿ.ರವಿಕುಮಾರ್ ಅವರಿಗೆ ಅವಕಾಶಗಳು ಹೆಚ್ಚು. ಅಲ್ಲದೆ, ಈಗ ಮುಖ್ಯಮಂತ್ರಿಯವರ ಆಪ್ತ ಅಧಿಕಾರಿಗಳ ತಂಡದ ಪ್ರಮುಖರೂ ಆಗಿರುವುದರಿಂದ ಇವರಿಗೆ ಅವಕಾಶಗಳು ಹೆಚ್ಚು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News